ಮಡಿಕೇರಿ, NEWS DESK ಮಾ.5 : ವಿಶ್ವದ ಕ್ರೀಡಾಕ್ಷೇತ್ರದ ಗಮನ ಸೆಳೆದಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವವನ್ನು ಈ ಬಾರಿ ಕೋಕೇರಿ ಗ್ರಾಮದ ಚೇನಂಡ ಕುಟುಂಬಸ್ಥರು ಆಯೋಜಿಸಿದ್ದಾರೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಹಬ್ಬ ನಡೆಯಲಿದ್ದು, ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ಮಾ.20 ಕೊನೆಯ ದಿನವಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಕಿ ಉತ್ಸವದ ಕಾರ್ಯದರ್ಶಿ ಸಿ.ಎಸ್.ಮಧು ಮಾದಯ್ಯ ನಾಪೋಕ್ಲುವಿನಲ್ಲಿ ಒಟ್ಟು ನಾಲ್ಕು ಮೈದಾನಗಳಲ್ಲಿ ವಿಜೃಂಭಣೆಯಿಂದ ನಡೆಯುವ 26ನೇ ವರ್ಷದ ಚೇನಂಡ ಕಪ್ ಹಾಕಿ ಉತ್ಸವದ ಕುರಿತು ಮಾಹಿತಿ ನೀಡಿದರು.
ಈ ಬಾರಿಯ ಹಾಕಿ ಉತ್ಸವದಲ್ಲಿ 400 ಪುರುಷ ಹಾಗೂ 120 ಮಹಿಳಾ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೂರು ಮೈದಾನಗಳ ತಯಾರಿ ಕಾರ್ಯ ಭರದಿಂದ ಸಾಗಿದ್ದು, 4ನೇ ಮೈದಾನವನ್ನು ಕುಂಡ್ಯೋಳಂಡ ಕುಟುಂಬಸ್ಥರು ನಿರ್ಮಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 33 ನೋಂದಣಿ ಕೇಂದ್ರಗಳಲ್ಲಿ ತಂಡಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆನ್ ಲೈನ್ ಮೂಲಕವೂ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಏ.5 ರಂದು ಹಾಕಿ ಉತ್ಸವ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ, ಮೇ 2 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಟೆನ್ನಿಸ್ ಪಟು ಪದ್ಮಶ್ರೀ ಪುರಸ್ಕೃತ ಕೋಕೇರಿ ಗ್ರಾಮದ ಮಚ್ಚಂಡ ರೋಹನ್ ಬೋಪಣ್ಣ ಅವರನ್ನು ಸನ್ಮಾನಿಸಲಾಗುವುದು.
ಹಾಕಿ ಉತ್ಸವ ಕೇವಲ ಹಾಕಿ ಪಂದ್ಯಾಟಕ್ಕೆ ಸೀಮಿತವಾಗಿರದೆ ಮೆರಥಾನ್ 2*2, ರಿಲೇ 4*100 ಹಾಗೂ ಇತರ ಕ್ರೀಡೆಗಳನ್ನು ಕೂಡ ಆಯೋಜಿಸಲು ನಿರ್ಧರಿಸಲಾಗಿದೆ. ಕುಂಡ್ಯೋಳಂಡ ಕುಟುಂಬಸ್ಥರು ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಡೆಸಿದ “ಆಟ್ ಪಾಟ್ ಪಡಿಪು’ ಕಾರ್ಯಕ್ರಮವನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಅಲ್ಲದೆ ಕಳೆದ ವರ್ಷ ಮುದ್ದಂಡ ಕುಟುಂಬಸ್ಥರು ಆಯೋಜಿಸಿದ್ದ ಅತ್ಯುತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ಈ ಬಾರಿಯೂ ಅಳವಡಿಸಿಕೊಳ್ಳುತ್ತೇವೆ. ನಮ್ಮ ಎಲ್ಲಾ ಪ್ರಯತ್ನಗಳಿಗೆ ಜಿಲ್ಲೆಯ ಇಬ್ಬರು ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಮತ್ತು ಹಾಕಿ ಕರ್ನಾಟಕದ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸಿ.ಎಸ್.ಮಧು ಮಾದಯ್ಯ ವಿವರಿಸಿದರು.

*ಹಾಕಿ ತರಬೇತಿ*
ಜನವರಿ ಮೊದಲ ವಾರದಲ್ಲಿ ಇದೇ ಪ್ರಥಮ ಬಾರಿಗೆ ಕೊಡಗಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಹಾಕಿ ಪಂದ್ಯಾಟವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ 10 ರಿಂದ 15 ವರ್ಷದೊಳಗಿನ 24 ಉತ್ತಮ ಹಾಕಿಪಟುಗಳನ್ನು ಆಯ್ಕೆ ಮಾಡಲಾಯಿತು. ಇವರಿಗೆ ಮಾ.25 ರಿಂದ ಸುಮಾರು ಒಂದು ತಿಂಗಳ ಕಾಲ ನಾಪೋಕ್ಲುವಿನಲ್ಲಿ ನುರಿತ ಹಾಕಿಪಟುಗಳಿಂದ ತರಬೇತಿ ನೀಡಲಾಗುವುದು ಮತ್ತು ಅವರ ಮುಂದಿನ ಕ್ರೀಡಾ ಕ್ಷೇತ್ರದ ಭವಿಷ್ಯಕ್ಕೆ ಮುನ್ನುಡಿ ಬರೆಯಲಾಗುವುದು ಎಂದರು.
ಈ ರೀತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಕ್ರೀಡಾಸಕ್ತರು 8277235111 ಮೊಬೈಲ್ ಸಂಖ್ಯೆಯನ್ನು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯೊಳಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
*ಹಾಡು ಬಿಡುಗಡೆ*
ಇದೇ ಸಂದರ್ಭ ಚೇನಂಡ ಕಪ್ ಹಾಕಿ ಉತ್ಸವದ ಕುರಿತು ಕ್ಯಾಪ್ಟನ್ ಬಿದ್ದಂಡ ನಾಣಯ್ಯ ಅವರು ರಚಿಸಿ, ಗಾಯಕಿಯರಾದ ರಶ್ಮಿ ಕಾರ್ಯಪ್ಪ ಹಾಗೂ ವಿದ್ಯಾ ಜಗದೀಶ್ ಹಾಡಿರುವ ಹಾಡನ್ನು ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಕಂಬಣಿ ಕರುಂಬಯ್ಯ ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಅಧ್ಯಕ್ಷ ದೀನಾ ಚಂಗಪ್ಪ, ಸಹ ಕಾರ್ಯದರ್ಶಿ ತಮ್ಮಿ ತಮ್ಮಯ್ಯ, ಸದಸ್ಯ ರೋಹನ್ ಪೊನ್ನಯ್ಯ, ನಂದ ಜಗದೀಶ್, ಗೀತೆ ರಚನೆಕಾರ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಗಾಯಕಿಯರಾದ ರಶ್ಮಿ ಕಾರ್ಯಪ್ಪ ಹಾಗೂ ವಿದ್ಯಾ ಜಗದೀಶ್ ಉಪಸ್ಥಿತರಿದ್ದರು.







