
ಸೋಮವಾರಪೇಟೆ ಏ.15 NEWS DESK : ಐಸಿಎಆರ್–ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿಯಲ್ಲಿ ಅಭಿವೃದ್ಧಿಪಡಿಸಲಾದ ‘ಅರ್ಕಾ ಕೂರ್ಗ್ ರವಿ’ ಹಾಗೂ ‘ಅರ್ಕಾ ಸುಪ್ರೀಂ’ ಬೆಣ್ಣೆ ಹಣ್ಣಿನ (ಬಟರ್ ಫ್ರೂಟ್) ಸುಧಾರಿತ ತಳಿಗಳ ಪರಿಚಯಕ್ಕಾಗಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಎಸ್. ವಡ್ಡಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್. ರವೀಂದ್ರ ಅವರ ತೋಟದಲ್ಲಿ ಕ್ಷೇತ್ರೋತ್ಸವ ನಡೆಯಿತು. ಕಾರ್ಯಕ್ರಮವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಟಿ.ಕೆ. ಬೆಹರಾ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬೆಣ್ಣೆ ಹಣ್ಣಿನ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿರುವ ಸುಧಾರಿತ ತಳಿಗಳು ರೈತರಿಗೆ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ತಂದುಕೊಡಲಿವೆ ಎಂದು ತಿಳಿಸಿದರು. ಸೋಮವಾರಪೇಟೆ ಸಮೀಪದ ಚೆಟ್ಟಳ್ಳಿ ಕೇಂದ್ರದಲ್ಲಿ ಹಲವು ವರ್ಷಗಳ ಸಂಶೋಧನೆಯ ಬಳಿಕ ಅಭಿವೃದ್ಧಿಪಡಿಸಲಾದ ‘ಅರ್ಕಾ ಕೂರ್ಗ್ ರವಿ’ ಮತ್ತು ‘ಅರ್ಕಾ ಸುಪ್ರೀಂ’ ತಳಿಗಳನ್ನು 2020ರಲ್ಲಿ ಬಿಡುಗಡೆ ಮಾಡಲಾಗಿತ್ತು. ಉತ್ತಮ ಗುಣಮಟ್ಟದ ಹಣ್ಣು, ಅಧಿಕ ಇಳುವರಿ ಹಾಗೂ ವಾಣಿಜ್ಯ ಕೃಷಿಗೆ ಹೊಂದುವ ಗುಣಲಕ್ಷಣಗಳಿಂದ ಈ ತಳಿಗಳು ರೈತರ ಮೆಚ್ಚುಗೆ ಪಡೆದಿವೆ. ಇದುವರೆಗೆ ಚೆಟ್ಟಳ್ಳಿ ಕೇಂದ್ರದಿಂದ ಸುಮಾರು 2 ಲಕ್ಷಕ್ಕೂ ಅಧಿಕ ಕಸಿ ಗಿಡಗಳನ್ನು ರೈತರಿಗೆ ವಿತರಿಸಲಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ.
ಹಣ್ಣುಗಳ ಯೋಜನಾ ಸಂಯೋಜಕರಾದ ಡಾ. ಪ್ರಕಾಶ್ ಪಾಟೀಲ್ ಹಾಗೂ ಡಾ. ಕರುಣಾಕರನ್ ಬೆಣ್ಣೆ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಚೆಟ್ಟಳ್ಳಿ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಂ.ಮುರುಳಿದರ್, ‘ಅರ್ಕಾ ಕೂರ್ಗ್ ರವಿ’ ಮತ್ತು ‘ಅರ್ಕಾ ಸುಪ್ರೀಂ’ ತಳಿಗಳ ವಿಶೇಷತೆ ಹಾಗೂ ಸಾಧನೆಗಳನ್ನು ವಿವರಿಸಿದರು. ಡಾ. ನಯನ್ ದೀಪಕ್ ಗಿಡಗಳ ನಿರ್ವಹಣೆ, ಡಾ. ರಾಣಿ ಎ.ಟಿ. ಕೀಟ ನಿಯಂತ್ರಣ ಹಾಗೂ ಡಾ. ಮಧು ಜಿ.ಎಸ್. ರೋಗಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು. ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಹೊನಗಲ್ ವಿದೇಶಿ ಹಣ್ಣಿನ ಬೆಳೆಗಳ ವಾಣಿಜ್ಯ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಬೆಣ್ಣೆ ಹಣ್ಣಿನ ತಳಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಯಶಸ್ವಿಯಾಗಿ ಬೆಣ್ಣೆ ಹಣ್ಣಿನ ಕೃಷಿ ನಡೆಸುತ್ತಿರುವ ಪ್ರಗತಿಪರ ರೈತ ಎಸ್. ರವೀಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಲವು ತಜ್ಞರು ಹಾಗೂ ವಿವಿಧ ಜಿಲ್ಲೆಗಳ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರೊಂದಿಗೆ ಸಂವಾದ ನಡೆಸಿದರು.









