
ಮಡಿಕೇರಿ NEWS DESK ಜು.13 : ದೇಶ ಸೇವೆ ಮಾಡಿ ತವರಿಗೆ ಮರಳಿದ ಅರೆಸೇನಾ ಪಡೆಯ ನಿವೃತ್ತ ಯೋಧರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕೊಡಗು ಜಿಲ್ಲಾ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ. ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ.ಯತೀಶ್ ಅವರು ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ನಿವೇಶನ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದೇಶ ಸೇವೆ ಮಾಡಿದ ನಿವೃತ್ತ ಯೋಧರಿಗೆ ನ್ಯಾಯಯುತವಾಗಿ ಸಿಗಬೇಕಾದ ಭೂಮಿಯನ್ನು ಹಂಚಿಕೆ ಮಾಡದೆ ತೊಂದರೆ ನೀಡುತ್ತಿರುವುದು ವಿಪರ್ಯಾಸ. ಅರೆಸೇನಾಪಡೆಯ ಯೋಧರ ಸ್ಮಾರಕ ಭವನ, ಕ್ಯಾಂಟೀನ್ ವ್ಯವಸ್ಥೆ ಮತ್ತು ಕಚೇರಿಗಾಗಿ ಸ್ವಂತ ನಿವೇಶನದ ಅಗತ್ಯವಿದ್ದು, ಸರಕಾರ ಯಾವುದೇ ತಕರಾರಿಲ್ಲದೆ ಜಾಗ ಮಂಜೂರಾತಿ ಮಾಡಬೇಕೆಂದು ಮನವಿ ಮಾಡಿದರು. ನಿವೃತ್ತ ಯೋಧರಿಗೆ ಕೇಂದ್ರ ಸರಕಾರದ ಮೂಲಕ ದೊರೆಯುವ ಆರೋಗ್ಯ ಸೇವೆ ಮತ್ತು ವಿವಿಧ ಸೌಲಭ್ಯಗಳ ಕುರಿತು ಎಂ.ಜಿ.ಯತೀಶ್ ವಿವರಿಸಿದರು. ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಅರೆಸೇನಾಪಡೆಯ ಹಾಲಿ ಹಾಗೂ ಮಾಜಿ ಯೋಧರಿದ್ದಾರೆ. ಒಕ್ಕೂಟ ರಚನೆಯಾಗಿ 13 ವರ್ಷಗಳಾಗಿದ್ದರೂ 850 ಮಂದಿ ಮಾತ್ರ ಸದಸ್ಯತ್ವ ಪಡೆದಿದ್ದಾರೆ. ಸರ್ವರೂ ಸದಸ್ಯತ್ವ ಪಡೆದುಕೊಳ್ಳುವಂತೆ ಕೋರಿದರು. ಒಕ್ಕೂಟದ ಉಪಾಧ್ಯಕ್ಷ ಪುಲಿಯಂಡ ಎಂ.ಚAಗಪ್ಪ, ಪದಾಧಿಕಾರಿಗಳಾದ ಜಿ.ಕೆ.ದಿನೇಶ್ ಕುಮಾರ್ ಹಾಗೂ ನೂರೇರಾ ಎಂ.ಭೀಮಯ್ಯ ಅವರುಗಳು ಮಾತನಾಡಿ ನಿವೃತ್ತ ಯೋಧರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಮಹಾಸಭೆಯಲ್ಲಿ ನಿವೃತ್ತ ಹಿರಿಯ ಯೋಧರಾದ ಬಿ.ಡಿ.ಗೋಪಾಲ, ಎಂ.ಎ.ಪೂಣಚ್ಚ, ಸಿ.ಜೆ.ಬೋಪಯ್ಯ, ಪಿ.ಎಂ.ಪೂವಯ್ಯ ಹಾಗೂ ಎಂ.ಕೆ.ಅಪ್ಪಯ್ಯ ಅವರುಗಳÀನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಮಾಜಿ ಯೋಧ ಮರ್ವಿನ್ ಕೊರಿಯಾ ಅವರು ರೂ.60 ಸಾವಿರ ಮೌಲ್ಯದ ಗಣಕ ಯಂತ್ರವನ್ನು ಉಚಿತವಾಗಿ ಒಕ್ಕೂಟಕ್ಕೆ ನೀಡಿದರು. ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಪುಟ್ಟೇಗೌಡ, ಮನೋಹರ, ಲೋಕೇಶ್, ತಿಮ್ಮಯ್ಯ, ಹರೀಶ್ ಕುಮಾರ್ ಗೌಡ, ನಳಿನಿ, ಗೋಪಾಲಕೃಷ್ಣ, ಅಶೋಕ್, ಕಾರ್ಯಪ್ಪ, ಪಿ.ಎಂ.ಲೋಕೇಶ್, ಕುದುಪಜೆ ಚಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ನಿರ್ದೇಶಕ ಬಿ.ಎನ್.ರಾಜಶೇಖರ್ ಸ್ವಾಗತಿಸಿ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಬಿ.ಎಂ.ರವೀoದ್ರ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ತಂಗಮ್ಮ ನಿರೂಪಿಸಿ, ನಿರ್ದೇಶಕಿ ಎಸ್.ಎಸ್.ಲೀಲಾವೇಣಿ ವಂದಿಸಿದರು. ಮೃತಪಟ್ಟ ಒಕ್ಕೂಟದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.








