
ಮಡಿಕೇರಿ ಮಾ.7 NEWS DESK : ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಭಾಗಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಈ ಭಾಗದ ದಶಕಗಳ ಸಮಸ್ಯೆಯಾದ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಸರಕಾರ ಹಮ್ಮಿಕೊಂಡಿರುವ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಯೋಜನೆಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಯೂ ರೂ.88 ಲಕ್ಷಗಳಲ್ಲಿ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ಒಟ್ಟು ಬ್ಯಾರಿಕೆಡ್ ನಿರ್ಮಾಣಕ್ಕಾಗಿ ರೂ.20 ಕೋಟಿ ಮೀಸಲಿರಿಸಿದೆ. ಬಂಬು ಕಾರ್ಡ್ ಪೈಸಾರಿ ಭಾಗದ ಸುಮಾರು 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಬಂಬುಕಾಡು ಪೈಸಾರಿಯಿಂದ ಕಿಸಾನ್ ತೋಟದ ಮೂಲೆಯ ತನಕ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾರ್ಯಕ್ರಮ ಇದಾಗಿದ್ದು, ತಿತಿಮತಿ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಅನೇಕ ವೈಜ್ಞಾನಿಕ ಯೋಜನೆಗಳನ್ನು ರೂಪಿಸುತ್ತಿದ್ದು, ಇಲ್ಲಿಯ ಸ್ಥಳೀಯರನ್ನು ನಿರಂತರವಾಗಿ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ತನ್ನ ಹಾಗೂ ಸರಕಾರದ ಇಚ್ಛೆಯಾಗಿದೆ. ಈ ಸಲುವಾಗಿ ತಾನು ಸಾಧ್ಯ ಇರುವ ಎಲ್ಲಾ ಮಾರ್ಗವನ್ನು ಅಳವಡಿಸಲು ಸಿದ್ಧ. ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರಾದ ಮಿದೇರೀರ ನವೀನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ವಲಯ ಅಧ್ಯಕ್ಷರಾದ ನವೀನ್, ಮಾಯಮುಡಿ ಪಂಚಾಯಿತಿ ಅಧ್ಯಕ್ಷರು ಹಾಗೂ ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಟಾಟು ಮೊಣಪ್ಪ, ಜಿಲ್ಲಾ ಗ್ಯಾರಂಟಿ ಯೋಜನಾ ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಂಕಜ, ಪಕ್ಷದ ಮುಖಂಡರು ಅಜ್ಜಿಕುಟ್ಟಿರ ಗಿರೀಶ್, ವಿಲ್ಸನ್, ಮಧ್ಯಸ್ತ, ಫಿಲೋಮಿನಾ, ಅಪ್ರೂಜ್, ಅರಣ್ಯ ಅಧಿಕಾರಿಗಳು, ಐಟಿಡಿಪಿ ಇಲಾಖೆಯ ಅಧಿಕಾರಿ ಹಾಜರಿದ್ದರು.









