ಕುಶಾಲನಗರ : ಬಾಹ್ಯ ದೇವಾಲಯಗಳನ್ನು ಧಿಕ್ಕರಿಸಿ ಅಂತರಂಗದ ಅರಿವಿಗೆ ಹೆಚ್ಚು ಒತ್ತು ನೀಡಿದ ಶರಣರು ವಚನಗಳ ಮೂಲಕ ಹಚ್ಚಿರುವ ಮಾನವತೆಯ ದೀಪ ಎಂದಿಗೂ ಆರದ ದೀಪ ಎಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ಬಣ್ಣಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೊರೆನೂರು ವಿರಕ್ತ ಮಠದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಶ್ರೀಮಠದ ಮಹಾಂತ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಹುಣ್ಣಿಮೆಯ ಚಿಂತನಾಗೋಷ್ಠಿಯಲ್ಲಿ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಅರಿವೇ ನುಡಿ ಜ್ಯೋತಿರ್ಲಿಂಗ.
ನಾವಾಡುವ ಮಾತುಗಳು ಮುತ್ತಿನ ಹಾರದಂತಿರಬೇಕು.
ಇವನಾರವ ಎನ್ನದೇ ನಮ್ಮವ ಎಂದು ಅಪ್ಪುವ ಮೂಲಕ ವಿಶ್ವಮಾನವರಾಗಬೇಕು.

ಇತರರಿಗೆ ಯಾವುದೇ ಕೆಡುಕು ಬಯಸದೆ ಸರ್ವ ಹಿತ ಬಯಸುವ ಶರಣರ ಚಿಂತನೆಗಳು ಸರ್ವಕಾಲಕ್ಕೂ ಮಾನವೀಯ ಬದುಕಿಗೆ ದಿವ್ಯ ಔಷಧಿ ಎಂದರು.
ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕಾ, ಆಯ್ದಕ್ಕಿ ಲಕ್ಕಮ್ಮ ಮೊದಲಾದ ಶರಣರ ಚಿಂತನೆಗಳನ್ನು ಎಲ್ಲರೂ ಅರಿಯುವ ಮೂಲಕ ನೆಮ್ಮದಿಯ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಇಂದಿನ ಯುವ ಜನಾಂಗ ಸಂಸ್ಕಾರ ಹೀನರಾಗುತ್ತಿರುವುದು ಬೇಸರದ ಸಂಗತಿ. ಶರಣರ ಚಿಂತನೆಗಳ ಬೀಜಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಶಾಲಾ ಕಾಲೇಜುಗಳಲ್ಲಿ ಬಿತ್ತಿದರೆ ಮಾತ್ರ ಉತ್ತಮ ಸಂಸ್ಕಾರಗಳೆಂಬ ಫಸಲು ಬರುತ್ತದೆ.
ಮನೆಗಳಲ್ಲಿ ತಾಯಂದಿರು ತೊಟ್ಟಿಲ ಮಕ್ಕಳಿಂದಲೇ ವಚನಗಳನ್ನು ಹೇಳಿ ಬೆಳೆಸಿದರೆ ಅಂತಹ ಮಕ್ಕಳು ಸನ್ಮಾರ್ಗದಲ್ಲಿ ಸಾಗುತ್ತಾರೆ ಎಂದು ಶ್ರೀ ಗಳು ವ್ಯಾಖ್ಯಾನಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ
ಮಠ – ಮಂದಿರಗಳು, ದೇವಾಲಯಗಳಿಗೆ ಹೆಚ್ಚಾಗಿ ಧಾವಿಸುವ ಮೂಲಕ ಸತ್ ಚಿಂತನೆ, ಸದಾಚಾರಗಳಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ವೀರಶೈವ ಸರ್ಕಾರಿ ನೌಕರರ ಸಂಘದ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾದ ಎಸ್.ನಂದೀಶ್, ಕಾರ್ಯದರ್ಶಿ ಶಿವಲಿಂಗು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಣೇಶ,
ತೊರೆನೂರು ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಜಗದೀಶ್, ಮರೂರು ಪ್ರಗತಿ ಪರ ಕೃಷಿಕ ಹೆಚ್.ಎಸ್.ನಾಗರಾಜು, ಕೊಡಗು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು, ವೀರಶೈವ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಣೇಶ್, ಕೃಷಿಕರಾದ ಮಣಜೂರು ಗುರುಲಿಂಗಪ್ಪ, ತೊರೆನೂರು ಸಹಕಾರ ಸಂಘದ ನಿವೃತ್ತ ಸಿಇಒ ಚಂದ್ರಶೇಖರ್ ಇದ್ದರು.







