
ಮಡಿಕೇರಿ ಜು.11 NEWS DESK : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೆ ರಾಜ್ಯ ಕಾಂಗ್ರೆಸ್ ಸರಕಾರ “ಶಾಶ್ವತ ವಾಸ ದೃಢೀಕರಣ ಪತ್ರ”(ಪಿಆರ್ಸಿ) ಆದೇಶ ಹೊರಡಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು, ಈ ಕುರಿತು ಬಿಜೆಪಿ ಪಕ್ಷ ಜಿಲ್ಲೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ. ಎಸ್ಐಆರ್ಗೆ ಪೂರಕ ದಾಖಲೆಯಾಗಿ ಶಾಶ್ವತ ವಾಸ ದೃಢೀಕರಣ ಪತ್ರವನ್ನು ತಹಸೀಲ್ದಾರರ ಮೂಲಕ ನೀಡಲು ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಕೇಂದ್ರ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜ್ಯ ಸರಕಾರ ಈ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಸರಕಾರ ಪಿಆರ್ಸಿ ಮೂಲಕ ಅಸ್ಸಾಮಿಗರ ಹೆಸರಿನಲ್ಲಿ ನೆಲೆಸಿ ನಕಲಿ ಆಧಾರ್ ಕಾರ್ಡ್ಗಳನ್ನು ಹೊಂದಿಕೊಂಡಿರುವ ಬಾಂಗ್ಲಾ ದೇಶಿಗರು ಸೇರಿದಂತೆ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸಂವಿಧಾನಕ್ಕೆ ವಿರುದ್ಧವಾದ ರಾಜ್ಯ ಸರ್ಕಾರದ ಪಿಆರ್ಸಿ ಜಾರಿಯಾದಲ್ಲಿ ಅಕ್ರಮ ವಲಸಿಗರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶ ಒದಗಿಸಿದಂತಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಮುಖ್ಯವಾಗಿದ್ದರೂ, ಕಾಂಗ್ರೆಸ್ ಪ್ರ್ರಮುಖರು ಎಸ್ಐಆರ್ಗೆ ಆಧಾರ್ ಅಗತ್ಯವೆಂದು ಒತ್ತಾಯಿಸುತ್ತಿರುವುದು ಸರಿಯಲ್ಲ. 2002ರ ಮತಪಟ್ಟಿಯಲ್ಲಿ ಹೆಸರಿಲ್ಲದೆ, 2025ರ ಮತ ಪಟ್ಟಿಯಲ್ಲಿ ಹೆಸರಿದೆ ಎಂದಾದರೆ, ಅವರ ತಂದೆ, ತಾಯಿಯ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ನಮೂದು ಮಾಡಬೇಕಾಗುತ್ತದೆ. ಎರಡೂ ಮತಪಟ್ಟಿಯಲ್ಲಿ ಹೆಸರು ಇಲ್ಲವೆಂದಾದರೆ ಚುನಾವಣಾ ಆಯೋಗ ನಿಗದಿ ಪಡಿಸಿರುವ 11 ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಹಿನ್ನೆಲೆ ಕಾಂಗ್ರೆಸ್ ಪಿಆರ್ಸಿ ಆದೇಶ ಹೊರಡಿಸುವ ಮೂಲಕ ಅಕ್ರಮ ವಲಸಿಗರಿಗೆ ಪರೋಕ್ಷವಾಗಿ ನೆರವಾಗುತ್ತಿದೆ ಎಂದು ಕೆ.ಜಿ.ಬೋಪಯ್ಯ ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಳಪ್ಪ ಅವರು ಮಾತನಾಡಿ, ಪಿಆರ್ಸಿ ಮೂಲಕ ಅಕ್ರಮ ವಲಸಿಗರನ್ನು ದೇಶದ ಪ್ರಜೆಯನ್ನಾಗಿ ಮಾಡಿದಲ್ಲಿ ಈ ರಾಷ್ಟ್ರದ ನೈಜ ಪ್ರಜೆಗಳು ಪಡೆಯಬೇಕಾದ ರಾಜ್ಯ ಮತ್ತು ಕೇಂದ್ರದ ಸೌಲಭ್ಯಗಳು ಅಕ್ರಮ ವಲಸಿಗರ ಪಾಲಾಗುತ್ತದೆ. ಉದ್ಯೋಗಾವಕಾಶಗಳನ್ನು ಅವರು ಪಡೆಯುವ ಸಾಧ್ಯತೆಗಳಿದೆ. ಪಿಆರ್ಸಿ ಕೇವಲ ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್ ಹಾಗೂ ಮಾಧ್ಯಮ ವಕ್ತಾರ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.









