
ಗೋಣಿಕೊಪ್ಪಲು ಏ.13 NEWS DESK : ಸಾರ್ವಜನಿಕರಿಂದ ಸಹಕಾರ ಪಡೆದು ಸರಕಾರದ ಯಾವುದೇ ಅನುದಾನ ಇಲ್ಲದೆ ಪಾರದರ್ಶಕ ಲೆಕ್ಕಪತ್ರ ಇಟ್ಟು, ಕುಟ್ಟ ವಲಯದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯನ್ನು ನೂತನವಾಗಿ ನಿರ್ಮಿಸಿದ್ದು ಬಹುದೊಡ್ಡ ಸಾಧನೆ ಎಂದು ವಿರಾಜಪೇಟೆ ಪೊಲೀಸ್ ಉಪವಿಭಾಗಾಧಿಕಾರಿ ಮಹೇಶ್ ಕುಮಾರ್ ನುಡಿದರು. ಕುಟ್ಟ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ನೂತನ ವೃತ್ತನಿರೀಕ್ಷಕರ ಕಟ್ಟಡ ನಿರ್ಮಿಸಲು ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕಚೇರಿಯನ್ನು ನಿರ್ಮಿಸುವ ಸಲುವಾಗಿ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಮರಾಜನ್ ಅವರ ಅನುಮತಿಯ ಮೇಲೆ ಈ ಕಾರ್ಯ ನಡೆದಿದೆ. ಆದರೆ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಮೂರ್ತಿಯವರ ಸಾಧನೆಯ ಫಲ ಇದಾಗಿದೆ. ಕೇವಲ 2 ರಿಂದ 3 ವರ್ಷಗಳ ಕಾಲ ಒಂದು ಠಾಣೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ನನಗೇಕೆ ಈ ಉಸಾಬರಿ ಎನ್ನುವ ಈ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಪಡೆದು ನೂತನ ಕಚೇರಿ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಟಿ.ಶೆಟ್ಟಿಗೇರಿಯ ಮಚ್ಚಮಾಡ ಸುಮಂತ್ ಮಾತನಾಡಿ, ತಾವು ತಮ್ಮದೇ ಊರಿನ ಪೊಲೀಸ್ ಠಾಣೆ ಸುಸಜ್ಜಿತವಾಗಿರಬೇಕು. ಸಾರ್ವಜನಿಕರಿಗೆ ಉಪಯುಕ್ತವಾಗಿರಬೇಕು ಎನ್ನುವ ದೃಷ್ಠಿಯಿಂದ ಸಹಕಾರ ನೀಡಿರುವುದಾಗಿದೆ ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಸಾರ್ವಜನಿಕ ಸಹಕಾರದೊಂದಿಗೆ ನೂತನ ಕಟ್ಟಡ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿ ಆಗುತ್ತಿರುವುದು ಶ್ಲಾಘನೀಯ. ಅಲ್ಲದೆ ತಮ್ಮೆಲ್ಲ ಒತ್ತಡಗಳ ನಡುವೆಯೂ ಕೂಡ ಮನರಂಜನೆಯ ಅವಶ್ಯಕತೆ ಇರುವುದನ್ನು ಮನಗೊಂಡು ವಿರಾಜಪೇಟೆಯ ಡಿವೈಎಸ್ಪಿ ಮಹೇಶ್ ಕುಮಾರ್ ರವರು ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಪೊಲೀಸ್ ಸಾಂಸ್ಕೃತಿಕ ಕೇಂದ್ರವನ್ನು ಕೂಡ ಪ್ರಾರಂಭಿಸಿರುವುದು ಇಲಾಖೆಯೊಳಗಿನ ಒಂದು ವಿಶೇಷ ಬೆಳವಣಿಗೆ ಎನ್ನಬಹುದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಮಾತನಾಡುತ್ತ ತುಂಬಾ ಕೆಟ್ಟದಾಗಿ ಬೀಳುವ ಸ್ಥಿತಿಯಲ್ಲಿದ್ದ ವೃತ್ತನಿರೀಕ್ಷಕರ ವಸತಿ ಗೃಹವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಾಣಮಾಡಿ ಸಾರ್ವಜನಿಕ ಉಪಯೋಗಕ್ಕೆ ನೀಡಿರುವುದು ಸ್ವಾಗತಾರ್ಹ ಎಂದರು. ಸಹಕಾರ ನೀಡಿದ 30 ಜನರನ್ನು, ರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ವೃತ್ತನಿರೀಕ್ಷಕ ಶಿವಮೂರ್ತಿ ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಇಂತಹ ಒಂದು ಸಾಧನೆ ಮಾಡಿದ ವೃತ್ತನಿರೀಕ್ಷಕ ಶಿವಮೂರ್ತಿ ಅವರನ್ನು ಸಾರ್ವಜನಿಕರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕುಟ್ಟ ಠಾಣಾಧಿಕಾರಿ ತಮ್ಮಯ್ಯ, ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಅಲ್ಲದೆ ಪೊಲೀಸಿ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.










