
ಮಡಿಕೇರಿ ಫೆ.28 NEWS DESK : ಸಂವಿಧಾನ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜದ ಒಳಿತಿಗಾಗಿ ಮಾಧ್ಯಮಗಳು ಬಳಸಿಕೊಳ್ಳುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು. ನಗರದ ಡಾ.ಅಂಬೆಡ್ಕರ್ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಆಯೋಜಿತ ಸಂವಿಧಾನ ಮತ್ತು ಪತ್ರಿಕೋದ್ಯಮದ ಕುರಿತ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ರಾಜಕಾರಣಿಯೂ ತಪ್ಪುಗಳನ್ನು ಮಾಡಿಯೇ ಮಾಡುತ್ತಾನೆ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ, ಅವರಿಗೆ ತಿಳಿಹೇಳುವ ಕೆಲಸವನ್ನು ಮಾಡಬೇಕು. ಈ ಹಂತದಲ್ಲಿ ವ್ಯಕ್ತಿಯ ಗೌರವಕ್ಕೆ ಕುಂದುಂಟಾಗುವಂತೆ ಮಾಡಬಾರದೆಂದು ಸಲಹೆಯನ್ನಿತ್ತ ಅವರು, ಮಾಧ್ಯಮ ಕ್ಷೇತ್ರವನ್ನು ಒಳಗೊಂಡಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಒಟ್ಟಾಗಿ ಮುನ್ನಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಬಲ್ಲುದೆಂದು ದೃಢವಾಗಿ ನುಡಿದರು. ರಾಜಕಾರಣಿಗಳ ನಡೆಗಳನ್ನು ಟೀಕಿಸುವ ಹಂತದಲ್ಲಿ ಅದು ಸಮಾಜದ ಒಳಿತಿಗೆ ಪೂರಕವಾಗಿರಲಿ. ಇಂತಹ ಧನಾತ್ಮಕವಾದ ಟೀಕೆಗಳು ರಾಜಕಾರಣಿಗಳನ್ನು ಉತ್ತಮ ಕೆಲಸಗಳಿಗೆ ಪ್ರೇರೇಪಿಸುತ್ತದೆಂದು ಅಭಿಪ್ರಾಯಿಸಿದ ಅವರು, ಮಾಧ್ಯಮಗಳು ಯಾವತ್ತೂ ಹೊಣೆಗಾರಿಕೆಯಿಂದ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತಾಗಲೆಂದು ಹಾರೈಸಿದರು. ಎಐ ಪ್ರಭಾವದ ನಡುವೆ… ಪ್ರಸ್ತುತ ಜಗತ್ತು ಕೃತಕ ಬುದ್ಧಿ ಮತ್ತೆ(ಎಐ)ಗೆ ತೆರೆದುಕೊಳ್ಳುತ್ತಿದೆ. ಇದನ್ನು ಮೆಡಿಕಲ್, ಕೃಷಿ ಮತ್ತು ಪಶು ಸಂಗೋಪನೆಗಳಲ್ಲಿ ಬಳಸಿಕೊಳ್ಳುವ ಇಂಗಿತವನ್ನು ಪ್ರಧಾನಿಗಳು ವ್ಯಕ್ತಪಡಿಸಿದ್ದಾರೆ. ಇಂತಹ ತಂತ್ರಜ್ಞಾನವನ್ನು ಕೃಷಿಕ ವಲಯದಲ್ಲಿ ಶೇ.1 ರಿಂದ 2 ರಷ್ಟು ಆರ್ಥಿಕವಾಗಿ ಸುಸ್ಥಿರವಾಗಿರುವ ಕೃಷಿಕರಷ್ಟೆ ಬಳಸಲು ಸಾಧ್ಯವಾಗಬಹುದು. ಇಂದಿಗೂ ಕೃಷಿ ಚಟುವಟಿಕೆಗಳಿಗೆ ಬಾಡಿಗೆಗೆ ಟ್ರ್ಯಾಕ್ಟರ್ಗಳನ್ನು ಪಡೆದುಕೊಳ್ಳುವ, ಮೊಬೈಲ್ ಬಳಕೆಯಿಂದ ದೂರವಿರುವ ಬಡ ಕೃಷಿಕರು ಇಂದಿಗೂ ಇದ್ದು, ಇವರು ಎಐ ತಂತ್ರಜ್ಞಾನದ ಸದುಪಯೋಗ ಪಡೆಯಲು ಆರ್ಥಿಕ ಶಕ್ತಿಯನ್ನು ಪಡೆದುಕೊಳ್ಳಲೇಬೇಕಾಗುತ್ತದೆಂದು ತಿಳಿಸುತ್ತಾ, ಎಐ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದರ ಜೊತೆಯಲ್ಲೆ ಮಾಧ್ಯಮವನ್ನು ಒಳಗೊಂಡಂತೆ ಎಲ್ಲಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೆಕಿದೆಯೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಂ.ಎ.ಪೊನ್ನಪ್ಪ ಅವರು ಮಾತನಾಡಿ, ಸಮಾಜದ ಸ್ವಾಸ್ಥ್ಯ, ಸಮಾನತೆ, ಸೌಹಾರ್ದತೆಗಳಿಗೆ ಪೂರಕವಾಗಿ ರಚನೆಯಾಗಿರುವ ಸಂವಿಧಾನದಲ್ಲಿ ಕೊಡಮಾಡಲಾಗಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಸಂರಕ್ಷಣೆಯ ಹೊಣೆಗಾರಿಕೆ ಮಾಧ್ಯಮಗಳ ಮೇಲೂ ಇದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಸಮಾಜದಲ್ಲಿನ ಭ್ರಷ್ಟತೆಯನ್ನು ಬಯಲಿಗೆಳೆಯುವ ಅಧಿಕಾರ ಮಾಧ್ಯಮಗಳಿಗೆ ಇದೆಯಾದರು, ಈ ಹಂತಗಳಲ್ಲಿ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯುಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆಯೆಂದು ಸ್ಪಷ್ಟಪಡಿಸಿದರು. ಪ್ರಾಸ್ತಾವಿಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇ? ಖಾನಂ, ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶೋಷಿತ ಸಮುದಾಯಗಳ ಧ್ವನಿಯಾಗಿ ಅವುಗಳು ಕಾರ್ಯನಿರ್ವಹಿಸುವ ವಿಶ್ವಾಸ ಸದಾ ತಮ್ಮದೆಂದು ತಿಳಿಸಿದರು. :: ಸುಳ್ಳು ಸುದ್ದಿಗಳ ವಿರುದ್ಧ ಸಮರ :: ಆಧುನಿಕ ತಂತ್ರಜ್ಞಾನದ ನಡುವೆ ಸುಳ್ಳು ಸುದ್ದಿ, ತಪ್ಪು ಮಾಹಿತಿಗಳ ವಿರುದ್ಧ ಸಮರ ಸಾರುವ ಪರಿಸ್ಥಿತಿ ಇದೆಯೆಂದು ತಿಳಿಸಿದ ಅವರು, ದೃಶ್ಯ ಮಾಧ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಳಸುವ ಭಾಷೆಯ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ಬಗ್ಗೆ ಗಂಭೀರ ಚಿಂತನೆ ಅವಶ್ಯ. ಮಾಧ್ಯಮಗಳು ಸದಾ ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನಿಲ್ ಎಚ್.ಟಿ., ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸವಿತಾ ರೈ, ಹಿರಿಯ ಪತ್ರಕರ್ತರಾದ ಸಮೀವುಲ್ಲಾ, ರಶ್ಮಿ ಎಸ್., ಎಐ ಪರಿಣಿತರಾದ ಐಐಟಿ ರಾಹುಲ್ ಗುಂಡಾಲ ಉಪಸ್ಥಿತರಿದ್ದರು. ಜಿಲ್ಲಾ ಕಸಾಪದ ತಂಡ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್.ಮಹೇಶ್ ಸ್ವಾಗತಿಸಿ, ಹಿರಿಯ ಪತ್ರಕರ್ತರಾದ ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು.










