

ಮಡಿಕೇರಿ NEWS DESK ಮಾ.17 : ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿ ಆದಿವಾಸಿ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟದ ಬದುಕನ್ನು ವಿವರಿಸಿದ ಪ್ರಮುಖರು, ಸರಕಾರ ದುರ್ಬಲ ವರ್ಗವನ್ನು ನಿರ್ಲಕ್ಷಿಸುತ್ತಿದೆಯೆಂದು ಆರೋಪಿಸಿದರು. ಜಿಲ್ಲೆಯ ವಿವಿಧ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳನ್ನು ಮುಕ್ತಗೊಳಿಸಿ, ಸ್ವಂತ ನಿವೇಶನ ಮತ್ತು ಮನೆಯನ್ನು ನೀಡಬೇಕು, ಒತ್ತುವರಿ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಆಸ್ತಿ ಹೊಂದಿರುವವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಆದೇಶವನ್ನು ಸರಕಾರ ವಾಪಾಸ್ಸು ಪಡೆಯಬೇಕು, ಒತ್ತುವರಿ ಭೂಮಿಯನ್ನು ಆದಿವಾಸಿ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಜಿಲ್ಲೆಯಲ್ಲಿರುವ ಆದಿವಾಸಿ ಕುಟುಂಬಗಳಲ್ಲಿ ಸಮರ್ಪಕವಾಗಿ ಆಧಾರ್ ಕಾರ್ಡ್, ಪರಿತರ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳು ಇಲ್ಲದೆ ಇರುವುದರಿಂದ, ಸರಕಾರ ನೀಡುವ ಯಾವುದೇ ಸೌಲಭ್ಯಗಳು ಅರ್ಹರಿಗೆೆ ತಲುಪುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಆದಿವಾಸಿಗಳಿಗೆ ದಾಖಲಾತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ರೂಪಿಸಬೇಕು. ಆದಿವಾಸಿಗಳ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆದಿವಾಸಿಗಳ ವಿಶೇಷ ಸಭೆ ನಡೆಸಬೇಕು. ರಾಷ್ಟ್ರೀಯ ಉದ್ಯಾನವನ, ಮೀಸಲು ಅರಣ್ಯ, ಹುಲಿ ಮೀಸಲು ಪ್ರದೇಶ, ಇತ್ಯಾದಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಹೊರ ಹಾಕುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಅರಣ್ಯ ಹಕ್ಕು ಕಾಯ್ದೆ 2006ನ್ನು ಅನುಷ್ಟಾನಗೊಳಿಸಿ ಖಚಿತಪಡಿಸಬೇಕು. ಭೂಮಿ ಮತ್ತು ಅರಣ್ಯದ ಮೇಲೆ ಆದಿವಾಸಿಗಳಿಗೆ ಇರುವ ಹಕ್ಕುಗಳನ್ನು ಗುರುತಿಸಬೇಕು ಹಾಗೂ ಅವರ ಮೇಲಾಗುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಆದಿವಾಸಿಗಳಲ್ಲಿ ಕೋಮು ದ್ವೇಷವನ್ನು ಹರಡುವ ಎಲ್ಲಾ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆದಿವಾಸಿಗಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯಗಳನ್ನು ನಿಲ್ಲಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 1989ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕರುಗಳಾದ ಪಿ.ಆರ್.ಭರತ್, ಜೆ.ಆರ್.ಪ್ರೇಮ, ಹೆಚ್.ಬಿ.ರಮೇಶ್, ಪ್ರಮುಖರಾದ ಭಾಗ್ಯ, ಬಸವ, ಅಯ್ಯಪ್ಪ, ಪಾರ್ವತಿ, ರವಿ, ರಾಧಿಕಾ, ಸುರೇಶ, ಪಿ.ಸಿ.ಗೀತಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









