
ಮಡಿಕೇರಿ NEWS DESK ಮಾ.20 : ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಪ್ರತಿ ಮನೆಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಕೆ ಮತ್ತು ಬೇಡಿಕೆಗೆ ತಕ್ಕಂತೆ ಸರ್ಕಾರದ ನಿಯಮಾನುಸಾರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಡುಗೆ ಅನಿಲ ವಿತರಕರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಸಾರಿರುವ ಸಮರ ತೀವ್ರಗೊಂಡಿರುವ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಒಂದು ರೀತಿಯ ಆತಂಕ ಉಂಟಾಗಿದ್ದು, ಇದನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ ಯಾರೂ ಸಹ ಆತಂಕಕ್ಕೆ ಒಳಗಾಗದಂತೆ ಗೃಹ ಬಳಕೆ ಅಡುಗೆ ಅನಿಲವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಒಟ್ಟಾರೆ ಗ್ರಾಹಕರಿಗೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದoತೆ ಗಮನಹರಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. ಅನಧಿಕೃತ ದಾಸ್ತಾನು/ ವಿತರಣೆ/ ಕಾಳಸಂತೆಯಲ್ಲಿ ಮಾರಾಟ ಸೇರಿದಂತೆ ನಿಯಮಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ವಿದ್ಯಾರ್ಥಿ ನಿಲಯ, ವಸತಿ ನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರೆ ಆದ್ಯತಾ ಸಂಸ್ಥೆಗಳಿಗೆ ಆದ್ಯತಾ ಮೇರೆಗೆ ಅನಿಲ ಸಿಲಿಂಡರ್ ಗಳನ್ನು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದ್ಯತೆ ಮೇರೆಗೆ ಹಾಗೂ ನಿಗಧಿತ ಅವಧಿಯೊಳಗಾಗಿ ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಮಾಡಬೇಕು, ಕಡ್ಡಾಯವಾಗಿ ಎಫ್ಐಎಫ್ಒ ಪ್ರಕಾರವೇ ಗೃಹಬಳಕೆ ಸಿಲಿಂಡರ್ಗಳ ವಿತರಣೆ ಮಾಡಬೇಕು ಎಂದರು. ಎಲ್ಪಿಜಿ ವಿತರಕರು ದಾಸ್ತಾನು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು, ಇಕೆವೈಸಿ ಆಗದೇ ಇರುವ ಗ್ರಾಹಕರಿಗೆ ತಕ್ಷಣವೇ ಇಕೆವೈಸಿ ಮಾಡಿಸಿಕೊಂಡು, ಅನಿಲ ಸಿಲಿಂಡರ್ ಸರಬರಾಜು ಮಾಡುವಂತೆ ಸಲಹೆ ನೀಡಿದರು. ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಗೃಹಬಳಕೆ ಸಿಲಿಂಡರ್ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ವಿತರಿಸಬಾರದು. ವಿತರಣೆ/ ದಾಸ್ತಾನುಗಳ ವಿವರಗಳನ್ನು ಪ್ರತಿದಿನ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಗೃಹ ಬಳಕೆ ಅಡುಗೆ ಅನಿಲ ಪೈರೈಕೆ ಸಂಬAಧ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದAತೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಅವರು ತಿಳಿಸಿದರು. ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ.ಭೀಮರಾಯ ಅವರು ಮಾತನಾಡಿ ಜಿಲ್ಲೆಯಲ್ಲಿ 1,81,126 ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕ ಹೊಂದಿದ್ದು, 60,101 ಕುಟುಂಬಗಳು ಒಂದು ಗೃಹ ಬಳಕೆಯ ಅನಿಲ ಸಿಲಿಂಡರ್ ಸಂಪರ್ಕ, ಹಾಗೆಯೇ 1,21,025 ಕುಟುಂಬಗಳು 2 ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿವೆ. ಉಜ್ವಲ ಯೋಜನೆಯಡಿಯೂ ಸಹ 12,527 ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಗೃಹ ಬಳಕೆಯ ಮತ್ತು ಉಜ್ವಲ ಯೋಜನೆಯಡಿ 1,93,653 ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಹಾಗೆಯೇ ಜಿಲ್ಲೆಯಲ್ಲಿ 9,601 ವಾಣಿಜ್ಯ ಬಳಕೆಗಾಗಿ ಅನಿಲ ಸಂಪರ್ಕ ಹೊಂದಿವೆ ಎಂದು ಅವರು ವಿವರಿಸಿದರು. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಾಗಿ ಜಿಲ್ಲೆಯಲ್ಲಿ 16,829 ಕುಟುಂಬಗಳು ಬುಕ್ಕಿಂಗ್ ಮಾಡಿದ್ದು, ಹಾಗೆಯೇ ವಾಣಿಜ್ಯ ಬಳಕೆಯ ಅಡುಗೆ ಅನಿಲ 505 ಮಂದಿ ಸಿಲಿಂಡರ್ಗಾಗಿ ಬುಕ್ಕಿಂಗ್ ಮಾಡಿದ್ದಾರೆ. ಪೂರೈಕೆಯಾಗುವ ಅಡುಗೆ ಅನಿಲವನ್ನು ಆಯಾಯ ಸಂದರ್ಭದಲ್ಲಿ ಸರದಿಯಂತೆ ಅಡುಗೆ ಅನಿಲ ಪೂರೈಸಲಾಗುತ್ತದೆ ಎಂದು ಭೀಮರಾಯ ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕೊಡಗು ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ಮತ್ತು ಬೇಡಿಕೆಯನ್ನು ಗಮನಿಸಬೇಕು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧ ಆರಂಭಕ್ಕೂ ಮೊದಲಿನ ಅಡುಗೆ ಅನಿಲ ಬುಕ್ಕಿಂಗ್ ಸ್ಥಿತಿ ಮತ್ತು ಯುದ್ಧ ಆರಂಭದ ನಂತರ ಬುಕ್ಕಿಂಗ್ ಪರಿಸ್ಥಿತಿಯನ್ನು ತಾಳೆ ಮಾಡುವಂತೆ ಅವರು ಸಲಹೆ ಮಾಡಿದರು. ಈಗಾಗಲೇ ಗ್ರಾಹಕರ ಕುಂದುಕೊರತೆ ಸಂಬoಧ ಸಹಾಯವಾಣಿ ತೆರೆಯಲಾಗಿದ್ದು, ಅನಿಲ ಸಿಲಿಂಡರ್ಗಳ ಕಾಳಸಂತೆ ಮಾರಾಟ/ ಅನಧಿಕೃತ ದಾಸ್ತಾನು/ ವಿತರಣೆ ಕುರಿತಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಭೀಮರಾಯ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಹಾರ ನಿರೀಕ್ಷಕರುಗಳು ಗ್ಯಾಸ್ ಏಜೆನ್ಸಿಗಳಿಗೆ ಹಾಗೂ ಹೋಟೆಲ್/ ಡಾಬಾಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು. ಗ್ಯಾಸ್ ಏಜೆನ್ಸಿಗಳಿಗೆ ನಿಯಮಿತ ಭೇಟಿ ನೀಡಿ ಎಫ್ಐಎಫ್ಒ ಪ್ರಕಾರ ಗ್ಯಾಸ್ ಸಿಲಿಂಡರ್ಗಳ ವಿತರಣೆ ಆಗುತ್ತಿರುವುದನ್ನು ಖಚಿತಪಡಿಸಿಕೊಂಡು ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿ ವಸತಿ ನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರೆ ಆದ್ಯತಾ ಸಂಸ್ಥೆಗಳಿಗೆ ಆದ್ಯತಾ ಮೇರೆಗೆ ಅನಿಲ ಸಿಲಿಂಡರ್ ಗಳ ಪೂರೈಕೆ ಆಗುತ್ತಿರುವುದನ್ನು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾಲಕಾಲಕ್ಕೆ ಸರ್ಕಾರದಿಂದ ನೀಡಲಾದ ನಿರ್ದೇಶನಗಳನ್ನು ಒಎಂಸಿ ಗಳಿಗೆ ತಲುಪಿಸಿ, ಪಾಲನೆಗೆ ಕ್ರಮ ಮತ್ತು ಮೇಲ್ವಿಚಾರಣೆ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಇರುವ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಹೀಗೆ ವಿವಿಧ ಕಂಪನಿಯ ಒಟ್ಟು 18 ಗ್ಯಾಸ್ ಏಜೆನ್ಸಿಸ್ ಸಂಸ್ಥೆಗಳ ಪ್ರತಿನಿಧಿಗಳು, ಆಹಾರ ನಿರೀಕ್ಷಕರು ಇತರರು ಇದ್ದರು.









