
ಮಡಿಕೇರಿ ಜು.9 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ತಮ್ಮ ಜನ್ಮದಿನದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ, ಕ್ಷೇತ್ರದಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. :: ದೇವಾಲಯಕ್ಕೆ ಭೇಟಿ :: ಶಾಸಕರು ಮೊದಲಿಗೆ ಪ್ರಸಿದ್ಧ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಲಕಾವೇರಿಗೆ ತೆರಳಿ ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. :: ಮಕ್ಕಳೊಂದಿಗೆ ಜನ್ಮದಿನದ ಸಂಭ್ರಮ :: ಧಾರ್ಮಿಕ ಕಾರ್ಯಕ್ರಮಗಳ ನಂತರ ಭಾಗಮಂಡಲದ ಅಟಲ್ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭ ಮಕ್ಕಳಿಗೆ ಜೀವನದಲ್ಲಿ ಶಿಸ್ತು ಮತ್ತು ವಿದ್ಯಾಭ್ಯಾಸದ ಮಹತ್ವದ ಕುರಿತು ಸಲಹೆ ನೀಡಿದರು. :: ರಸ್ತೆ ಹಾಗೂ ಬಸ್ ತಂಗುದಾಣ ಲೋಕಾರ್ಪಣೆ ::
ಭಾಗಮಂಡಲ ಹಾಗೂ ಕುಂದಚೇರಿಯಲ್ಲಿ ನೂತನವಾಗಿ ನಿರ್ಮಾಣವಾದ ರಸ್ತೆಗಳನ್ನು ಶಾಸಕರು ಲೋಕಾರ್ಪಣೆಗೊಳಿಸಿದರು. ಗೋಣಿಕೊಪ್ಪಲುವಿನಲ್ಲಿ ‘ಕೊಳ್ಳಿಮಾಡ ಸಿ. ಕರುಂಬಯ್ಯ’ ಅವರ ಹೆಸರಿನಲ್ಲಿ ನೂತನವಾಗಿ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಉದ್ಘಾಟಿಸಿದರು. ಪೊನ್ನಂಪೇಟೆಯ ನೂತನ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಪೊನ್ನಂಪೇಟೆಯ ಪ್ರಮುಖರು ಶಾಸಕರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. :: ಪುತ್ಥಳಿ ಅನಾವರಣ ಮತ್ತು ಹಕ್ಕು ಪತ್ರ ವಿತರಣೆ :: ಗೋಣಿಕೊಪ್ಪಲುವಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಳಿಯಪ್ಪ ಅವರ ಪುತ್ಥಳಿಯನ್ನು ಶಾಸಕರು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಬಹಳ ದಿನಗಳಿಂದ ಹಕ್ಕು ಪತ್ರದಿಂದ ವಂಚಿತರಾಗಿದ್ದ ಗೋಣಿಕೊಪ್ಪ ಭಾಗದ ನೂರಾರು ನಿವಾಸಿಗಳಿಗೆ ಶಾಸಕರ ಹಸ್ತದಿಂದ ಹಕ್ಕು ಪತ್ರಗಳನ್ನು ವಿತರಿಸಲಾಯಿತು. :: ಆರೋಗ್ಯ ಶಿಬಿರ ಮತ್ತು ವೃದ್ಧಾಶ್ರಮಕ್ಕೆ ಭೇಟಿ :: ವಿರಾಜಪೇಟೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕರ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕರು ಭಾಗವಹಿಸಿದರು. ಬಳಿಕ ಹೆಗ್ಗಳ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ನೇರವಾಗಿ ತೆರಳಿದ ಶಾಸಕರು, ಅಲ್ಲಿನ ಹಿರಿಯ ಜೀವಗಳೊಂದಿಗೆ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ವೃದ್ಧಾಶ್ರಮದ ನಿವಾಸಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಶಾಸಕರು, ತಮ್ಮ ಸ್ವಂತ ವೆಚ್ಚದಲ್ಲಿ ಆಶ್ರಮಕ್ಕೆ ಫ್ಯಾನ್, ಟೇಬಲ್ ಹಾಗೂ ಟಿವಿಯನ್ನು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮಗಳಲ್ಲಿ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಪುತ್ರಿಯರು, ಶಾಸಕರ ಸಹೋದರ ನರೇನ್ ಕಾರ್ಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ನ ಮಿದೇರಿರ ನವೀನ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾರ್ಯಾಧ್ಯಕ್ಷ ಸೌಕಾತ್ ಆಲಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು, ವಲಯ ಮತ್ತು ಬೂತ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದು ಶಾಸಕರಿಗೆ ಶುಭ ಹಾರೈಸಿದರು.









