ಕುಶಾಲನಗರ, NEWS DESK ಮಾ.02: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ರವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಕಾಸ ರಂಗ ವಾಸವಿ ಕಲಾ ಮಂಡಳಿ ಸಹಕಾರದೊಂದಿಗೆ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮವು ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆಯ ಸಾಹಿತಿ ಭಾರದ್ವಾಜ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕವಿತೆಯ ರಚನೆಯ ಲೋಕದಲ್ಲಿ ಪರಿಶ್ರಮ ಬಹುಮುಖ್ಯ. ಹಿರಿಯ ಕವಿಗಳ ಸಾಧನೆ ಮುಂದಿನ ಯುವಕರಿಗೆ ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದುಕಿನ ಭಾವೈಕ್ಯತೆಯಲ್ಲಿ ಕವಿಗಳ ಪಾತ್ರ ಹಿರಿದು. ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಭಾವೈಕ್ಯತೆಯಿಂದ ಬದುಕಲು ನಮ್ಮ ಹಿರಿಯ ಕವಿಗಳು ತಮ್ಮ ಕೃತಿಗಳ ಮುಖಾಂತರ ಜಗತ್ತಿಗೆ ಉತ್ತಮ ಸಂದೇಶ ಕೊಟ್ಟು ಹೋಗಿದ್ದಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಪ್ರೋ ಕೆ ಎಸ್ ನಿಸಾರ್ ಅಹಮದ್,ಜಿ ಎಸ್ ಸಿದ್ದಲಿಂಗಯ್ಯ,ಹಾಗೂ ಚಿ ಉದಯಶಂಕರ್ ರವರು ತಮ್ಮ ಉತ್ತಮ ಕವನಗಳ ಮುಖಾಂತರ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಅವರುಗಳ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ನಮ್ಮ ಹೊಣೆ ಎಂದು ಭಾರದ್ವಾಜ್ ಹೇಳಿದರು.ಕೂಡಿಗೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ವಿಸ್ತಾರಣಾಧಿಕಾರಿ ಶಬ್ಬೀರ್ ಪಾಷಾ, ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್, ಕುಶಾಲನಗರ ಕರ್ನಾಟಕ ವಿಕಾಸರಂಗ ಉಪಾಧ್ಯಕ್ಷೆ ವಿನಯ ರಾಜಶೇಖರ್ , ವಾಸವಿ ಕಲಾ ಮಂಡಳಿ ಅಧ್ಯಕ್ಷೆ ಲತಾ ರಮೇಶ್, ಬಳಗದ ಪ್ರಮುಖರಾದ ಟಿ.ಕೆ.ಪಾಂಡುರಂಗ, ಕೆ.ಕೆ ನಾಗರಾಜಶೆಟ್ಟಿ, ಉಪಸ್ಥಿತರಿದ್ದರು.
ಮಾಸದ ನೆನಪು ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪ, ಪ್ರೋ ನಿಸಾರ್ ಅಹಮದ್, ಸಾಹಿತ್ಯ ರತ್ನ ಚಿ. ಉದಯಶಂಕರ್, ಡಾ. ಸಿದ್ದಲಿಂಗಯ್ಯ ರವರುಗಳ ಸ್ಮರಣೆಯ ಹಾಡುಗಳನ್ನು ಹಾಡಲಾಯಿತು ಲತಾ ತಂಡವು ಪ್ರಾರ್ಥಿಸಿ, ಉ.ರಾ. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಮಾಲದೇವಿ ಸ್ವಾಗತಿಸಿ, ಕನ್ನಡ ಸಿರಿ ಬಳಗದ ಪ್ರಮುಖರಾದ ಕೆ.ಕೆ.ನಾಗರಾಜಶೆಟ್ಟಿ ವಂದಿಸಿದರು.







