
ಮಡಿಕೇರಿ ಮಾ.16 NEWS DESK : ಹೋಂ ನರ್ಸಿಂಗ್ ಕೇರ್ ಟೇಕರ್ ಆಗಿ ವಯೋವೃದ್ಧರೊಬ್ಬರ ಮನೆಯಲ್ಲಿ ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (27) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ ರೂ.5,09,000 ನಗದು, 137 ಗ್ರಾಂ ಚಿನ್ನಾಭಾರಣಗಳು ಹಾಗೂ 1 ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯ ನಿವಾಸಿ ಪಾರ್ಥಸಾರಥಿ ಎಂಬುವವರ ಅಣ್ಣ ವಯೋವೃದ್ಧರಾಗಿದ್ದು, ಇವರನ್ನು ನೋಡಿಕೊಳ್ಳುವ ಸಲುವಾಗಿ ಹೋಂ ನಸಿರ್ಂಗ್ (Care Taker) ಕೆಲಸಕ್ಕಾಗಿ ಕೊಪ್ಪಳ ಜಿಲ್ಲೆ ಮೂಲದವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ನೇಮಕಗೊಂಡಿದ್ದ. ಈತ ಇದೇ ಫೆ.28 ರಂದು ಮನೆಯಲ್ಲಿಟ್ಟಿದ್ದ ಅಂದಾಜು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ರೂ.5,50,000 ನಗದನ್ನು ಕಳವು ಮಾಡಿದ್ದಾನೆ ಎಂದು ಆರೋಪಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಅಧಿಕಾರಿಗಳು ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿದ್ದರು. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿದಾಗ ಆರೋಪಿ ಭದ್ರಪ್ಪ ಬಸಪ್ಪ ಹಡಪದ ಎಂದು ತಿಳಿದು ಬಂತು. ಈತ ಮಹಾಂತೇಶ ಪೂಜಾರ ಎಂಬುವವರ ಆಧಾರ್ ಕಾರ್ಡ್ ಪ್ರತಿಯನ್ನು ಬಳಸಿ ಹೋಂ ನಸಿರ್ಂಗ್ ಕೆಲಸಕ್ಕೆ ಸೇರಿರುವುದು ಹಾಗೂ 2025 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಡಿವೈಎಸ್ಪಿ ಸೂರಜ್ ಪಿ.ಎ, ಮಡಿಕೇರಿ ನಗರ ವೃತ್ತದ ಸಿಪಿಐ ರಾಜು ಪಿ.ಕೆ, ಬೆರಳು ಮುದ್ರೆ ಘಟಕದ ಪಿಐ ರಾಮಕೃಷ್ಣ, ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಅನ್ನಪೂರ್ಣ ಎಸ್.ಎಸ್, ಎಎಸ್ಐ ರಾಮಪ್ಪ, ಸಿಬ್ಬಂದಿಗಳಾದ ಪ್ರಭಾಕರ್, ಗಿರೀಶ್, ಕಿರಣ್, ಕೃಷ್ಣಮೂರ್ತಿ, ಸುಧೀರ್, ಮುನೀರ್, ರಂಜಿತ್, ಪ್ರದೀಪ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ, ಫಾರೆನ್ಸಿಕ್ ವಿಭಾಗದ ಜಯಕುಮಾರ್, ಸಂತೋಷ, ಡಿಸಿಆರ್ಬಿ ವಿಭಾಗದ ಪ್ರವೀಣ್ ಹಾಗೂ ನಿರಂಜನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.









