
ಮಡಿಕೇರಿ ಏ.10 NEWS DESK : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (ಎಐ & ಎಂಎಲ್) ವಿಭಾಗದಲ್ಲಿ “ಕೃತಕ ಬುದ್ಧಿಮತ್ತೆ – ಒಬ್ಬ ನಿಜವಾದ ಎಂಜಿನಿಯರ್ ಏನು ಮಾಡುತ್ತಾನೆ?” ಎಂಬ ವಿಷಯದಡಿ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಖ್ಯಾತ ತಂತ್ರಜ್ಞಾನ ಉದ್ಯಮಿ ಎಚ್. ರಾಮ್ ಪ್ರಕಾಶ್ ಅವರು “ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರೂ ಕೃತಕ ಬುದ್ಧಿಮತ್ತೆಯನ್ನು ಕಲಿಯಬೇಕು, ಅದನ್ನು ಅಭ್ಯಾಸ ಮಾಡಬೇಕು ಮತ್ತು ಅದರೊಂದಿಗೆ ಬದುಕಲು ಕಲಿಯಬೇಕು. ಕೃತಕ ಬುದ್ಧಿಮತ್ತೆ ಮಾನವನಿಗೆ ಬೆದರಿಕೆ ಅಲ್ಲ; ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಮಾನವ ಜೀವನವನ್ನು ಸುಧಾರಿಸುತ್ತದೆ,” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಸವರಾಜ್, “ಕೃತಕ ಬುದ್ಧಿಮತ್ತೆ ನಮ್ಮನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು,” ಎಂದು ಹೇಳಿದರು. ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಮಾತನಾಡಿ, “ಇಂತಹ ಮಹಾನ್ ವ್ಯಕ್ತಿತ್ವ ಕಾಲೇಜಿಗೆ ಭೇಟಿ ನೀಡಿರುವುದು ನಮ್ಮ ಭಾಗ್ಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ದಾರಿಗಳನ್ನು ತೆರೆದಿದೆ ಎಂದರು. ಉದ್ಯಮಿ ರಾಮ್ ಪ್ರಕಾಶ್ ಅವರು 17 ವರ್ಷಗಳ ಅನುಭವ ಹೊಂದಿರುವ ಅವರು ದಶಕಕ್ಕೂ ಹೆಚ್ಚು ಕಾಲ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಭಾರತೀಯ ಭಾಷೆಗಳಿಗಾಗಿ ಮೆಷಿನ್ ಲರ್ನಿಂಗ್ ಆಧಾರಿತ ಪ್ರಥಮ ಟ್ರಾನ್ಸ್ಲಿಟರೇಶನ್ ಸಾಧನವಾದ ಕ್ವಿಲ್ಪ್ಯಾಡ್ ಅನ್ನು ರೂಪಿಸಿದಕ್ಕಾಗಿ 2010ರಲ್ಲಿ ಎಂಐಟಿ ಟಿಆರ್ 35 ಯುವ ನವೋದ್ಯಮಿ ಪ್ರಶಸ್ತಿಗೆ ಭಾಜನರಾದರು. ಅವರು ಕಾಗ್ನಿರೆಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ಥಾಪಿಸಿ, ಶಿಕ್ಷಣ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅವರು ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಕುಟೆನ್ ಇಂಡಿಯಾ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಮುಖ್ಯ ವಾಸ್ತುಶಿಲ್ಪಿ ಎ.ಪಿ. ಪ್ರದೀಪ್ ಹಾಜರಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ಪ್ರೊ. ಬಬಿತಾ ಸ್ವಾಗತಿಸಿದರು.









