ಮಡಿಕೇರಿ NEWS DESK ಜು.11 : ಗ್ರಾಮೀಣ ಭಾಗದ ಬಡವರು, ಕಾರ್ಮಿಕ ವರ್ಗ ಹಾಗೂ ದುರ್ಬಲ ವರ್ಗದ ಮಂದಿ ಮತದಾರರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಹೋಬಳಿ ಮಟ್ಟದಲ್ಲೆ “ಮತದಾರರ ಅಧಿಕೃತ” ದಾಖಲೆ ಒದಗಿಸಲು ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಡಿ ಭಾರತದ ಯಾವೊಬ್ಬ ಪ್ರಜೆಯೂ ಮತದಾನದಿಂದ ವಂಚಿತರಾಗಬಾರದು. ಪ್ರಸ್ತುತ ಎಸ್ಐಆರ್ಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಮನೆ ಮನೆಗೆಗಳಿಗೆ ತಲುಪಿಸಲಾಗಿದ್ದರು, ಅದನ್ನು ಸಮರ್ಪಕವಾಗಿ ತುಂಬುವ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲದೆ ಗೊಂದಲ ಸೃಷ್ಟಿಯಾಗಿದೆ. ಎಸ್ಐಆರ್ ಹಿನ್ನೆಲೆಯಲ್ಲಿ ಅರ್ಜಿಗಳನ್ನು ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ತುಂಬುವ ಸಲುವಾಗಿ ಮತದಾರರು, ಈ ಬಗ್ಗೆ ಮಾಹಿತಿ ತಿಳಿದವರ ಬಳಿಗೆ ತೆರಳಿ ಅರ್ಜಿ ಭರ್ತಿ ಮಾಡಿಸಿಕೊಳ್ಳುತ್ತಾರೆ. ಇದನ್ನೆ ಪ್ರಮುಖವಾಗಿರಿಸಿಕೊಂಡು ವಿಪಕ್ಷಗಳು ಗೊಂದಲ ಸೃಷ್ಟಿಸಿರುವುದಾಗಿ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ ಟಿ.ಪಿ.ರಮೇಶ್ ಅವರು ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ದೊರಕಬೇಕು ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಶ್ವತ ವಾಸ ದೃಢೀಕರಣ ಪತ್ರ ನೀಡುವುದರಲ್ಲಿ ತಪ್ಪೇನಿಲ್ಲ. ಪ್ರಸ್ತುತ ಎಸ್ಐಆರ್ ಅರ್ಜಿಗಳ ವಿತರಣೆ ಮತ್ತು ಅದನ್ನು ಭರ್ತಿ ಮಾಡಿ ಹಿಂದಿರುಗಿಸುವಲ್ಲಿನ ಸಮಸ್ಯೆಗಳನ್ನು ಖುದ್ದು ಚುನಾವಣಾ ಅಧಿಕಾರಿಗಳು, ಮುಖ್ಯಸ್ಥರು ಸರಿಪಡಿಸಬೇಕೆಂದು ಒತ್ತಾಯಿಸಿದರು. ಪ್ರಸ್ತುತ ಬಿಎಲ್ಓಗಳು ಮನೆ ಮನೆಗಳಿಗೆ ಅರ್ಜಿಗಳನ್ನು ತಲುಪಿಸುತ್ತಿದ್ದಾರೆಯೇ ಹೊರತು, ಅವುಗಳನ್ನು ಭರ್ತಿ ಮಾಡುವ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸುತ್ತಿಲ್ಲ, ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ. ಈ ಹಿಂದೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ಹಂತದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಎಸ್ಐಆರ್ ವಾರ್ ರೂಂ ಅಧ್ಯಕ್ಷ ತೆನ್ನಿರ ಮೈನಾ ಅವರು ಮಾತನಾಡಿ, ಎಸ್ಐಆರ್ಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಜಿಲ್ಲೆಯ ಬೂತ್ಗಳಿಗೆ ಸಂಬಂಧಿಸಿದಂತೆ 554 ಬಿಎಲ್ಎ-2ಗಳನ್ನು ನಿಯುಕ್ತಿ ಮಾಡಿದೆ. ಇವರಿಗೆ ಎಸ್ಐಆರ್ಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ನೀಡಲಾಗಿದ್ದು, ಇವರು ಮತದಾರರಿಗೆ ಅಗತ್ಯ ನೆರವನ್ನು ನೀಡಲಿದ್ದಾರೆ. ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಬಿಎಲ್ಎ-1 ಆಗಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಸಕ ಡಾ.ಮಂತರ್ ಗೌಡ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ಸಾಮಾಜಿಕ ಜಾಲತಾಣ ಘಟಕದ ಸಂಚಾಲಕ ಸೂರಜ್ ಹೊಸೂರು ಉಪಸ್ಥಿತರಿದ್ದರು.








