
ಗೋಣಿಕೊಪ್ಪ ಮಾ.18 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಮೂರನೇ ಆವೃತ್ತಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಏ.10 ರಿಂದ 15 ದಿನಗಳವರೆಗೆ ಟಿ20 ಮಾದರಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. 10 ತಂಡಗಳು ಪೈಪೋಟಿ ನಡೆಸಲಿದ್ದು, ಸುಮಾರು 160 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಕೊಡವ ಜನಾಂಗದ ಯುವ ಸಮೂಹದಲ್ಲಿ ಲೆದರ್ ಬಾಲ್ ಆಟಗಾರರನ್ನು ದೇಶಿಯ ತಂಡ ಪ್ರತಿನಿಧಿಸುವಂತಾಗಬೇಕು ಎಂಬ ಕನಸ್ಸಿನೊಂದಿಗೆ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ವೃತ್ತಿಪರ ಕ್ರಿಕೆಟ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ವಿಜೇತ ತಂಡಕ್ಕೆ 2 ಲಕ್ಷ ನಗದು, ರನ್ನರ್ ಅಪ್ ತಂಡಕ್ಕೆ 1 ಲಕ್ಷ, 3 ನೇ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಪ್ರತೀ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟರ್, ಫೀಲ್ಡರ್, ಬೆಸ್ಟ್ ಕ್ಯಾಚ್, ಬೆಸ್ಟ್ ಕೀಪರ್, ಹ್ಯಾಟ್ರಿಕ್ಸ್, ಎವ್ಮೆರ್ಜಿಂಗ್ ಪ್ಲೇಯರ್, ಫೇರ್ ಪ್ಲೇ ಟೀಂ ಪ್ರಶಸ್ತಿ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಟೂರ್ನಿ ನಡೆಯುತ್ತಿದ್ದು, ವೃತ್ತಿಪರ ಟೂರ್ನಿಯಾಗಿ ಯಶಸ್ವಿ ಪಡೆದುಕೊಂಡಿದೆ. ಕೆಸಿಎ ವತಿಯಿಂದ ವೃತ್ತಿಪರ ತೀರ್ಪುಗಾರರು, ಪಿಚ್ ಕ್ಯೂರೇಟರ್ ಮೂಲಕ ಪಿಚ್ ಸಿದ್ದ ಪಡಿಸಿ ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವಂತ ಆಟಗಾರರಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಲು ಕ್ರೀಡಾಪಟುಗಳಲ್ಲಿ ಶಿಸ್ತು ಕಲ್ಪಿಸಲಾಗುತ್ತಿದೆ. ಮೈದಾನದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಿ, ಆರೋಗ್ಯ ಕೆಡದಂತೆ ಹಾಗೂ ವಿಶ್ವ ಮಟ್ಟದ ಕ್ರಿಕೆಟ್ ಆಯೋಜನೆಗೆ ಮುಂದಾಗಿದೆ ಎಂದರು. ಹರಾಜು ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಗಿದೆ. 160 ಆಟಗಾರರನ್ನು 10 ತಂಡಗಳಲ್ಲಿ ಆಡಲಿದ್ದಾರೆ. ಗುಣಮಟ್ಟದ ಆಟ ನಿರೀಕ್ಷಿಸಬಹುದಾಗಿದೆ. ಮೈದಾನದಲ್ಲಿ ಪಿಚ್ ನಿರ್ಮಿಸಿ ಲೆದರ್ ಬಾಲ್ ಆಟಕ್ಕೆ ಒತ್ತು ನೀಡಲಾಗುವುದು. ಉತ್ತಮ ತರಬೇತಿ ರೂಪಿಸಿ ಆಟಗಾರನಾಗಿ ಹೊರ ತರುವ ಪ್ರಯತ್ನ ನಡೆಯುತ್ತಿದೆ ಎಂದು ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ ತಿಳಿಸಿದರು. ಕೊಡಗಿನ ಆಟಗಾರನಿಗೆ ಗುಣಮಟ್ಟದ ಮೂಲಭೂತ ವ್ಯವಸ್ಥೆ ಸಿಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಆಟಗಾರರನ್ನು ದೇಶೀಯ ಮಟ್ಟದಲ್ಲಿ ನಿರೀಕ್ಷಿಸಬಹುದಾಗಿದೆ. ಪ್ರೋತ್ಸಾಹ ಸಿಗಬೇಕು. ಯಾವ ಆಟಗಾರನಿಗೂ ಮಾರ್ಗದರ್ಶನ ಸಿಗುತ್ತಿಲ್ಲ. ವಲಯ, ರಾಜ್ಯ, ರಣಜಿ, ದೇಶದ ಆಟಗಾರನಾಗಿ ಪಾಲ್ಗೊಳ್ಳಲು ಮಾರ್ಗ ಕಂಡುಕೊಳ್ಳಲಾಗುತ್ತಿದೆ ಕಾರ್ಯದರ್ಶಿ ಕೀತಿಯಂಡ ಗಣಪತಿ ಹೇಳಿದರು. ಕೂರ್ಗ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ ಅವರ ಉತ್ಸಾಹದಿಂದ ಟೂರ್ನಿ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವಂತಾಗಿದೆ. ಕೊಡಗಿನ ಪ್ರತಿಭೆಗಳಿಗೆ ಪ್ರೋತ್ಸಾಹದ ಕೊರತೆ ನೀಗಿಸಲಾಗುತ್ತಿದೆ. ನಿರ್ದೇಶಕ ಕುಲ್ಲೇಟೀರ ಶಾಂತ ಕಾಳಪ್ಪ ತಿಳಿಸಿದರು. ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥರಾಗಿ ಚೇರಂಡ ಕಿಶನ್ ಮಾದಪ್ಪ, ಅಧ್ಯಕ್ಷರಾಗಿ ಪೊರುಕೊಂಡ ಸುನಿಲ್, ಉಪಾಧ್ಯಕ್ಷರಾಗಿ ಪಾಲಚಂಡ ಜಗನ್ ಉತ್ತಪ್ಪ, ಕಾರ್ಯದರ್ಶಿಯಾಗಿ ಕೀತಿಯಂಡ ಗಣಪತಿ, ನಿರ್ದೇಶಕರಾಗಿ ಕುಲ್ಲೇಟೀರ ಶಾಂತ ಕಾಳಪ್ಪ, ಟೂರ್ನಿ ನಿರ್ದೇಶಕರಾಗಿ ಮಡ್ಲಂಡ ದರ್ಶನ್ ಪೆವ್ಮ್ಮಯ್ಯ, ನಿರ್ದೇಶಕರಾಗಿ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಚೇಂದೀರ ರಚನ್ ಚಿಣ್ಣಪ್ಪ, ಬಲ್ಲಂಡ ರೇಣಾ ದೇವಯ್ಯ, ಚೆರುಮಂದಂಡ ಸೋಮಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ. ಗೌರವಾನ್ವಿತ ನಿರ್ದೇಶಕರಾಗಿ ಮಂಡೇಪಂಡ ರತನ್ ಕುಟ್ಟಯ್ಯ, ಕೊಂಗಂಡ ದಿಲಿಪ್, ಬಾಳೆಯಡ ಕರುಣ್ ಕಾಳಪ್ಪ, ಪಾಲಚಂಡ ಪೂಜಿತ ಉತ್ತಪ್ಪ, ಪೊರುಕೊಂಡ ಬೋಪಣ್ಣ, ಚೇಂದಂಡ ನವೀನ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.









