
ಮಡಿಕೇರಿ ಏ.12 : ಈಜಲೆಂದು ಕೆರೆಗೆ ಇಳಿದ ಬಾಲಕ ಹಾಗೂ ಯುವಕ ನೀರು ಪಾಲಾದ ಘಟನೆ ಶನಿವಾರ ಸಂಜೆ ದಕ್ಷಿಣ ಕೊಡಗಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳಲೆ ನಿವಾಸಿ ಪ್ರಕಾಶ ಹಾಗೂ ಚಂದ್ರಿಕ ದಂಪತಿಗಳ ಪುತ್ರ, ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗೌತಮ್(12) ಮತ್ತು ಮಂಜುಳಾ ಹಾಗೂ ದಿ.ರಾಜು ಎಂಬುವವರ ಪುತ್ರ ಕೃಷ್ಣ(22) ಮೃತ ದುರ್ದೈವಿಗಳಾಗಿದ್ದಾರೆ. ಶನಿವಾರ ಸಂಜೆ ಇಬ್ಬರು ಬಾಳಲೆ ಗ್ರಾಮದ ಕೊಟ್ಟಕೇರಿ ಮಾರಿಗುಡಿ ಎಂಬಲ್ಲಿರುವ ಕೆರೆಗೆ ಈಜಲು ತೆರಳಿದ್ದು, ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಗೋಣಿಕೊಪ್ಪ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರ ಮೃತದೇಹಗಳನ್ನು ಹೊರ ತೆಗೆದರು. ಘಟನೆ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಗೋಣಿಕೊಪ್ಪ ಅಗ್ನಿ ಶಾಮಕ ದಳದ ಪ್ರಬಾರ ಠಾಣಾಧಿಕಾರಿ ಸುನಿಲ್ ಕುಮಾರ್, ಪ್ರಮುಖ ಅಗ್ನಿ ಶಾಮಕ ಜಗದೀಶ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.








