
ಮಡಿಕೇರಿ ಏ.2 NEWS DESK : ಛಾಯಾಗ್ರಹಣಕ್ಕೆ ಸಂಬಂಧಿಸಿದ ಉಪಕರಣಗಳ ಬೆಲೆ ದುಪ್ಪಟ್ಟಾಗಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳನ್ನು ಒಳಗೊಂಡ ದಕ್ಷಿಣ ಕೊಡಗಿನ ವೃತ್ತಿನಿರತ ಛಾಯಾಗ್ರಾಹಕರಿಗೆ ಅನ್ವಯವಾಗುವಂತೆ ಛಾಯಾಗ್ರಹಣದ ದರವನ್ನು ಶೇ.10ರಷ್ಟು ಹೆಚ್ಚಿಸಿರುವುದಾಗಿ ದಕ್ಷಿಣ ಕೊಡಗು ಛಾಯಾಚಿತ್ರಗಾರರ ಸಂಘದ ಅಧ್ಯಕ್ಷರಾದ ಡಿ.ಸಿ.ರವೀಂದ್ರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಸ್ತುತ ಪ್ರೊಫೇಷನಲ್ ಕ್ಯಾಮರಾಗಳ ಬೆಲೆ ಗಗನಕ್ಕೇರಿದ್ದರೆ, ವೃತ್ತಿಗೆ ಸಂಬಂಧಿಸಿದ ಪರಿಕರಗಳಾದ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಮೆಮೋರಿ ಕಾರ್ಡ್, ಫೋಟೋ ಪ್ರಿಂಟ್, ಆಲ್ಬಮ್ ಮೊದಲಾದವುಗಳ ದರ ದುಪ್ಪಟ್ಟಾಗಿದೆ. ಇದರಿಂದ ಈಗಿನ ದರದಲ್ಲಿ ಸ್ಟುಡಿಯೋಗಳನ್ನು ನಡೆಸುವುದು ಪ್ರಯಾಸಕರವಾಗಿರುವುದರಿಂದ ದರ ಹೆಚ್ಚಳ ಮಾಡಿರುವುದಾಗಿ ಹೇಳಿದರು. ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚಿನ ಸ್ಟುಡಿಯೋಗಳಿದ್ದು, ಇದನ್ನು ನಂಬಿ ಬದುಕು ಕಟ್ಟಿಕೊಂಡಿರುವ ಕುಟುಂಬಗಳ ಸಂಖ್ಯೆ 150 ರಿಂದ 180ರಷ್ಟ್ಟಿದೆ. ಇಂದಿನ ದರ ಹೆಚ್ಚಳದ ಅವಧಿಯಲ್ಲಿ ಕುಟುಂಬ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ದರವನ್ನು ಹೆಚ್ಚಿಸಲಾಗಿದೆಯೆಂದರು. ಯಾವುದಕ್ಕೆ ಎಷ್ಟು ದರ ಹೆಚ್ಚಳ?- ಇನ್ನು ಮುಂದೆ ಪಾಸ್ ಪೋರ್ಟ್ ಸೈಜಿನ ನಾಲ್ಕು ಫೋಟೋಗಳಿಗೆ ಹಿಂದೆ ಇದ್ದ 80 ರೂ.ಗಳನ್ನು 100ರೂ.ಗಳಿಗೆ ಹೆಚ್ಚಿಸಲಾಗಿದೆಯಾದರೆ, 8 ಕಾಪಿಗಳಿಗೆ 120 ರೂ.ಗಳಿಂದ 150ಕ್ಕೆ ಹೆಚ್ಚಿಸಲಾಗಿದೆ. ವಿವಾಹ ಸಮಾರಂಭಗಳ ಎರಡು ದಿನದ ಫೋಟೋ(300 ಫೊಟೋ) ಮತ್ತು ವಿಡಿಯೋ ಮಾಡುವ ದರವನ್ನು 35 ಸಾವಿರಗಳಿಂದ 45 ಸಾವಿರ ರೂ.ಗಳಿಗೆ. ಒಂದು ದಿನದ ಸಮಾರಂಭದ ಫೋಟೋ(300 ಫೋಟೋ) ಮತ್ತು ವಿಡಿಯೋಕ್ಕೆ 40 ಸಾವಿರ ರೂ.ಗಳನ್ನು ನಿಗದಿ ಪಡಿಸಲಾಗಿದೆ. ಬದಲಾದ ದರ ಪಟ್ಟಿಯನ್ನು ದಕ್ಷಿಣ ಕೊಡಗಿನ ಎಲ್ಲಾ ಸ್ಟುಡಿಯೋಗಳಲ್ಲಿ ಗ್ರ್ರಾಹಕರಿಗೆ ಅನುಕೂಲವಾಗುವಂತೆ ಪ್ರದರ್ಶಿಸಲಾಗುತ್ತದೆಂದು ಅವರು ತಿಳಿಸಿದರು. ಮೊಬೈಲ್ ಸಂಕಷ್ಟ-ಪ್ರಸ್ತುತ ದಿನಗಳಲ್ಲಿ ಮೊಬೈಲ್ಗಳಲ್ಲಿ ಫೋಟೋಗಳನ್ನು ತೆಗೆಯುತ್ತಿರುವುದರಿಂದ ಮತ್ತು ಸರ್ಕಾರದ ಕೆಲಸಗಳು ಆನ್ಲೈನ್ನಲ್ಲಿ ಹೆಚ್ಚಾಗಿ ನಡೆಯುತ್ತಿರುವುದಿಂದ ಛಾಯಾಚಿತ್ರ ಗ್ರಾಹಕರು ಸಾಕಷ್ಟು ಕೆಲಸಗಳನ್ನು ಕಳೆದುಕೊಂಡಿದ್ದು, ತೊಂದರೆಗೆ ಸಿಲುಕಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕಳೆದ ಹತ್ತು ವರ್ಷಗಳ ಬಳಿಕವಷ್ಟೆ ಛಾಯಾಗ್ರಹಣದ ದರಗಳನ್ನು ಹೆಚ್ಚಿಸಲಾಗಿದೆಯೆಂದು ಹೇಳಿದರು. ಗ್ರಾಹಕರೆ ಜಾಗೃತರಾಗಿ. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆನ್ಲೈನ್, ವೆಬ್ ಸೈಟ್ಗಳ ಮೂಲಕ ತಮಗೆ ಪರಿಚಯವಿಲ್ಲದವರಿಗೆ ಕಾರ್ಯಕ್ರಮ, ಸಮಾರಂಭಗಳ ಛಾಯಾಗ್ರಹಣಕ್ಕೆ ಅವಕಾಶ ನೀಡುತ್ತಿದ್ದು, ಸಾಕಷ್ಟು ಬಾರಿ ನಿಗದಿತ ಅವಧಿಯಲ್ಲಿ ಫೋಟೋಗಳು, ವಿಡಿಯೋಗಳು ಗ್ರಾಹಕರಿಗೆ ದೊರಕದೆ ತೊಂದರೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ದಕ್ಷಿಣ ಕೊಡಗಿನ ಭಾಗದ ಗ್ರಾಹಕರು “ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘ”ದ ಗುರುತಿನ ಚೀಟಿ ಹೊಂದಿರುವುದನ್ನು ಮೊದಲೆ ಖಾತರಿ ಪಡಿಸಿಕೊಂಡು ಛಾಯಾಗ್ರಹಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ನಗರದಲ್ಲಿ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಜೆ.ಶರತ್, ಕಾರ್ಯದರ್ಶಿ ಹೆಚ್.ವಿ.ರಾಮದಾಸ್, ಮಾಜಿ ಅಧ್ಯಕ್ಷ ಕೆ.ಸುರೇಶ್ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ದೀಪಕ್ ಕುಮಾರ್ ಉಪಸ್ಥಿತರಿದ್ದರು.









