
ಕುಶಾಲನಗರ, ಏ.3 NEWS DESK : ರೈತರು ಕೃಷಿಯೊಂದಿಗೆ ಅರಣ್ಯ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ ಆದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಪರಿಸರ ಕಾರ್ಯಕ್ರಮಗಳ ಸಂಘಟಕ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಕೊಡಗು ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗ, ಮಡಿಕೇರಿ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಕೂಡಿಗೆ ಬಳಿಯ ಹುದುಗೂರು ಅರಣ್ಯ ಸಸ್ಯಕ್ಷೇತ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಮತ್ತು ಅರಿವು ಹಾಗೂ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಅರಣ್ಯದಿಂದ ಕೃಷಿ ಭೂಮಿಯ ಅಂತರ್ಜಲ ವೃದ್ಧಿ ಸಾಧ್ಯ. ಇಂದಿನ ಹವಾಮಾನ ವೈಪರೀತ್ಯ, ಅತಿವೃಷ್ಠಿ ಹಾಗೂ ಅಕಾಲಿಕ ಮಳೆಯಿಂದ ಒಂದು ಬೆಳೆ ಕೈಕೊಟ್ಟರೂ, ಅರಣ್ಯ ಕೃಷಿಯಿಂದ ಬರುವ ಮರಗಳ ಆದಾಯವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ.ಇದು ರೈತರ ಆದಾಯದ ವೈವಿಧ್ಯೀಕರಣಕ್ಕೆ ಹೆಚ್ಚಿನ ಲಾಭ ತರುತ್ತದೆ ಎಂದರು. ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಅರಣ್ಯ ಸಂರಕ್ಷಿಸಿ ಕೊಳ್ಳಬೇಕು.ಗ್ರಾಮೀಣ ಯುವಕರು ಮತ್ತು ರೈತರಿಗೆ ಲಭ್ಯವಿರುವ ತಮ್ಮ ಜಮೀನಿನಲ್ಲಿ ಅರಣ್ಯ ಕೃಷಿ ಮತ್ತು ಪಶುಸಂಗೋಪನೆ, ತೋಟಗಾರಿಕೆ
ಸಂಬಂಧಿತ ವಲಯಗಳಲ್ಲಿ ತೊಡಗಿಸಿಕೊಂಡರೆ ಕೃಷಿಕ್ಷೇತ್ರದಲ್ಲಿ ಆರ್ಥಿಕ ಸಬಲೀಕರಣಗೊಳ್ಳಲು ಸಾಧ್ಯ ಎಂದರು. ರೈತರು ಹವಾಮಾನ-ಸೂಕ್ಷ್ಮ ಕೃಷಿ ಮತ್ತು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಂತಹ ನಾವೀನ್ಯತೆವುಳ್ಳ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತೋಟಗಾರಿಕೆ, ಜೇನುಸಾಕಣೆ, ಹಣ್ಣು ಸಂರಕ್ಷಣೆ ಮತ್ತು ಅಣಬೆ ಉತ್ಪಾದನೆಯಲ್ಲಿ ತೊಡಗಿದರೆ ಹೆಚ್ಚಿನ ರೀತಿಯಲ್ಲಿ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಪ್ರೇಮಕುಮಾರ್ ತಿಳಿಸಿದರು. ರೈತರು ಕೃಷಿಯಲ್ಲಿ ನಾಲ್ಕಾರು ಲಾಭದಾಯಕ ಮಿಶ್ರ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು. ಅರಣ್ಯ ಕೃಷಿ, ಮಿಶ್ರ ಬೇಸಾಯ ಪದ್ಧತಿ ಹಾಗೂ ಸಮಗ್ರ ಕೃಷಿಯಲ್ಲಿ ಉತ್ತಮ ಲಾಭ ಗಳಿಸುತ್ತಿದೆ. ಇದರಲ್ಲೇ ಉತ್ತಮ ಬದುಕು ರೂಪಿಸಿಕೊಳ್ಳಬಹುದು. ರೈತರಿಗೆ ಅರಣ್ಯ ಇಲಾಖೆಯ ವತಿಯಿಂದ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದ ಸಾಮಾಜಿಕ ಅರಣ್ಯ ವಲಯಾಧಿಕಾರಿ ಎಂ.ಗಣೇಶ್, ರೈತರು ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಿದರೆ ಸುಸ್ಥಿರ ಆದಾಯ ಗಳಿಸಲು ಸಾಧ್ಯ. ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿಭೂಮಿಯ ಮಣ್ಣಿನ ಫಲವತ್ತತೆ , ಅಂತರ್ಜಲ ವೃದ್ಧಿ ಮತ್ತು ಪರಿಸರ ಸಮತೋಲನವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು. ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಲಭ್ಯ ಇರುವ ಮ್ಮ ಜಮೀನಿನಲ್ಲಿ ತೇಗ, ಶ್ರೀಗಂಧ, ಬಿದಿರು ಮತ್ತು ಹೆಬ್ಬೇವುಗಳಂತಹ ವಾಣಿಜ್ಯ ಮರಗಳನ್ನು ಬೆಳೆಸುವುದರಿಂದ, ರೈತರು ಅನಿಶ್ಚಿತ ಬೆಳೆ ನಷ್ಟದಿಂದ ಪಾರಾಗಿ ದೀರ್ಘಕಾಲೀನ ಆರ್ಥಿಕ ಭದ್ರತೆ ಹೊಂದಲು ಸಾಧ್ಯ ಎಂದರು. ಕೂಡಿಗೆ ಗ್ರಾಮ ಪಂಚಾಯ್ತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳ ಮಾತನಾಡಿ, ರೈತರು ಅರಣ್ಯ, ಕೃಷಿ ಮತ್ತಿತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕೃಷಿಕರಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದರು. ಹುದುಗೂರಿನ ಪ್ರಗತಿಪರ ರೈತ ಐಮುಡಿಯಂಡ ಗಣೇಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಎಚ್.ಎಸ್.ರವಿ, ಡಿಆರ್ ಎಫ್ ಓ ಎನ್.ಬಿ.ಹರೀಶ್ ಕುಮಾರ್, ತಾಂತ್ರಿಕ ಸಲಹೆಗಾರರಾದ ಶೀತಲ್, ವನಪಾಲಕರಾದ ಸೋಮಶೇಖರ್, ಅನಿಲ್ ಸೇರಿದಂತೆ ಹುದಗೂರು ಮತ್ತು ಸುತ್ತಲಿನ ರೈತರು ಭಾಗವಹಿಸಿದ್ದರು.









