

ಮಡಿಕೇರಿ NEWS DESK ಮಾ.22 : ಕಳೆದ 7 ವರ್ಷಗಳಿಂದ “ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ” ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾಮದ ಸಾಮಾಜಿಕ ಸೇವಾ ಸಂಸ್ಥೆ “ಯುವ ಸ್ಪಂದನ ಯೂತ್ ಫೌಂಡೇಶನ್” ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸುನಿಲ್ ಕುಮಾರ್ ಕೆ.ಎಸ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘಟನೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಮಿಲನ್ ಪೂಜಾರಿ ಬಿ.ಎಸ್ ಹಾಗೂ ಉಪಾಧ್ಯಕ್ಷರಾಗಿ ಪೊನ್ನಪ್ಪ (ಅಣ್ಣು) ಆಯ್ಕೆಯಾದರು. ನೂತನ ಅಧ್ಯಕ್ಷ ಸುನಿಲ್ ಕುಮಾರ್ ಕೆ.ಎಸ್ ಮಾತನಾಡಿ ನೂತನವಾಗಿ ಆಯ್ಕೆಯಾದ ಉತ್ಸಾಹಿ ಯುವ ಪದಾಧಿಕಾರಿಗಳ ತಂಡವು ಮುಂಬರುವ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ದೃಢ ಸಂಕಲ್ಪ ಹೊಂದಿದೆ ಎಂದರು. ಈ ಫೌಂಡೇಶನ್ ಕಳೆದ 7 ವರ್ಷಗಳಿಂದ ಹಾಕತ್ತೂರು ಹಾಗೂ ಸುತ್ತಮುತ್ತಲಿನ ಅನೇಕ ನೊಂದ ಜೀವಗಳಿಗೆ ಆಸರೆಯಾಗುತ್ತಾ ಬಂದಿದೆ. ಸುಮಾರು 30ಕ್ಕೂ ಹೆಚ್ಚು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಸಂಘಟನೆಯು ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡುತ್ತಿದೆ. ಬಡ ಹಾಗೂ ಅರ್ಹ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಆರ್ಥಿಕ ಸಹಕಾರ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿದೆ. ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟಗಳಿಂದ ಬರುವ ಸಂಪೂರ್ಣ ಲಾಭಾಂಶವನ್ನು ಸಮಾಜದ ತುರ್ತು ಅಗತ್ಯವಿರುವ ಜನರ ಕಣ್ಣೀರು ಒರೆಸಲು ಬಳಸುತ್ತಾ ಬಂದಿರುವುದು ಈ ಸಂಘಟನೆಯ ವಿಶೇಷತೆಯಾಗಿದೆ. ದಾನಿಗಳ ಉದಾರ ಸಹಕಾರ ಹಾಗೂ ಕಾರ್ಯಕರ್ತರ ನಿಸ್ವಾರ್ಥ ಶ್ರಮದಿಂದ ಇಂದು ಈ ಸಂಸ್ಥೆ ಸಮಾಜದ ಭರವಸೆಯ ಆಶಾಕಿರಣವಾಗಿ ಬೆಳೆದು ನಿಂತಿದೆ ಎಂದರು.








