
ಮಡಿಕೇರಿ ಏ.9 NEWS DESK : ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಏ.14ರಂದು ಗೋಣಿಕೊಪ್ಪನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ವಸಂತ ಋತು ಫೆ.15 ರಿಂದ ಆರಂಭಗೊಂಡು ಏ.14ಕ್ಕೆ ಕೊನೆಗೊಳ್ಳುವ “ಎಡ್ಮ್ಯಾರ್” ನ್ನು ಸಿಎನ್ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 32ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಏಪ್ರಿಲ್ 14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಆರ್ಎಂಸಿ ಯಾರ್ಡ್ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡವರು ಪ್ರತ್ಯೇಕ ಮೂಲವಂಶಸ್ಥ ಜನಾಂಗವಾಗಿದ್ದು, ಅವರ ಈ ಕೆಳಗಿನ ಸ್ವಯಂ ಶಾಸನದ ಹಕ್ಕುಗಳನ್ನು ಕಾರ್ಯಕ್ರಮದಲ್ಲಿ ಪ್ರತಿಪಾದಿಸಲಾಗುವುದು. ಸಂವಿಧಾನದ ಆರ್ಟಿಕಲ್ 244 ಮತ್ತು 371 ವಿಧಿ ರಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕು ನೀಡಬೇಕು. ಸಂವಿಧಾನದ 340 ಮತ್ತು 342ನೇ ವಿಧಿಯಡಿಯಲ್ಲಿ ಮೈಕ್ರೋಸ್ಕೊಪಿಕ್ ಕೊಡವ ಜನಾಂಗದ ರಕ್ಷಣೆಯಾಗಬೇಕು. ಸಂವಿಧಾನದ 25, 26 ರ ವಿಧಿಯಡಿ ಕೊಡವರ ಧಾರ್ಮಿಕ ಸಂಸ್ಕಾರ ಗನ್ ನ್ನು ಸೇರ್ಪಡೆಗೊಳಿಸಿ ಕೋವಿ ಹೊಂದುವ ಹಕ್ಕನ್ನು ಆಭಾದಿತಗೊಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯಕ್ಕೆ “ಪ್ರಾಚೀನ ಆದಿಮಸಂಜಾತ ಏಕಜನಾಂಗೀಯ ಬುಡಕಟ್ಟು ಕುಲ” ಎಂದು ವರ್ಗಿಕರಿಸಬೇಕು ಒತ್ತಾಯಿಸುವುದಾಗಿ ಮಾಹಿತಿ ನೀಡಿದ್ದಾರೆ. ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ರೈಟ್ಸ್ ಪ್ರಕಾರ ಅಂತರಾಷ್ಟ್ರೀಯ ಕಾನೂನಿನಡಿ ರಕ್ಷಣೆ ದೊರಕಬೇಕು. ಆದಿಮಸಂಜಾತ ಕೊಡವರು ಕಳೆದುಕೊಂಡ ಪೂರ್ವಾರ್ಜಿತ ಆಸ್ತಿಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಲ್ಯಾಂಡ್ ರಿಕ್ಲೆಮಿಂಗ್ ಕಾನೂನಿನಡಿ ಮರು ಪಡೆಯವಂತಾಗಬೇಕು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಯಲ್ಲಿ ಕೊಡವ ಸಮುದಾಯಕ್ಕೆ ಸಿಕ್ಕಿಂನ ಬೌದ್ಧ ಬಿಕ್ಷುಗಳಿಗಾಗಿ “ಸಂಘ” ಮತಕ್ಷೇತ್ರವನ್ನ ಮೀಸಲಿಟ್ಟಂತೆ ಕೊಡವ ಸಮುದಾಯಕ್ಕೆ ವಿಶೇಷವಾದ ಅಮೂರ್ತ-ಅಗೋಚರ ಮತ ಕ್ಷೇತ್ರಗಳನ್ನು ರಚಿಸಬೇಕು. ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಕೊಡವ ಜನಪದ ಸಂಸ್ಕøತಿಯನ್ನು ಸೇರಿಸಬೇಕು. 1871-72 ರಿಂದ 1931 ರ ವರೆಗೆ ನಡೆಸಲಾದ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಮೂಲ ವಂಶಸ್ಥ ಜನಾಂಗವೆಂದು ವೈಜ್ಞಾನಿಕವಾಗಿ ದಾಖಲಿಸಲಾಗಿದ್ದು, ಆದರೆ 1941 ರಿಂದ 2011ರ ವರೆಗೆ ನಡೆಸಿದ ಜನಗಣತಿಯಲ್ಲಿ ಅವೈಜ್ಞಾನಿಕವಾಗಿ-ಅಸಂವಿಧಾನಿಕವಾಗಿ ಕೊಡವರನ್ನು ಇತರ ಬಲಾಡ್ಯ ಸಮುದಾಯದೊಂದಿಗೆ ವಿಲೀನಗೊಳಿಸಿ ಕೊಡವರ ಸ್ವತಂತ್ರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ನಾಶಪಡಿಸಲಾಗಿದ್ದು, ಈಗ ಅದನ್ನು 1871-72 ರಿಂದ 1931ರ ವರೆಗೆ ನಡೆಸಲಾಗಿದ್ದ ವೈಜ್ಞಾನಿಕ ಜನಗಣತಿಯ ಆಧಾರದಲ್ಲಿ ಪುನರ್ ಜನಗಣತಿ ನಡೆಸಿ, ಕೊಡವ ಹೆಗ್ಗುರುತು ಮತ್ತು ಅನನ್ಯತೆಯನ್ನು ಉಳಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ. *ಬೆಳಿಗ್ಗೆ ಉಳುಮೆ* ಪಂಜಿನ ಮೆರವಣಿಗೆಗೂ ಮೊದಲು ಏ.14 ರಂದು ಬೆಳಿಗ್ಗೆ 7 ಗಂಟೆಗೆ ಮಡಿಕೇರಿ ತಾಲ್ಲೂಕಿನ ಬೆಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕೂಪದಿರ ಒಕ್ಕದ ಮೋಹನ್ ಅವರ ಭೂಮಿಯಲ್ಲಿ ಜೋಡೆತ್ತುಗಳ ಮೂಲಕ ಎನ್.ಯು.ನಾಚಪ್ಪ ಅವರು ಉಳುಮೆ ಮಾಡುವ ಮೂಲಕ “ಎಡ್ಮ್ಯಾರ್” ಆಚರಣೆಗೆ ಚಾಲನೆ ನೀಡಲಾಗುವುದು. “ಎಡ್ಮ್ಯಾರ್” ಹಬ್ಬವು ವಸಂತ ಋತು ಫೆ.15 ರಿಂದ ಆರಂಭವಾಗಿ ಏ.14 ರಂದು ಮುಕ್ತಾಯವಾಗುವ ಹಂತವಾಗಿದೆ ಮತ್ತು ಸೂರ್ಯನು ಮೇಷ ನಕ್ಷತ್ರ ಪುಂಜಗಳತ್ತ ಸಾಗುವ ಪ್ರಕ್ರಿಯೆಯಾಗಿದೆ. ಎಲ್ಲಾ ಋತುಗಳಲ್ಲಿ ಈ ಋತು ಅತ್ಯಂತ ವರ್ಣರಂಜಿತವಾಗಿದ್ದು, ಮಹತ್ವವನ್ನು ಪಡೆದುಕೊಂಡಿದೆ. ಕೃಷಿ ಚಟುವಟಿಕೆಯ ಮೂಲಕ ಪ್ರಕೃತಿಯೊಂದಿಗೆ ಬೆರೆತು ಹೋಗಿರುವ ಬುಡಕಟ್ಟು ಜನಾಂಗ ಕೊಡವರು ಕೊಡವ ಜನಾಂಗೀಯ ಪಂಚಾಂಗದ ಪ್ರಕಾರ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ವಾರ್ಷಿಕ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸುತ್ತಾರೆ. ಕೊಡವ ಬುಡಕಟ್ಟಿನ ಹೊಸ ವರ್ಷ ಎಂದರೆ ಸೌರಮಾನ ಕ್ಯಾಲೆಂಡರ್ ಮೂಲಭೂತವಾಗಿ ಎಡ್ಮ್ಯಾರ್ 1 ಗ್ರೆಗೋರಿಯನ್ ಕ್ಯಾಲೆಂಡರ್ ನೊಂದಿಗೆ ಹೊಂದಿಕೆಯಾಗುತ್ತದೆ. ಇದು ಕೊಡವ ಬುಡಕಟ್ಟು ಜನಾಂಗದವರ ಕೃಷಿ ಚಟುವಟಿಕೆಗಳ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಪ್ರಕೃತಿಯನ್ನು ಆರಾಧಿಸುವ ಕೊಡವರು ಎಡ್ಮ್ಯಾರ್ 1 ನ್ನು ಅತಿ ಉತ್ಸಾಹದಿಂದ ಆಚರಿಸಿ ಭೂದೇವಿಗೆ ನಮಿಸುತ್ತಾರೆ. ಈ ಜನಪದೀಯ ಬುಡಕಟ್ಟು ಆಚರಣೆ ಇಡೀ ವಿಶ್ವಕ್ಕೆ ಪರಿಚಯವಾಗಬೇಕು ಎನ್ನುವ ಉದ್ದೇಶದಿಂದ ಸಿಎನ್ಸಿ ಸಂಘಟನೆ ಪ್ರತಿವರ್ಷ ಸಾರ್ವಜನಿಕವಾಗಿ “ಎಡ್ಮ್ಯಾರ್” ನ್ನು ಆಚರಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.









