
ಮಡಿಕೇರಿ ಮಾ.11 NEWS DESK : ಜಿಲ್ಲಾಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾಪವಿದ್ದು, ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗುತ್ತಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಡೀನ್ ಮತ್ತು ನಿರ್ದೇಶಕ ಡಾ. ಲೋಕೇಶ್ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಸ್ಪತ್ರೆ ಡೀನ್ ಅವರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಲಾದ ವಿಷಯಗಳ ಕುರಿತ ಪ್ರಗತಿ ಹಾಗೂ ಅನುಷ್ಠಾನÀ ಕುರಿತು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಲೋಕೇಶ್, ಪ್ರಸ್ತುತ ಜಿಲ್ಲಾಸ್ಪತ್ರೆ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದೆ. ವೈದ್ಯರ ಕೊರತೆಯಿದ್ದರೂ ಇರುವ ವೈದ್ಯರಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರೇಡಿಯೋಲಾಜಿಸ್ಟ್ ಹೊರತುಪಡಿಸಿ ಬೇರೆಲ್ಲ ವಿಭಾಗದಲ್ಲೂ ವೈದ್ಯರಿದ್ದು, ಹುದ್ದೆ ಭರ್ತಿಗೆ ಆಹ್ವಾನಿಸಲಾಗಿದೆ. ಆದರೆ, ಕೊಡಗಿಗೆ ನಿಯೋಜನೆಗಳು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ, ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣದೊಂದಿಗೆ ನರ್ಸಿಂಗ್, ಪ್ಯಾರ ಮೆಡಿಕಲ್, ಅಲೈಡ್ ಸೈನ್ಸ್ ಕೋರ್ಸ್ಗಳು ಲಭ್ಯವಿವೆ. ಸ್ನಾತಕೋತ್ತರ ವೈದ್ಯರು ಕೂಡ ಚಿಕಿತ್ಸೆಗೆ ನೆರವಾಗುತ್ತಿರುವುದರಿಂದ ವೈದ್ಯರ ಕೊರತೆ ಒಂದಷ್ಟು ನೀಗಿದೆ ಎಂದರು. ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ವೈದ್ಯಕೀಯ ಕಾಲೇಜು ಸುಪರ್ದಿಯಲ್ಲಿರುವ ಜ. ತಿಮ್ಮಯ್ಯ ವೃತ್ತದ ಬಳಿ ಇರುವ ಐಬಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾಪವಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದರೆ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ದೊರೆಯಲಿದೆ ಎಂದು ಹೇಳಿದರು. ಅರ್ಥೋಪೆಡಿಕ್ ಸಮಸ್ಯೆಗೆ ರೋಬಾಟಿಕ್ ಸರ್ಜರಿಗೆ ಪೂರಕ ಯಂತ್ರೋಪಕರಣ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈಗಾಗಲೇ ಕಿದ್ವಾಯಿ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆ ವ್ಯವಸ್ಥೆ ಇದೆ. ಮೆಮೋಗ್ರಾಫಿ ಚಿಕಿತ್ಸೆ, ಹೈಟೆಕ್ ಆ್ಯಂಬ್ಯುಲೆನ್ಸ್, ಡೇ ಕೇರ್ ಕಿಮೋ ಥೆರಪಿ ಆರಂಭಕ್ಕೂ ಕ್ರಮವಹಿಸಲಾಗುವುದು ಎಂದರು. ರೂ.29 ಕೋಟಿ ವೆಚ್ಚದದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಹಾಗೂ ಕಾವೇರಿ ಬ್ಲಾಕ್ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಮೇ ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ತುರ್ತು ಚಿಕಿತ್ಸೆಗೆ ಕ್ರಿಟಿಕಲ್ ಕೇರ್ ಸೆಂಟರ್ ಸಹಾಯವಾಗಲಿದ್ದು, ಹೊಸ ಕಾವೇರಿ ಬ್ಲಾಕ್ನಲ್ಲಿ ಮತ್ತಷ್ಟು ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯೊಂದಿಗೆ ನಿಗಾ ಘಟಕವನ್ನು ಹೆಚ್ಚಿಸಲಾಗುವುದು. ಶಸ್ತ್ರ ಚಿಕಿತ್ಸೆ ಕೊಠಡಿಯೂ ಹೆಚ್ಚಾಗಲಿದೆ ಎಂದು ಡಾ. ಲೋಕೇಶ್ ಮಾಹಿತಿ ನೀಡಿದರು. ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಅತ್ಯಂತ ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತಿದೆ. ಕ್ರಿಟಿಕಲ್ ಕೇರ್ ಸೆಂಟರ್ನಿಂದಲೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ ಮಾತನಾಡಿ, ಸ್ಕ್ಯಾನಿಂಗ್ ಸೇವೆಗಳನ್ನು ಒಂದೇ ಕಟ್ಟಡದಲ್ಲಿ ತರಲಾಗುವುದು. ಒಪಿಡಿ ಕೌಂಟರ್ಗಳನ್ನು ಹೆಚ್ಚಿಸಲಾಗುವುದು. ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು. ಐಟಿಡಿಪಿ ಇಲಾಖೆಯಿಂದ 2 ಸಿಬ್ಬಂದಿ ನಿಯೋಜನೆಯಾಗಲಿದ್ದು, ಅವರಿಂದಲೂ ರೋಗಿಗಳಿಗೆ ಸಹಾಯ ದೊರೆಯಲಿದೆ ಎಂದು ವಿವರಿಸಿದರು. ಇದೇ ಸಂದರ್ಭ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 300 ಹಾಸಿಗೆ ಸಾಮಥ್ರ್ಯದ ಕಾವೇರಿ ಬ್ಲಾಕ್, ಕ್ರಿಟಿಕಲ್ ಕೇರ್ ಸೆಂಟರ್, ಅಭಿವೃದ್ಧಿಗೊಂಡ ಹೆರಿಗೆ ಕೇಂದ್ರ, ಮಕ್ಕಳ ಒಳರೋಗ ವಿಭಾಗ ಹಾಗೂ 2 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮಿದುಳು ಆರೋಗ್ಯ ಕ್ಲಿನಿಕ್ ಜಿಲ್ಲಾ ಘಟಕವನ್ನು ಪತ್ರಕರ್ತರು ವೀಕ್ಷಿಸಿದರು. ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗೆ, 14 ರಿಂದ 16 ವರ್ಷ ವಯಸ್ಸಿನ ಬಾಲಕಿಯರಿಗೆ ಕೇಂದ್ರ ಸರಕಾರದ ವತಿಯಿಂದ ಹೆಚ್.ಪಿ.ವಿ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಲ್ಲಿ ಇದೇ ಸಂದರ್ಭ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಲಸಿಕೆಯ 100 ಡೋಸ್ಗಳು ಸದ್ಯಕ್ಕೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದು, 14 ರಿಂದ 16 ವರ್ಷದ ಬಾಲಕಿಯರು ಈ ಉಚಿತ ಲಸಿಕೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಅವರು ಮಾಹಿತಿ ನೀಡಿದರು. ಈ ಸಂದರ್ಭ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಧನಂಜಯ್, ಡಾ. ಅಭಿನಂದನ್ ಹಾಗೂ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದ ವೈದ್ಯ ಡಾ. ಪವನ್ ಹಾಜರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ಕಾರ್ಯದರ್ಶಿ ರಿಜ್ವಾನ್ ಹುಸೇನ್, ಮಲ್ಲಿಕಾರ್ಜುನ್, ನಿರ್ದೇಶಕರುಗಳಾದ ಜೈರುಸ್ ಥೋಮಸ್ ಅಲೆಗ್ಸಾಂಡರ್, ಜಿ.ಆರ್. ಪ್ರಜ್ವಲ್, ಶಿವಕುಮಾರ್, ರಂಗಸ್ವಾಮಿ, ಅಬ್ದುಲ್ಲಾ, ವಿಷ್ಮಾ, ಸಂತೋಷ್ ರೈ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್ ಸೇರಿದಂತೆ ಸದಸ್ಯರು ಹಾಜರಿದ್ದರು. ಸಂಪರ್ಕ ಸಂಖ್ಯೆ : ತುರ್ತು ವೈದ್ಯಕೀಯ ಸೇವೆ ಹಾಗೂ ಆಸ್ಪತ್ರೆಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಡಾ. ಲೋಕೇಶ್ ಮನವಿ ಮಾಡಿದರು.
ಆರ್ಎಂಓ ಡಾ. ಧನಂಜಯ್ 9945607166, ಡಾ. ಅಭಿನಂದನ್ 9844790767, ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್ 9448984095, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ 9482111211 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.









