
ಮಡಿಕೇರಿ NEWS DESK ಜೂ.13 : ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮೂರನೇ ವರ್ಷದ “ವಿದ್ಯಾನಿಧಿ ವಿತರಣೆ” ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರ 50 ಮಕ್ಕಳಿಗೆ 2.26 ಲಕ್ಷ ರೂ. ನೆರವನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿತ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಕಲ್ಲಡ್ಕದ ನಾರಾಯಣ ಗೌಡ ಅವರು ಜ್ಯೋತಿ ಬೆಳಗಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು, ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಭಾವನೆ ಒಟ್ಟು ಸೇರಿದಾಗ ಮಾತ್ರ ಸಾಧನೆ ಸಾಧ್ಯ. ಕೊಡಗು ಪತ್ರಿಕಾ ಭವನ ಟ್ರಸ್ಟ್ ವಿದ್ಯಾನಿಧಿಯ ಮೂಲಕ ದೊಡ್ಡ ಮೊತ್ತದ ನೆರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಉತ್ತಮ ಕಾರ್ಯವೆಂದು ಮೆಚ್ಚುಗೆಯ ವ್ಯಕ್ತಪಡಿಸಿದರು. ಇಂದು ವಿದ್ಯೆಯನ್ನು ಖರೀದಿಸುವ ಕಾರ್ಯವಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ನಿಡಬೇಕೆನ್ನುವುದು ಹಿರಿಯರ ಅಭಿಲಾಷೆಯಾಗಿತ್ತು. ಆದರೆ, ಇಂದು ಇವೆರಡು ದುಬಾರಿಯಾಗಿದೆ. ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಇಂದು ಅಸಾಧ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎದುರಾಗಿದೆ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದರೂ, ಮಕ್ಕಳ ಕೊರತೆ ಎದುರಾಗಿದೆ. ಸರಕಾರಿ ಶಾಲೆಗಳಲ್ಲಿ ಹಾಲು, ಹಣ್ಣು, ಊಟ, ಮೊಟ್ಟೆ, ಎಲ್ಲವೂ ಸಿಗುತ್ತದೆ, ಆದರೆ, ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರೇ ಇಂದು ಶಾಲೆಯನ್ನು ಮುನ್ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಒಬ್ಬರು ಅಥವಾ ಇಬ್ಬರು ಅಧ್ಯಾಪಕರು ಇಡೀ ಶಾಲೆಯನ್ನು ನಿಭಾಯಿಸಬೇಕಾಗಿದೆ. ಪಠ್ಯ ಚಟುವಟಿಕೆಯ ಜೊತೆಯಲ್ಲಿ 10 ರೂ. ಗಳಿಗೆ ನೀಡಿದ ಊಟದ ಲೆಕ್ಕವನ್ನು ನೀಡಬೇಕಾಗಿದೆ. ಇದರ ಲೆಕ್ಕ ನೀಡಲು ನೆಟ್ ವರ್ಕ್ ಸಮಸ್ಯೆಯಿಂದ ಬೆಟ್ಟದ ತುದಿಯನ್ನು ಏರಬೆೆÃಕಾಗಿದೆಯೆಂದು ಪ್ರಸ್ತುತ ವ್ಯವಸ್ಥೆಯನ್ನು ನಾರಾಯಣ ಗೌಡ ವಿಶ್ಲೇಷಿಸಿದರು. ಸರಕಾರಿ ಶಾಲಾ ಶಿಕ್ಷಕರಿಗೆ ಪ್ರತಿ ವರ್ಷ, 20 ರಿಂದ 25 ದಿನ ತರಬೇತಿ ನೀಡಲಾಗುತ್ತದೆ. ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಈ ವ್ಯವಸ್ಥೆ ಇಲ್ಲ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ.
*ಪೆಟ್ಟು ಕೊಟ್ರೆ ಎಫ್ಐಆರ್* ಇಂದು ಮಕ್ಕಳಿಗೆ ಯಾರೂ ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ. ಹಿಂದೆ ಮಕ್ಕಳಿಗೆ ಶಿಕ್ಷಕರು “ಪೆಟ್ಟು” ನೀಡಿದರೆ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು “ಇನ್ನೆರಡು ಪೆಟ್ಟು ಕೊಡಿ” ಎಂದು ಶಿಕ್ಷಕರನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆÀ ಇಂದು ಪರಿಸ್ಥಿತಿ ಬದಲಾಗಿದ್ದು, ವಿದ್ಯಾರ್ಥಿಗಳಿಗೆ ಪೆಟ್ಟು ಕೊಡುವ ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಾಗುತ್ತದೆ, ಶಿಕ್ಷಕ ಬಂಧನಕ್ಕೆ ಒಳಗಾಗುವಂತಹ ದುಸ್ಥಿತಿ ಬಂದೊದಗಿದೆ. ಮಕ್ಕಳಿಗೆ ಪೆಟ್ಟು ತಪ್ಪಿಸುವ ಹಕ್ಕು ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. *ಬೆಂಕಿ ಪೆಟ್ಟಿಗೆಯಿಂದ ನಾಶ* ವಿದ್ಯಾರ್ಥಿಗಳು ಭಾವನೆಯನ್ನು ಬೆಳೆಸಿಕೊಳ್ಳಬೇಕು, ಇಂದು ಮಕ್ಕಳಲ್ಲಿ ಭಾವನೆಗಳು ಇಲ್ಲದಂತಾಗಿದೆ. ಮೊಬೈಲ್ ಎನ್ನುವ ಬೆಂಕಿ ಪೆಟ್ಟಿಗೆ ಸರ್ವನಾಶ ಮಾಡುತ್ತಿದೆ. ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇರಬೇಕು. ಅದೇ ರೀತಿ ವಿದ್ಯಾರ್ಥಿಗಳು ಸ್ಮಾರ್ಟ್ ಆಗಿರಬೇಕು, ಮೊಬೈಲ್ ಸದುಪಯೋಗವಾಗಬೇಕು. ಮೊಬೈಲ್ನ ಮೇಲೆ ನಿಯಂತ್ರಣ ಸಾಧಿಸಬೇಕು, ಹಾಗಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ. ವಿದ್ಯಾರ್ಥಿಗಳು ವಿದ್ಯಾನಿಧಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಬೇಕು. ಸಂಪಾದನೆ ಮಾಡಿದ ಹಣದಲ್ಲಿ ಒಂದು ಪಾಲನ್ನು ಭವಿಷ್ಯದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಗೆ ವಿನಿಯೋಗಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ನಾರಾಯಣ ಗೌಡ ಕಿವಿಮಾತು ಹೇಳಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಅವರು ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿರಂತರ ಸಾಮಾಜಿಕ ಕಳಕಳಿಯನ್ನು ಸದ್ದುಗದ್ದಲವಿಲ್ಲದೆ ತೋರುತ್ತಾ ಬಂದಿದೆ. ಕೋವಿಡ್, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಆಹಾರದ ಕಿಟ್ಗಳನ್ನು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ವಿತರಿಸಿದೆ. 2024 ರಿಂದ ವಿದ್ಯಾನಿಧಿ ವಿತರಣೆಯನ್ನು ವ್ಯವಸ್ಥಿತವಾಗಿ ಆರಂಭಿಸಲಾಗಿದ್ದು, ಆರಂಭಿಕ ವರ್ಷದಲ್ಲಿ 1.60 ಲಕ್ಷ ರೂ., 2025 ರಲ್ಲಿ 28 ವಿದ್ಯಾರ್ಥಿಗಳಿಗೆ 2.19 ಲಕ್ಷ ರೂ. ನೀಡಲಾಗಿದ್ದು, ಪ್ರಸ್ತುತ ವರ್ಷ 50 ವಿದ್ಯಾರ್ಥಿಗಳಿಗೆ 2.26 ಲಕ್ಷ ರೂ. ನೀಡಲಾಗುತ್ತಿದೆಯೆಂದು ತಿಳಿಸಿದರು. ಮುಂದೆಯೂ ಟ್ರಸ್ಟ್ ನೀಡುವ ಎಲ್ಲಾ ಸೌಲಭ್ಯಗಳನ್ನು ಪತ್ರಕರ್ತರು ಹಾಗೂ ಅವರ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ಟ್ರಸ್ಟಿಗಳಾದ ಟಿ.ಪಿ.ರಮೇಶ್ ಅವರು ಮಾತನಾಡಿ, ವಿದ್ಯಾನಿಧಿಯನ್ನು ಪಡೆಯುವ ಮಕ್ಕಳು ನಿಶ್ಚಿತವಾದ ಗುರಿಸಾಧನೆಯತ್ತ ದೃಢವಾದ ಹೆಜ್ಜೆಗಳನ್ನಿರಿಸಬೇಕು. ಶೈಕ್ಷಣಿಕ ಹಂತದಲ್ಲಿ ಇಡುವ ಒಂದು ತಪ್ಪು ಹೆಜ್ಜೆಯಿಂದ ಮಕ್ಕಳ ಭವಿಷ್ಯ ಹಾಳಾಗಬಹುದೆಂದು ಎಚ್ಚರಿಸಿದ ಅವರು, ಶಿಕ್ಷಣದ ಹಂತದಲ್ಲಿ ಮಕ್ಕಳು ಹಾದಿ ತಪ್ಪದಂತೆ ಪೋಷಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ಬೆಳ್ಳಿ ಮಹೋತ್ಸವ ಆಚರಣೆಯ ಹೊಸ್ತಿಲಲ್ಲಿದ್ದು, ಆ ಸಮಾರಂಭದ ಸಂದರ್ಭ ವಿದ್ಯಾನಿಧಿಯಿಂದ ನೆರವು ಪಡೆದ ಎಲ್ಲಾ ಮಕ್ಕಳನ್ನೂ ಆಹ್ವಾನಿಸುವಂತಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ ದೊರಕುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಅದು ಬುದ್ಧಿವಂತಿಕೆಯಾಗುತ್ತದೆ. ಮಕ್ಕಳು ತಮ್ಮ ಶಿಕ್ಷಣದ ಹಂತದಲ್ಲಿ ಪಾಠ ಪ್ರವಚನಗಳೊಂದಿಗೆ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು. ಶಿಕ್ಷಣದ ಬಳಿಕ ಎದುರಾಗುವ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಾಮನ್ಯ ಜ್ಞಾನ ಅತ್ಯಂತ ಸಹಕಾರಿಯಾಗಲಿದೆ. ಟ್ರಸ್ಟ್ ಮೂಲಕ ನೀಡುತ್ತಿರುವ ವಿದ್ಯಾನಿಧಿ ಪಡೆಯುವ ಮಕ್ಕಳು, ಭವಿಷ್ಯದಲ್ಲಿ ತಾವು ಸಮಾಜಕ್ಕೆ ಏನನ್ನಾದರು ನೀಡುವಂತಹ ಸಾಮರ್ಥ್ಯವನ್ನು ಪಡೆಯಬೇಕೆಂದರು. ಟ್ರಸ್ಟಿ ಅನಿಲ್ ಎಚ್.ಟಿ. ಅವರು ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ಪ್ರಸಕ್ತ ಸಾಲಿನ ಅ.15 ರಂದು ಪತ್ರಿಕಾ ಭವನ 25 ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ ಎಂದು ತಿಳಿಸಿದರು.
ವಿದ್ಯಾನಿಧಿ ಪಡೆದ ಮಕ್ಕಳ ಪೋಷಕರಾದ ಜಿ.ವಿ.ರವಿ ಕುಮಾರ್, ಅನುಷಾ, ರಂಜಿತ್ ಕವಲಪಾರ, ಕುಡೆಕಲ್ ಸಂತೋಷ್. ಎಸ್.ಎ. ಮುರಳೀಧರ್ ಅವರು ಮಾತನಾಡಿ, ಟ್ರಸ್ಟ್ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದು ಮಕ್ಕಳಲ್ಲಿ ತಾವು ಸಮಾಜಕ್ಕೆ ಏನನ್ನಾದರು ನೀಡಬೇಕೆನ್ನುವ ಚಿಂತನೆಯನ್ನು ಹುಟ್ಟು ಹಾಕುತ್ತಿದೆ ಎಂದರು. ಪತ್ರಕರ್ತ ನವೀನ್ ಚಿಣ್ಣಪ್ಪ ಪ್ರಾರ್ಥಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಕೋಶಾಧಿಕಾರಿ ಕೆ.ತಿಮ್ಮಪ್ಪ ಸ್ವಾಗತಿಸಿದರು. ಟ್ರಸ್ಟಿ ಮಧೋಷ್ ಪೂವಯ್ಯ ಉದ್ಘಾಟಕರ ಪರಿಚಯ ಮಾಡಿಕೊಟ್ಟರು, ಟ್ರಸ್ಟಿ ವಿ.ಪಿ.ಸುರೇಶ್ ವಂದಿಸಿದರು.









