
ಮಡಿಕೇರಿ ಮಾ.26 NEWS DESK : ಮಹಿಳೆಯರು ಸಬಲರಾದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಮುತ್ತಮ್ಮ ಕೋಟಿ ಅವರು ಹೇಳಿದರು. ಕೊಡಗು ಜಿಲ್ಲಾ, ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದ ವತಿಯಿಂದ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮಹಿಳಾ ಸಂಭ್ರಮ-2026ಅನ್ನು ಉದ್ಘಾಟಿಸಿ ಅವರು, ಮಾತನಾಡಿದರು. ಮಹಿಳೆಯರಿಗೆ ಸರ್ಕಾರದ ಹತ್ತು ಹಲವು ಯೋಜನೆಗಳಿದ್ದು, ಅದನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಆ ಮೂಲಕ ಬದುಕನ್ನು ಭದ್ರವಾಗಿ ರೂಪಿಸಿಕೊಳ್ಳಬೇಕು. ಮಹಿಳಾ ಘಟಕದ ಇಂತಹ ಕಾರ್ಯಕ್ರಮವು ಮಹಿಳೆಯರ ಸಂಘಟನೆಯ ಜೊತೆಗೆ ಕೊಡಗು ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘಟನೆಗೆ ಪೂರಕವಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಲತಾ ಮಡಿಕೆಬೀಡು ಮಾತನಾಡಿ, ಮಹಿಳೆಯರು ಸಂಘಟಿತಗೊಳ್ಳುವ ಮೂಲಕ ಸಮಾಜದ ಆಗು ಹೋಗುಗಳನ್ನು ತಿಳಿಯಬಹುದು. ಈ ರೀತಿಯ ಸ್ಪಂದನೆ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘವು ಬೆಳವಣಿಗೆಗೆ ಇನ್ನಷ್ಟು ಪೂರಕವಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕಾಂತಿಮಣಿ ರಾಜು ಅವರು, ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘವು ಅತ್ಯಂತ ಬಲಿಷ್ಠವಾಗಿ ಸಂಘಟಿತವಾಗುತ್ತಿದ್ದು, ಇತ್ತೀಚೆಗೆ ರಚನೆಗೊಂಡ ಮಹಿಳಾ ಘಟಕವು ಇದೀಗ ಮಹಿಳಾ ದಿನಾಚರಣೆ ಮಾಡುವ ಮೂಲಕ ಮೊದಲ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಕುಲಾಲ ಕುಂಬಾರ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತ ಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಘಟಕವು ಮಹಿಳೆಯರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆ ಮೂಲಕ ಸಮಾಜದ ಅಭಿವೃದ್ಧಿಗೆ ಮಹಿಳಾ ಘಟಕವು ಶ್ರಮಿಸಲಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದ ಉಪ ಖಜಾಂಚಿ ಭವಾನಿ ಶಿವರಾಜ್ ಮಡಿಕೆ ಬೀಡು ಅವರು ಮಾತನಾಡಿ ಇಂತಹ ಕಾರ್ಯಕ್ರಮದ ಮೂಲಕ ಮಹಿಳೆಯರ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ಆ ಮೂಲಕ ತಮ್ಮ ಸಾಮಥ್ರ್ಯದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು. ಅತಿಥಿಗಳಾದ ಕಾವ್ಯ ಅವರು ಮಾತನಾಡಿ, ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯಲು ಸಾಧ್ಯವಿದೆ. ಇಂತಹ ಕಾರ್ಯಕ್ರಮವು ಇದಕ್ಕೆಲ್ಲ ಮುನ್ನುಡಿ ಬರೆಯಲಿದೆ ಎಂದರು. ಸೈಕಾಲಜಿ ವಿದ್ಯಾರ್ಥಿನಿ ವರ್ಷ ಮಾತನಾಡಿ, ಯೋಗಾ, ಧ್ಯಾನ ಮಾನವ ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ, ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷರಾದ ಶ್ವೇತಾ ಅಶ್ವಥ್ ಮಡಿಕೆಬೀಡು, ಉಪ ಕಾರ್ಯದರ್ಶಿ ದಮಯಂತಿ ಚೇರಂಬಾಣೆ, ಪದಾಧಿಕಾರಿ ಸಂಧ್ಯಾ ಚಂದ್ರಶೇಖರ್ ಮುರ್ನಾಡು ಹಾಜರಿದ್ದರು. ಸಪ್ನಾ ಪ್ರಾರ್ಥಿಸಿದರು. ಬೃಂದಾ ಸ್ವಾಗತಿಸಿದರು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹೇಮಲತಾ ಪೂರ್ಣ ಪ್ರಕಾಶ್ ನಿರೂಪಿಸಿದರು. ಕೊಡಗು ಜಿಲ್ಲೆಯ ಕುಲಾಲ ಕುಂಬಾರ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಜಿಲ್ಲೆಯ ಕುಲಾಲ ಕುಂಬಾರ ಮಹಿಳಾ ಬಾಂಧವರಿಂದ ನೃತ್ಯ, ಕವಿತೆ ವಾಚನ ಸೇರಿದಂತೆ ವಿವಿಧ ರೀತಿಯ ಆಟೋಟಗಳು ಗಮನ ಸೆಳೆದವು.









