
ಮಡಿಕೇರಿ NEWS DESK ಜು.10 : ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮತ್ತು ಬಿಸಿಯೂಟ ನೌಕರರ ಸಂಘ ಇಂದು “ಕರಾಳ ದಿನ”ವನ್ನಾಗಿ ಘೋಷಿಸಿಕೊಂಡು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿತು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಮತ್ತು ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು. *ಬೇಡಿಕೆಗಳು* ರಾಜ್ಯ ಸರ್ಕಾರ ಈ ಹಿಂದೆ ಚುನಾವಣೆ ಸಂದರ್ಭ ನಿಡಿದ್ದ ಭರವಸೆಯಂತೆ ಅಂಗನವಾಡಿ ಕಾಯ್ಕತೆರ್ಯರಿಗೆ 15 ಸಾವಿರ ರೂ. ಮತ್ತು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಕನಿಷ್ಟ ಗೌರವ ಧನವನ್ನು ಜಾರಿ ಮಾಡಬೇಕು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ಕೆಜಿ ಮತ್ತು ಯುಕೆಜಿ ವಿಸ್ತರಣೆ ಆಗಬೇಕು ಮತ್ತು ರಾಜ್ಯದ 10ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ -ಯುಕೆಜಿ ಆರಂಭಕ್ಕೆ ಅನುದಾನ ನೀಡಬೇಕು. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ-ಕಮ್-ಶಿಶುಪಾಲನಾ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಹಾಗೂ ಅಂಗನವಾಡಿ ಸಿಬ್ಬಂದಿಗಳನ್ನು ಎಸ್ಐಆರ್ ಸೇರಿದಂತೆ ಯಾವುದೇ ಸಮೀಕ್ಷಾ ಕೆಸಲಗಳಿಂದ ಮುಕ್ತಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಮೂಲಸೌಕರ್ಯ, ಗ್ಯಾಸ್ ಸಂಪರ್ಕ, ಅಡುಗೆ ಸಲಕರಣೆಗಳು ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳ ಬಾಡಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.
*ಬಿಸಿಯೂಟ ನೌಕರರ ಬೇಡಿಕೆ* “ಅಕ್ಷರ ದಾಸೋಹ” ಯೋಜನೆಯನ್ನು ಪ್ರಾರಂಭಿಸಿ 25 ವರ್ಷಗಳಾಗಿದೆ. ಬೆಲೆಯೇರಿಕೆಯ ಆಧಾರದಲ್ಲಿ ಯೋಜನೆಗೆ ಬೇಕಾದ ಅನುದಾನಗಳನ್ನು ಹೆಚ್ಚಳ ಮಾಡದೇ ಖಾಸಗಿ ಸಂಸ್ಥೆಗಳಿಗೆ ಕೊಡುವ ಮೂಲಕ ಯೋಜನೆಯನ್ನು ಬಲಹೀನಗೊಳಿಸಲಾಗುತ್ತಿದೆ. ಇಸ್ಕಾನ್ ಗೆ ಬಿಸಿಯೂಟ ಕಾರ್ಯಕ್ರಮ ನೀಡುವ ಪ್ರಸ್ತಾಪವನ್ನು ಕೈಬಿಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾನು ನೀಡಿದ ಆಶ್ವಾಸನೆಯಂತೆ ಬಿಸಿಯೂಟ ಕಾರ್ಮಿಕರಿಗೆ 7 ಸಾವಿರ ರೂ. ವೇತನ ನೀಡಬೇಕು, ಕೆಪಿಎಸ್ ಶಾಲೆ, ಇಸ್ಕಾನ್, ಮಠ, ಇನ್ನಿತರ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಮೂಲಕ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವುದರಿಂದ ಕೆಲಸದ ಭದ್ರತೆ ಒದಗಿಸಬೇಕು. ನಿವೃತ್ತ ಬಿಸಿಯೂಟ ಸಿಬ್ಬಂದಿಗಳಿಗೆ ಇಡುಗಂಟಿನೊಂದಿಗೆ ಮಾಸಿಕ ಪಿಂಚಣಿ 10 ಸಾವಿರ ನೀಡಬೇಕು. ಅಕ್ಷರ ದಾಸೋಹ ಯೋಜನೆ ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಬಿಸಿಯೂಟ ನೌಕರರಿಗೆ ನೀಡಿ, ಈ ನೌಕರರನ್ನು ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ವಿ.ಎಸ್.ಸುಮಿತ್ರಾ, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಡಿ.ಎಸ್.ಸರೋಜ, ಕಾರ್ಯದರ್ಶಿ ಇಂದಿರಾ ಹೆಚ್.ಟಿ., ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕುಸುಮ ಹೆಚ್.ಸಿ., ಪದಾಧಿಕಾರಿಗಳಾದ ಲಲಿತಾ ಸಿ.ಕೆ., ಇಂದಿರಾ, ಲತಾ ಎ.ಕೆ ಮತ್ತಿತರರು ಉಪಸ್ಥಿತರಿದ್ದರು.









