
ಮಡಿಕೇರಿ NEWS DESK ಮೇ 14 : ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 53 ಗಂಟೆಗಳ ಸತ್ಯಾಗ್ರಹವನ್ನು ಪೂರ್ಣಗೊಳಿಸಿತು. ನಗರದ ಕೊಡವ ಮಂದ್ ನಲ್ಲಿ ಸತ್ಯಾಗ್ರಹ ನಡೆಸಿದ ಸಿಎನ್ಸಿ ತನ್ನ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಿತು. ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಶಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು. ಹೈಕೋರ್ಟ್ ವಕೀಲ ಕಿರಣ್ ನಾರಾಯಣ್ ಅವರು ಕೂಡ ಸತ್ಯಾಗ್ರಹ ನಿರತರನ್ನು ಭೇಟಿಯಾಗಿ ಚರ್ಚಿಸಿದರು. ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಎನ್.ಯು.ನಾಚಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬೇಡಿಕೆಯ ಬಗ್ಗೆ ಮನವರಿಕೆ ಮಾಡಿಕೊಂಡರು. ಕಳೆದ 36 ವರ್ಷಗಳಿಂದ ಭೌಗೋಳಿಕ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಮೂಲನಿವಾಸಿ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಸಿಎನ್ಸಿ ನಿರಂತರ ಶಾಂತಿಯುತ ಹೋರಾಟವನ್ನು ನಡೆಸುತ್ತಾ ಬಂದಿದೆ. ಕೊಡವರಿಗೆ ಸಾಂವಿಧಾನಿಕ ರಾಜಕೀಯ ಭದ್ರತೆ ಮತ್ತು ಪ್ರಾತಿನಿಧ್ಯಕ್ಕಾಗಿ ಪ್ರಸ್ತುತ ಪ್ರತ್ಯೇಕ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರ ರಚನೆಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕಾಗಿ ಇರುವ “ಸಂಘ” ಕ್ಷೇತ್ರದ ಮಾದರಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕ್ಷೇತ್ರವನ್ನು ರಚಿಸಬೇಕು. 2027ರ ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು. ಕೊಡವರು ಒಂದು ಜಾತಿಯೂ ಅಲ್ಲ ಅಥವಾ ಧರ್ಮವೂ ಅಲ್ಲ. ನಾವು ಒಂದು ಪ್ರಕೃತಿ ಆರಾಧಕ ಜನಾಂಗೀಯ ಸಮುದಾಯ. ಆದ್ದರಿಂದ, ನಮ್ಮ ಕಾನೂನುಬದ್ಧ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು ಪ್ರತ್ಯೇಕ ಜನಗಣತಿಯೇ ಏಕೈಕ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು. ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಸವಿತಾ ತಿಮ್ಮಯ್ಯ, ನಂದಿನೆರವoಡ ನಿಶಾ ಅಚ್ಚಯ್ಯ, ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ಬೊಪ್ಪಂಡ ಸರಳಾ, ಕನ್ನಂಡ ಕವಿತಾ ಬೊಳ್ಳಿಯಪ್ಪ, ಮೇಧುರ ಗಂಗಮ್ಮ ಕಾವೇರಪ್ಪ, ಮೇಧುರ ಶ್ರೇಯ ಮುತ್ತಮ್ಮ, ಬಾಚರಣಿಯಂಡ ಚಿಪ್ಪಣ್ಣ, ನಂದೇಟಿರ ರವಿ ಸುಬ್ಬಯ್ಯ, ಮಂದಪoಡ ಮನೋಜ್ ಮಂದಣ್ಣ, ಅರೆಯದ ಗಿರೀಶ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಪುಲ್ಲೇರ ಕಾಳಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವoಡ ದಿನೇಶ್, ನಿರ್ದೇಶಕರಾದ ನಂದಿನೆರವoಡ ರವಿ ಬಸಪ್ಪ, ಮೂವೇರ ಜಯರಾಮ್, ಶಾಂತೆಯoಡ ವಿಶಾಲ್, ಕಾಳಚಂಡ ಅಪ್ಪಣ್ಣ, ಉದಿಯಂಡ ಚೆಂಗಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ, ನಂದಿನೆರವoಡ ವಿಜು, ಮೇದುರ ಕಂಠಿ ನಾಣಿಯಪ್ಪ, ನಂದಿನೆರವoಡ ಅಯ್ಯಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಬೊಳ್ಳಾರಪಂಡ ಮಾಚಯ್ಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಪುದಿಯೋಕಡ ಕಾಶಿ ಕರುಂಬಯ್ಯ, ಪಾಲೆಕಂಡ ಪ್ರಧಾನ್ ಪೂಣಚ್ಚ, ಸಾದೇರ ರಮೇಶ್, ಅಚ್ಚಕಾಳೇರ ನವೀನ್ ಮೊನ್ನಪ್ಪ, ಅಪ್ಪಾರಂಡ ಪ್ರಸಾದ್, ಮೇದುರ ಯಶ್ ಉತ್ತಪ್ಪ ಪಾಲ್ಗೊಂಡಿದ್ದರು. ದೆಹಲಿ ಕೊಡವ ಸಮಾಜದ ಅಧ್ಯಕ್ಷರಾದ ಮಾಚಿಮಂಡ ತಮ್ಮು ಕಾರ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ ಅಜ್ಜಿಕಂಡ ಮಹೇಶ್ ನಾಚಯ್ಯ, ಸಮಾಜ ಸೇವಕ ತೆನ್ನಿರ ಮೈನಾ ಅವರು ಮಾತನಾಡಿ ಬೆಂಬಲ ಸೂಚಿಸಿದರು. ಹೈಕೋರ್ಟ್ ವಕೀಲ ಬೊಳ್ಳಾರಪಂಡ ಬೋಪಣ್ಣ ಹಾಗೂ ಸೂರಜ್ ಹೊಸೂರು ಹಾಜರಿದ್ದರು. ಮನವಿಯ ಪ್ರತಿಗಳನ್ನು ಕರ್ನಾಟಕದ ಮುಖ್ಯಮಂತ್ರಿಗಳು, ಕೇಂದ್ರ ಗೃಹ ಸಚಿವರು, ಕೇಂದ್ರ ಕಾನೂನು ಸಚಿವರು ಮತ್ತು ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಿಗೆ ರವಾನಿಸಲಾಯಿತು. ತಮ್ಮ ಪ್ರಭಾವಿ ಸ್ಥಾನವನ್ನು ಬಳಸಿಕೊಂಡು ಉನ್ನತ ಸಾಂವಿಧಾನಿಕ ಪ್ರಾಧಿಕಾರಗಳಿಗೆ ಮನವಿಯನ್ನು ತಲುಪಿಸುವಂತೆ ಎ.ಎಸ್.ಪೊನ್ನಣ್ಣ ಅವರಲ್ಲಿ ಎನ್.ಯು.ನಾಚಪ್ಪ ಅವರು ಮನವಿ ಮಾಡಿದರು. ವಿವಿಧ ಜನಾಂಗೀಯ ಗುಂಪುಗಳಿಗೆ ಸ್ಥಳಾವಕಾಶ ನೀಡಲು ಹೊಸ ಸಂಸತ್ತಿನಲ್ಲಿ ಈಗಾಗಲೇ 850 ಆಸನಗಳ ವ್ಯವಸ್ಥೆ ಮಾಡಲಾಗಿದೆ. ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಕೊಡವರಿಗೂ ಸ್ಥಾನಮಾನ ನೀಡಬೇಕೆಂದು ತಿಳಿಸಿದರು.









