
ಮಡಿಕೇರಿ ಮಾ.28 NEWS DESK : ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಅಮೃತ್ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ನಗರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಅಮೃತ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಚಾಲಕರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ವ ಸದಸ್ಯರು ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮಾತನಾಡಿ ಕಾಮಗಾರಿ ಮಳೆಗಾಲಕ್ಕೂ ಮೊದಲು ಪೂರ್ಣಗೊಳ್ಳುವುದು ಅಸಾಧ್ಯ, ಇದರಿಂದ ಹೆಚ್ಚಿನ ತೊಂದರೆ ಎದುರಾಗಲಿದೆ ಎಂದರು. ವಿರೋಧ ಪಕ್ಷದ ನಾಯಕ ಅಮಿನ್ ಮೊಹಿಸಿನ್ ಮಾತನಾಡಿ ನಗರಸಭೆಯ ಆಡಳಿತದ ಅವಧಿ ಇನ್ನು ಕೇವಲ 6 ತಿಂಗಳು ಮಾತ್ರವೇ ಇದೆ. ಈ ಕಾಮಗಾರಿ ಕುರಿತು ಹಲವು ಬಾರಿ ಚರ್ಚೆ ನಡೆದಿದೆ, ಈಗಲಾದರೂ ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯಿಸಿದರು. ಎಸ್ಡಿಪಿಐ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಮಾತನಾಡಿ ಪ್ರತಿ ಸಭೆಯಲ್ಲಿ ಈ ಕುರಿತು ಗಮನ ಸೆಳೆದರೂ ಪ್ರಯೋಜನವಾಗಿಲ್ಲ, ಗುತ್ತಿಗೆದಾರರನ್ನು ಸಭೆಗೆ ಕರೆಸಿ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವತಃ ಪೌರಾಯುಕ್ತ ಹೆಚ್.ಆರ್.ರಮೇಶ್ ಅವರು ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಮಾರ್ಚ್ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದೀರಿ. ಇನ್ನೂ ಕಾಮಗಾರಿ ಮುಗಿದೇ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು, ತೆಗೆದ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇಂಟರ್ ಲಾಕ್ ಹಾಕಿಲ್ಲ, ಇಷ್ಟ ಬಂದಂತೆ ನೀರಿನ ಸಂಪರ್ಕ ಕೊಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
*ಸಭಾತ್ಯಾಗ* ನಗರದಲ್ಲಿ ನಿರ್ಮಾಣಗೊಂಡಿರುವ ನಿಯಮಬಾಹಿರ ಶೆಡ್ ಗಳಿಗೆ ಸಂಬಂಧಿಸಿದಂತೆ ನಗರಸಭೆ ಅಧ್ಯಕ್ಷರು ಕ್ಷಮೆಯಾಸಬೇಕೆನ್ನುವ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಕ್ಷಮೆಯಾಚನೆಗೆ ಅಧ್ಯಕ್ಷೆ ಪಿ.ಕಲಾವತಿ ಅವರು ಒಪ್ಪದೆ ಇದ್ದಾಗ ಕಾಂಗ್ರೆಸ್ ಸದಸ್ಯರು ದಿಕ್ಕಾರ ಕೂಗಿದರು. ಕೆಲವು ಅಕ್ರಮ ಅಂಗಡಿಗಳನ್ನು ಮುಚ್ಚಿಸುವ ಕುರಿತು ನಗರಸಭೆ ಸಾಮಾನ್ಯಸಭೆ ಕೈಗೊಂಡಿದ್ದ ನಿರ್ಣಯಕ್ಕೆ ವಿರುದ್ಧವಾಗಿ ಅಧ್ಯಕ್ಷರು “ನನ್ನನ್ನು ಕೇಳದೇ ಯಾವುದೇ ಕ್ರಮ ಜರುಗಿಸಬಾರದು ಎಂದು ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ” ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್, “ಇದು ಕೌನ್ಸಿಲ್ ಸಭೆಗೆ ಅಧ್ಯಕ್ಷರು ತೋರಿದ ಆಗೌರವ’ ಎಂದು ಟೀಕಿಸಿದರು. ಇವರ ಆರೋಪಕ್ಕೆ ಕಾಂಗ್ರೆಸ್ ನ ಇತರ ಸದಸ್ಯರೂ ದನಿಗೂಡಿಸಿದರು. ಅಲ್ಲದೆ ಅಧ್ಯಕ್ಷರು ಕ್ಷಮೆ ಕೋರಬೇಕು ಎನ್ನುವ ಒತ್ತಾಯ ಕೇಳಿ ಬಂತು. ಆರೋಪ ನಿರಾಕರಿಸಿದ ಅಧ್ಯಕ್ಷೆ ಕಲಾವತಿ, “ನಾನೇನೂ ತಪ್ಪು ಮಾಡಿಲ್ಲ. ಈಗ ಆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದನ್ನು ಇಲ್ಲಿ ಚರ್ಚೆ ಮಾಡಲು ಸಾಧ್ಯವಿಲ” ಎಂದು ಹೇಳಿದರು. ಇವರ ಮಾತನ್ನು ಒಪ್ಪದ ಕಾಂಗ್ರೆಸ್ ಸದಸ್ಯರು “ಈ ರೀತಿ ಪತ್ರ ಬರೆಯಲು ಸದಸ್ಯರೊಬ್ಬರ ಒತ್ತಡ ಇತ್ತು. ಆದರೆ, ಈಗ ಆ ಸದಸ್ಯರೂ ಅಧ್ಯಕ್ಷರ ನೆರವಿಗೆ ಬರುತ್ತಿಲ್ಲ. ಆಡಳಿತ ಪಕ್ಷದ ಇತರ ಸದಸ್ಯರೂ ಅಧ್ಯಕ್ಷರನ್ನು ಸಮರ್ಥಿಸಿಕೊಳ್ಳುತ್ತಿಲ್ಲ” ಎಂದು ಸದಸ್ಯ ರಾಜೇಶ್ ವ್ಯಂಗ್ಯವಾಡಿದರು. ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ “ಕೌನ್ಸಿಲ್ ನಿರ್ಣಯದ ವಿರುದ್ಧ ಪತ್ರ ಬರೆದರೆ ನೀವೇ ತೊಂದರೆಗೆ ಸಿಲುಕುತ್ತೀರಿ. ಯಾರೋ ಹೇಳಿದರೆಂದು ಕೇಳಿ ಸುಮ್ಮನೇ ಪತ್ರ ಬರೆಯಬಾರದು” ಎಂದು ಹೇಳಿದರು. ಈ ನಡುವೆ ಕಾಂಗ್ರೆಸ್ ಸದಸ್ಯರು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಮಧ್ಯಾಹ್ನದ ನಂತರ ಸಭೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಕ್ಷಮೆಯಾಚನೆಗೆ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಒಪ್ಪದೇ ಇದ್ದಾಗ ಒಪ್ಪಲಿಲ್ಲ. ಕಾಂಗ್ರೆಸ್ ಸದಸ್ಯರು ದಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು. ಸದಸ್ಯರಾದ ಅಮಿನ್ ಮೊಹಿಸಿನ್ ಹಾಗೂ ಎಂ.ಕೆ.ಮನ್ಸೂರ್ ಆಲಿ ಬಜೆಟ್ ಕುರಿತು ಚರ್ಚಿಸಿದರು. ಉಪಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.









