
ಸೋಮವಾರಪೇಟೆ ಮಾ.9 NEWS DESK : ರಾಜ್ಯ ಸರ್ಕಾರ ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಬಡ ರೈತರ ಬಿಪಿಎಲ್ ಪಡಿತರ ಚೀಟಿಗಳನ್ನು ಅವೈಜ್ಞಾನಿಕವಾಗಿ ಎಪಿಲ್ ಕಾರ್ಡ್ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರಪೇಟೆ ಮಂಡಲ ಯುವ ಮೋರ್ಚಾ ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಈ ಸಂದರ್ಭ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಕೊಡಗು ಜಿಲ್ಲೆಯಲ್ಲಿ ಸಾವಿರಾರು ಬಿಪಿಎಲ್ ಪಡಿತರ ಕಾರ್ಡ್ಗಳು ರದ್ದಾಗಿದ್ದು, ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ 975 ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದು, ಇದರಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅರ್ಹವಾಗಿರುವ ಎಷ್ಟೋ ಕುಟುಂಬಗಳು ತಮ್ಮ ಪಡಿತರ ಚೀಟಿಯನ್ನು ಕಳೆದುಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವು ಕುಟುಂಬಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಚೌಡ್ಲು ಗ್ರಾ ಪಂ ವ್ಯಾಪ್ತಿಯ ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಗೌಡಳ್ಳಿ, ಮಾದಾಪುರ, ಟೌನ್ ಪಂಚಾಯಿತಿ ಸೇರಿದಂತೆ ಸೋಮವಾರಪೇಟೆ ತಾಲೂಕಿನ ಸುಮಾರು 975 ಕಾರ್ಡ್ ಗಳನ್ನು ಅನರ್ಹಗೊಳಿಸಲಾಗಿದೆ ಎಂದರು. ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಬೇಕಿರುವ ಮಾನದಂಡವನ್ನು ಕೊಡಗು ಜಿಲ್ಲೆಗೆ ಸ್ವಲ್ಪ ರಿಯಾಯಿತಿ ಮಾಡಿಕೊಡಬೇಕು. ಬಡ ರೈತರು, ಗಾರೆ ಕೆಲಸದವರು, ಕೂಲಿ ಕಾರ್ಮಿಕರು, ತಮ್ಮ ತೋಟಗದ್ದೆ ಹಾಗೂ ಕೂಲಿ ಕೆಲಸಕ್ಕೆ ಹೋಗಲು ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದು ಇಂತಹವರ ಕಾರ್ಡನ್ನು ರದ್ದಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇವರೆಗೂ ಬಿಪಿಎಲ್ ಕಾರ್ಡ್ ನೋಂದಣಿ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿಲ್ಲ. ಇತ್ತೀಚಿನ ವರ್ಷಗಳಿಂದ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವುದು ಮತ್ತು ಹೊಸದಾಗಿ ಕಾರ್ಡ್ಗಳನ್ನು ವಿತರಣೆ ಮಾಡದೇ ಇರುವುದು ಮೇಲ್ನೋಟಕ್ಕೆ ಜನರಿಗೆ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಸಾಧ್ಯವಾಗದೆ. ಹೀಗೆ ಕಾಡ್ಗಳನ್ನೇ ರದ್ದು ಮಾಡುತ್ತಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೃಷ್ಣ ಮೂರ್ತಿ, ಇವರೆಗೆ 1032 ಅರ್ಜಿಗಳು ಅನರ್ಹಗೊಳಿ ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಅದಾಯ ತೆರಿಗೆ ಇಲಾಖೆಯ ನಿಯಮನುಸಾರ ಆದಾಯ ತೆರಿಗೆ ಪಾವತಿ, ಸರ್ಕಾರಿ ಕೆಲಸ, 6 ಎಕರೆ ಗಿಂತ ಹೆಚ್ಚು ಜಮೀನು ಹೊಂದಿರಬಾರದು ಎಂಬ ಮಾನದಂಡವನ್ನು ಆದರಿಸಿ, ಬಿಪಿಎಲ್ ಪಡಿತರ ಚೀಟಿ ರದ್ದಾಗುತ್ತಿವೆ. ರಾಜ್ಯ ಸರ್ಕಾರದಿಂದ ಮತ್ತೆ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಇದ್ದು ನಂತರ ರದ್ದಾಗಿದ್ದಲ್ಲಿ ಅವರು ಅಗತ್ಯ ದಾಖಲೆಗಳೊಂದಿಗೆ 45 ದಿನದೊಳಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದರು. ಇವರೆಗೆ 255 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 90 ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಕಳಿಸಲಾಗಿದೆ. ಉಳಿದ 165 ಅರ್ಜಿಗಳನ್ನು ಸ್ಥಳಪರಿಶೀಲಿಸಿ ಬಗೆಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿ ಪ್ರಮುಖರಾದ ದರ್ಶನ್ ಜೋಯಪ್ಪ, ಬಿ.ಜೆ.ದೀಪಕ್, ಮೋಕ್ಷಿಕ್, ಶ್ರೀನಿಧಿ ಲಿಂಗಪ್ಪ, ಮಂಜುಳಾ ಸುಬ್ರಮಣಿ, ತಂಗಮ್ಮ, ಚಂದ್ರಶೇಖರ್ ಹೇರೂರು, ಕೃಷ್ಣಪ್ಪ ಪ್ರತಿಭಟನೆಯಲ್ಲಿ ಇದ್ದರು.









