
ವಿರಾಜಪೇಟೆ ಅ.6 NEWS DESK : ಕಾಲೇಜು ಶಿಕ್ಷಣ ಪಠ್ಯೇತರ ಚಟುವಟಿಕೆಗಳನ್ನು ತಿಳಿಸಿಕೊಡುತ್ತದೆ. ಪಾಠ ಪ್ರವಚನದೊಂದಿಗೆ ಸಾಮಾಜಿಕ ಮೌಲ್ಯಗಳಿಗೆ ಗೌರವಸೂಚಿಸಿ ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ನರಿಯಂದಡ ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ, ಕೊಡಗು ವಿಶ್ವವಿದ್ಯಾನಿಲಯ, ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಆಶ್ರಯದಲ್ಲಿ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಯುವ ಸಮೂಹವು ಪೂರಕವಾಗಿ ಪ್ರತಿಸ್ಪಂದಿಸಬೇಕು. ಕಾಲೇಜು ಶಿಕ್ಷಣದಲ್ಲಿ ಪಠ್ಯ ಪುಸ್ತಕದಲ್ಲಿರುವ ತಿರುಳು ಮತ್ತು ಮಾಹಿತಿ ತಿಳಿದುಕೊಂಡಲ್ಲಿ ಸಾಲದು. ಬಾಹ್ಯವಾದ ಚಿಂತನೆಗಳ ಬಗ್ಗೆ ಪರಿಜ್ಞಾನದ ಅರಿವು ಹೊಂದುವುದು ಮುಖ್ಯ. ಪೋಷಕರು ಮತ್ತು ಶಿಕ್ಷಕರ ಒತ್ತಡಕ್ಕೆ ಮಣಿದು ಓದುವುದು ಮುಖ್ಯವಾಗಬಾರದು. ಬದಲಿಗೆ ಆತ್ಮಗೌರವ ಶಿಕ್ಷಣದ ಹಂಬಲದೊಂದಿಗೆ ಓದುವುದು ಮುಖ್ಯವಾಗಬೇಕು. ಪ್ರಸ್ತುತ ಕಾಲಗಟ್ಟದಲ್ಲಿ ಯುವ ಸಮೂದಾಯವು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಒಳ್ಳೆಯದು ಕೆಟ್ಟದ್ದು ಅಡಕವಾಗಿದೆ. ಆದರೇ ಆಯ್ಕೆ ಉತ್ತಮ ಹವ್ಯಾಸಕ್ಕೆ, ಜೀವನಕ್ಕೆ ಮಾದರಿಯಾಗುವ ವಿಷಯಗಳಿಗೆ ಸೀಮಿತವಾಗಬೇಕು. ಶಿಬಿರದಲ್ಲಿ ಲಭಿಸುವ ಮಾಹಿತಿಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು. ಧ್ವಜರೋಹಣ ನೆರವೇರಿಸಿ ಮಾತನಾಡಿದ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಕೋಡಿರ ಎಂ.ವಿನೋದ್ ನಾಣಯ್ಯ ಶಿಸ್ತು, ಸಂಯಮ, ನಡತೆ ಹಾಗೂ ನಾಯಕತ್ವ ಕಲಿಯಲು ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳು ಜೀವನ ಸುಧಾರಣೆಯ ಅಂಶಗಳಾಗಿವೆ. ಇವುಗಳು ಶಿಬಿರಕ್ಕೆ ಮಾತ್ರ ಸೀಮಿತವಾಗದೆ ಜೀವನದ ಸಂಗಾತಿಗಳಾಗಬೇಕು. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ನಾಯಕತ್ವದ ಗುಣಮೌಲ್ಯಯುತವಾದ ಮಾಹಿತಿಗಳನ್ನು ಕಲಿಸುತ್ತದೆ. ನೀತಿಪಾಠದಂತೆ ಜೀವನದಲ್ಲಿ ರೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯುವ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಹೇಳಿದರು. ಎಡಪಾಲ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕರು ಮತ್ತು ರಾಜ್ಯ ಪ್ರಶಸ್ತಿ ವಿಜೇತರಾದ ಕೆ.ಎ.ಉಮ್ಮರ್ ಮಾತನಾಡಿ ಸಾಮಾಜಿಕ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಶಿಸ್ತುಬದ್ದ ಜೀವನದಿಂದ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ಗುಣಗಾಣಲು ಸಾದ್ಯ. ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅಹಿಂಸೆ, ಮಾದಕ ವಸ್ತುಗಳ ಉಪಯೋಗ, ಸಾಮಾಜಿಕ ಪಿಡುಗುಗಳು ದೈನಂದಿನ ಸಮಾಜವನ್ನು ವಿನಾಶಕ್ಕೆ ದೂಡುತ್ತಿದೆ. ಇವುಗಳ ವಿರುದ್ಧ ಸಮರ ಸಾರುವ ಗುರಿಯತ್ತ ವಿದ್ಯಾರ್ಥಿಗಳು ಮುಂದಾಗಬೇಕು. ಶಿಬಿರಗಳ ಆಯೋಜನೆಯಿಂದಾಗಿ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ವಿಕಸಿತ ಭೌವ್ಯ ಭಾರತದ ಕಲ್ಪನೆಯು ಸಾಕಾರವಾಗಲು ಯುವ ಸಮೂದಾಯವು ಒಂದಾಗಿ ಸಂಘಟಿತರಾಗಿ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ಹೇಳಿದರು. ಕಾವೇರಿ ಪದವಿ ಕಾಲೇಜು ವಿರಾಜಪೇಟೆ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದರು. ಸ.ಹಿ.ಪ್ರಾ. ಶಾಲೆ ಅರಪಟ್ಟು ಕಡಂಗ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭವ್ಯಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಪಟ್ಟು ಕಡಂಗ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕರಾದ ವತ್ಸಲ ಶ್ರೀಶ, ಕಾವೇರಿ ಪದವಿ ಕಾಲೇಜು ಕನ್ನಡ ಉಪನ್ಯಾಸಕರು ಮತ್ತು ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಸುನೀಲ್ ಕುಮಾರ್ ಬಿ.ಬಿ. ಉಪಸ್ಥಿತರಿದ್ದರು. ಉಪನ್ಯಾಸಕಿ ನಿರ್ಮಿತ ಅವರು ಸ್ವಾಗತಿಸಿ, ವಿಧ್ಯಾರ್ಥಿನಿ ರಮ್ಯ ನಿರೂಪಿಸಿ ಉಪನ್ಯಾಸಕರಾದ ಮಾಣಿಕ್ಯ ಅವರು ಸರ್ವರನ್ನು ವಂದಿಸಿದರು. ಕಾವೇರಿ ಕಾಲೇಜು ವಿರಾಜಪೇಟೆ ಉಪನ್ಯಾಸಕರುಗಳಾದ ಡಾ. ವೀಣಾ, ಪ್ರಿಯ ಮುದ್ದಪ್ಪ, ಮಾಣಿಕ್ಯ, ನಿರ್ಮಿತಾ ಮತ್ತು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡ0ಡ ರಾಣಿ ಗಣಪತಿ, ನಂಬಿಯಪಂಡ ವಾಣಿ ತಮ್ಮಯ್ಯ ಸೇರಿದಂತೆ ಎನ್.ಎಸ್.ಎಸ್ ಘಟಕದಶಿಬಿರಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.








