
ಮಡಿಕೇರಿ NEWS DESK ಮಾ.4 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾ.8 ರಂದು ಕೊಡವ ಮಹಿಳೆಯರಿಗೆ ಶೇ.33 ರಷ್ಟು ಆಂತರಿಕ ಮೀಸಲಾತಿ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಈ ಬಾರಿ “IWD 2026 – Give To Gain” ಎಂಬ ಘೋಷವಾಕ್ಯದಡಿ “ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ನಡೆಯುತ್ತಿದೆ. ಇದೇ ಸಂದರ್ಭ ಸಿಎನ್ಸಿಯು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಆವರಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಷ್ಟçಪತಿ ಹಾಗೂ ಸರಕಾರಕ್ಕೆ ಸಲ್ಲಿಸಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಈ ವರ್ಷದ “”Give To Gain” ಎಂಬ ಘೋಷವಾಕ್ಯವು ಉದಾರತೆ, ಸಹಯೋಗ ಮತ್ತು ಹಂಚಿಕೆಯ ಪ್ರಗತಿಯಲ್ಲಿ ಬೇರೂರಿರುವ ಮನೋಭಾವಕ್ಕೆ ಕರೆ ನೀಡುತ್ತದೆ. ಇದು ಸಿಎನ್ಸಿ ಸಂಘಟನೆಯ ಉದ್ದೇಶಗಳೊಂದಿಗೆ ಸ್ಪಂದಿಸುತ್ತದೆ. ಸೂಕ್ಷ್ಮಾತಿ ಸೂಕ್ಷ್ಮ ಆದಿಮಸಂಜಾತ ಏಕ-ಜನಾಂಗೀಯ ಅನಿಮಿಸ್ಟಿಕ್ ಕೊಡವ ಸಮುದಾಯದ, ವಿಶೇಷವಾಗಿ ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ. ಕೊಡವ ಪರಂಪರೆಯ ಭೂಮಿ, ಮಾತೃಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ. ಭಾರತೀಯ ಸಂವಿಧಾನವು ಖಾತರಿಪಡಿಸಿದ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ. ಸಂವಿಧಾನದ 6 ಮತ್ತು 8ನೇ ಶೆಡ್ಯೂಲ್ಗಳೊಂದಿಗೆ ವಿಧಿ 244, 371 ರ ಅಡಿಯಲ್ಲಿ “ಕೊಡವಲ್ಯಾಂಡ್’ ಭೌಗೋಳಿಕ-ರಾಜಕೀಯ ಸ್ವಾಯತ್ತತೆ” ನೀಡಬೇಕು. ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳು, ಸ್ವಯಂ ಆಡಳಿತ ಮತ್ತು ಸಂಸತ್ತು ಹಾಗೂ ವಿಧಾನಸಭೆಯಲ್ಲಿ ಸಿಕ್ಕಿಂ ನ ಭೌದ್ದ ಭಿಕ್ಷುಗಳಿಕೆ ಒಡ ಮಾಡಿರುವ “ಸಂಘ” ಎನ್ನುವ ಅದೃಶ್ಯ ಮತ ಕ್ಷೇತ್ರದ ಮಾದರಿಯಲ್ಲಿ ವಿಶೇಷ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ವಿಶ್ವಸಂಸ್ಥೆಯ INDEGENOUS ಸಮಾವೇಶದಲ್ಲಿ ಗುರುತಿಸುವಿಕೆ ಮತ್ತು ಕೊಡವ ಜನಾಂಗೀಯ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ST) ವರ್ಗೀಕರಣವಾಗಬೇಕು. 2027ರ ರಾಷ್ಟ್ರೀಯ ಜನಗಣತಿ ಸಂಧರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅಳವಡಿಸಿಸಬೇಕು. ಕೊಡವರ ನೈಜ ಚರಿತ್ರೆಯನ್ನು ಬಿಂಬಿಸುವ ದಾಖಲಾತಿಗಳನ್ನು ಕಳೆದ ಕೆಲವು ವರ್ಷಗಳಿಂದ ಬುಡಮೇಲು ಮಾಡಿ, ಕೊಡವರ ಕುರಿತು ಸುಳ್ಳು ಚರಿತ್ರೆಯನ್ನು ಕೆಲವರು ರಾಜ್ಯ ಪತ್ರಾಗಾರ ಮತ್ತು ಪ್ರಾಚ್ಯ ಇಲಾಖೆಯಲ್ಲಿ ತುರುಕಿದ್ದಾರೆ. ಆದ್ದರಿಂದ ಕೊಡವರ ನೈಜ ಇತಿಹಾಸವನ್ನು ಪುನರ್ ಸ್ಥಾಪಿಸಬೇಕು. ದೇಶಾದ್ಯಂತ ಕೊಡವ ಮಹಿಳೆಯರಿಗೆ ಶೇ.33 ರಷ್ಟು ಆಂತರಿಕ ಮೀಸಲಾತಿ ಘೋಷಿಸಬೇಕು. ತೆರಿಗೆ ಪಾವತಿಸದ ನೆಪದಲ್ಲಿ ಪರಕೀಯ ನಿರಂಕುಶ ಆಡಳಿತಗಾರರು ಹಾಗೂ ಬ್ರಿಟಿಷ್ ವಸಾಹತುಶಾಹಿ ಶಕ್ತಿಗಳು ಮುಟ್ಟುಗೋಲು ಹಾಕಿಕೊಂಡ, ಸ್ವಾಧೀನಪಡಿಸಿಕೊಂಡ ಮತ್ತು ಅಡಮಾನವಿಟ್ಟ ಕೊಡವ ಪೂರ್ವಜರ ಪರಂಪರೆಯ ಆಸ್ತಿಗಳ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ಕೊಡವ ಮಹಿಳೆಯರ ಪರವಾದ ಬೇಡಿಕೆಗಳನ್ನು ಮಂಡಿಸುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.








