
ಮಡಿಕೇರಿ ಮಾ.25 NEWS DESK : ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ದಿನವಾದ ಭಾನುವಾರ ಖಾಸಗಿ ಹೊಟೇಲ್ನಲ್ಲಿ ಪ್ರವೇಶ ಪತ್ರ ನೀಡಿರುವುದು ನಿಯಮಬಾಹಿರ ಕ್ರಮವಾಗಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ತಳೂರು ಎ.ಕಿಶೋರ್ ಕುಮಾರ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಿನಾಂಕ 22-03-2026 ರ ಭಾನುವಾರ ರಜೆ ದಿನ ಶಾಸಕರ ಸಮ್ಮುಖದಲ್ಲಿ ಖಾಸಾಗಿ ಹೊಟೇಲ್ನಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡಿರುವುದು ಎಷ್ಟು ಸರಿ. ಶಾಸಕರು ಅಧಿಕಾರಿಯನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸುವ ಬದಲು ಪ್ರವೇಶ ಪತ್ರ ನೀಡುವ ಅಗತ್ಯವೇನಿತ್ತು, ಶಾಸಕರೇ ಪ್ರವೇಶ ಪತ್ರ ನೀಡುವುದಾದರೆ ಸ್ಥಳೀಯ ಉಪನಿರ್ದೆಶಕರು, ಕ್ಷೇತ್ರ ಶಿಕ್ಷಣಾದಿಕಾರಿಗಳ ಕರ್ತವ್ಯ ಏನು ಎಂದು ಪ್ರಶ್ನಿಸಿದ್ದಾರೆ. ಬೇಜವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಸ್ಥಳೀಯ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶಾಲಾ ಆಡಳಿತ ಮಂಡಳಿ ಆಗ್ರಹಿಸುತ್ತದೆ. ಅಲ್ಲದೆ ಶಿಕ್ಷಣಾಧಿಕಾರಿಗಳ ವಿರುದ್ಧ ಹೋರಾಟಕ್ಕೆ ಆಡಳಿತ ಮಂಡಳಿಯು ಸಜ್ಜಾಗಿದೆ ಎಂದು ತಳೂರು ಎ.ಕಿಶೋರ್ ಕುಮಾರ್ ತಿಳಿಸಿದ್ದಾರೆ. ಉದಯ ವಿದ್ಯಾಸಂಸ್ಥೆಯು 1966ರಲ್ಲಿ ಪ್ರಾರಂಭವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಕನ್ನಡ ಮಾಧ್ಯಮವು ಸ್ಥಗಿತಗೊಂಡಿದೆ. ಆದರೆ ಆಂಗ್ಲ ಮಾಧ್ಯಮವು ಎಲ್ಕೆಜಿಯಿಂದ 10ನೇ ತರಗತಿವರೆಗೆ ಇಲ್ಲಿಯವರೆಗೂ ವ್ಯವಸ್ಥಿತವಾಗಿ ಉತ್ತಮ ಫಲಿತಾಂಶದೊಂದಿಗೆ ನಡೆದುಕೊಂಡು ಬಂದಿದೆ. ಇದಕ್ಕೆ ಪೂರಕವಾಗಿ ಉದಯ ವಿಧ್ಯಾಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಇಲಾಖೆ ಅಧಿಕಾರಿಗಳ ಕಿರುಕುಳದ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದಲ್ಲಿ W.P No 18141/2024 ರಲ್ಲಿ ಮೊಕದಮೆ ದಾಖಲಿಸಲಾಗಿದ್ದು ನ್ಯಾಯಾಲಯದ ಆದೇಶ ಪ್ರಕಾರ ಸಂಸ್ಥೆಗೆ ತೊಂದರೆ ಕೊಡಬಾರದೆಂದು ಆದೇಶವಾಗಿರುತ್ತದೆ. ಆದರೂ ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳದಾಗ ಮತ್ತೊಮ್ಮೆ ಶಿಕ್ಷಣ ಇಲಾಖೆಯ ವಿರುದ್ಧ W.P No 33493/2024 ರಲ್ಲಿ ಮೊಕದ್ದಮೆ ಹೂಡಿದ್ದು ಮಕ್ಕಳಿಗೆ ಯಾವುದೇ ತೊಂದರೆ ಮಾಡಬಾರದೆಂದು ನ್ಯಾಯಾಲಯವು ಆದೇಶ ನೀಡಿದ್ದು, ಸದರಿ ಆದೇಶದಂತೆ ಅಂದಿನ ಶಿಕ್ಷಣ ಅಧಿಕಾರಿಗಳು ಪೂರಕ ಕ್ರಮಕೈಗೊಂಡಿರುವುದು ಸ್ಪಷ್ಟವಾಗಿರುತ್ತದೆ. ತದನಂತರ ಆಗಿಂದ್ದಾಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಉದ್ದೇಶ ಪೂರಕವಾಗಿ ನಿರಾಕರಣೆ ಮಾಡಿರುವುದರ ಬಗ್ಗೆ W.P No 8506/2026 ರ ಪ್ರಕಾರ ಸಂಬಂಧಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲೆ ಮೊಕದಮೆ ಹೂಡಿದ್ದು, ಆ ಆದೇಶದ ಪ್ರಕಾರ ಸಂಬಂಧಿಸಿದ 17 ವಿಧ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಲು ರಾಜ್ಯ ಉಚ್ಚನ್ಯಾಯಾಲಯವು ಆದೇಶ ನೀಡಿದ್ದರೂ ಸಂಬಂಧಿಸಿದ ಉಪನಿರ್ದೆಶಕರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 17 ವಿಧ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರಾಜ್ಯ ಉಚ್ಚನ್ಯಾಯಾಲಯವು ಆದೇಶ ನೀಡಿದ್ದರೂ, ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡದೆ ನಿರಾಕರಣೆ ಮಾಡಿದ್ದು, ಇದು ಉಚ್ಚನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಈ ಬಗ್ಗೆ ಮೊಕದ್ದಮ್ಮೆಯನ್ನು ಹೂಡಲಾಗುವುದು, ಅಲ್ಲದೆ W.P No 33493/2024 ರಲ್ಲಿ ಉಚ್ಚನ್ಯಾಯಾಲಯದ ಆದೇಶವು ಇತ್ಯಾರ್ಥವಾಗದೇ ಉಳಿದಿದ್ದು, ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳು ರಾಜಕೀಯ ಮಾಡಿರುವುದನ್ನು ಆಡಳಿತ ಮಂಡಳಿ ಖಂಡಿಸುತ್ತದೆ ಎಂದು ತಳೂರು ಎ.ಕಿಶೋರ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








