
ಸೋಮವಾರಪೇಟೆ ಮಾ.28 NEWS DESK : ಸಂಭ್ರಮದ ರಾಮೋತ್ಸವ, ವಿಜೃಂಭಣೆಯ ಶೋಭಾಯಾತ್ರೆಗೆ ವಿದ್ಯುಕ್ತ ತೆರೆಬಿದ್ದಿತು. ಸೋಮವಾರಪೇಟೆ ರಾಮನವಮಿ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಹನ್ನೊಂದನೇ ವರ್ಷದ ರಾಮನವಮಿ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 12ಕ್ಕೂ ಹೆಚ್ಚಿನ ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾ ತಂಡ ಹಾಗೂ ಸಿಡಿಮದ್ದು ಪ್ರದರ್ಶನದೊಂದಿಗೆ ಒಂದು ಕಿಲೋಮೀಟರ್ ಬೃಹತ್ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ವೀರಗಾಸೆ, ನಂದಿಧ್ವಜ, ಭಜನೆ, ಹುಲಿವೇಷ, ಗೊಂಬೆಕುಣಿತ, ಅಗ್ನಿ ಸರ್ಕಸ್, ಗಿರಿಜನ ಕಲೆ, ಕೆಂಗಿಲೆ ಕಲಾತಂಡಗಳೊಂದಿಗೆ ವಿವಿಧ ಬ್ಯಾಂಡ್ ಸೆಟ್ ಗಳೊಂದಿಗೆ ಆಗಸದಲ್ಲಿ ಚಿತ್ತಾಕಾರ ಪಟಾಕಿ ಪ್ರದರ್ಶನ ಜನಮನ ಸೆಳೆಯಿತು. ಈ ಎಲ್ಲಾ ಕಲಾತಂಡ ಗಳೊಂದಿಗೆ ಅಲಂಕೃತ ಮಂಟಪದಲ್ಲಿ ಸೀತಾರಾಮಾಂಜನಯರ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗೋಷಗಳೊಂದಿಗೆ ಶನಿವಾರ ಮುಂಜಾನೆಯವರೆಗೂ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿಯವರ ನೇತೃತ್ವದಲ್ಲಿ ಬಿಗುಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ತೆರಳುವ ಮಾರ್ಗದಲ್ಲಿ ಅಡಚಣೆಯಾಗದಂತೆ ವಾಹನಸಂಚಾರ ನಿರ್ಬಂಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ನಗರದ ಸುತ್ತಮುತ್ತಲಲ್ಲಿ ಮಾದ್ಯಮಾರಾಟ ನಿಷೇಧಿಸಲಾಗಿತ್ತು.









