
ಮಡಿಕೇರಿ ಏ.7 NEWS DESK : ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಸಮುದಾಯ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ಏ.19ರ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ಎಸ್.ಗೋಪಾಲಕೃಷ್ಣ (ಗೋಪಿ) ಹಾಗೂ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುಗಾದಿ ಪ್ರಯುಕ್ತ ಸಂಘದ ವತಿಯಿಂದ ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ 10ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಕಣ್ಣಂಗಾಲ ಗ್ರಾಮದವರಾದ, ಹೊಳೆನರಸೀಪುರ ಚೆಸ್ಕಾಂ ಅಭಿಯಂತರಾದ ಕೆ.ಕೆ ಮೋಹನ್ ಕುಮಾರ್ ಹಾಗೂ ವಿರಾಜಪೇಟೆ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಕೆ.ಆರ್ ಸ್ವರೂಪ ಅವರು ಆಗಮಿಸಲಿದ್ದಾರೆ. ನಂತರ ಕುಲಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆಯಲಿದ್ದು,ಪುರಷರಿಗೆ ವಾಲಿಬಾಲ್,ಬಾಂಬ್ ಇನ್ ದ ಸಿಟಿ,ಮಹಿಳೆಯರಿಗೆ ಥ್ರೋಬಾಲ್, ಬಾಂಬ್ ಇನ್ ದ ಸಿಟಿ, ಬಾಲಕ ಮತ್ತು ಬಾಲಕಿಯರಿಗೆ 4 ರಿಂದ 6ವರ್ಷದವರಿಗೆ 100 ಮೀಟರ್ ಓಟ, 7 ರಿಂದ 12ವರ್ಷದವರಿಗೆ 100ಮೀ ಓಟ ಮತ್ತು 1 ರಿಂದ 3 ವರ್ಷದವರೆಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, 13ರಿಂದ 18 ವರ್ಷದ ಬಾಲಕ-ಬಾಲಕಿಯರಿಗೆ 100ಮೀ ಓಟದ ಸ್ಪರ್ಧೆ ನಡೆಯಲಿದೆ. ಈ ಬಾರಿ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯವರ ತೀರ್ಮಾನದಂತೆ ಕುಲಬಾಂಧವರ ಮದುವೆಯಾಗಿರುವ ಹೆಣ್ಣು ಮಕ್ಕಳು ಮತ್ತು ಅವರ ಮಕ್ಕಳು ಭಾಗವಹಿಸಬಹುದೆಂದು ಆಡಳಿತ ಮಂಡಳಿ ತಿಳಿಸಿದ್ದಾರೆ. ಕಣ್ಣಂಗಾಲ ಒಕ್ಕಲಿಗರ ಸಂಘದ ವ್ಯಾಪ್ತಿಗೆ ಒಳಪಡುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಸಂಜೆ ಐದು ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ,ಸಮಾಜ ಸೇವಕ ಹರಪಳ್ಳಿ ರವೀಂದ್ರ,ಮೈಸೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರಾದ ಈ.ಪ್ರಕಾಶ್ ಅವರು ಭಾಗವಹಿಸಲಿದ್ದಾರೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









