ಕುಶಾಲನಗರ, ಜ.5 : ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸತತ ಪ್ರಯತ್ನದಿಂದ ಗೆಲುವು ಸಾಧ್ಯ ಎಂದು ನಿವೃತ್ತ ಕ್ರೀಡಾ ತರಬೇತುದಾರರಾದ ಅಂತೋಣಿ ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ವಿವೇಕಾನಂದ ಎಜುಕೇಶನ್ ಟ್ರಸ್ಟ್ ಮತ್ತು ಎಂಜಿಎಂ ಪದವಿ ಕಾಲೇಜು ಆಶ್ರಯದಲ್ಲಿ ನಡೆದ ಕ್ರೀಡಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣದ ಅವಧಿಯಿಂದಲೇ ವಿದ್ಯಾರ್ಥಿಗಳು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಉದ್ಯೋಗಕ್ಕೆ ಕೂಡ ಅವಕಾಶ ಇದೆ ಎಂದ ಅವರು, ಕ್ರೀಡಾ ಪ್ರಾಧಿಕಾರದ ಮೂಲಕ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ಒದಗಿಸಿದರು.
ಕ್ರೀಡೆಯಿಂದ ರಾಷ್ಟ್ರದ ಕೀರ್ತಿಯನ್ನು ಉತ್ತುಂಗಕ್ಕೆ ತರಬಹುದು. ವಾರ್ಷಿಕ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಅವರು ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
3 ದಿನಗಳ ಕಾಲ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಕ್ರೀಡಾಕೂಟ ಹಿನ್ನೆಲೆಯಲ್ಲಿ ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಕ್ರೀಡಾಜ್ಯೋತಿ ಮೆರವಣಿಗೆಗೆ ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ.ಎ ಲಿಖಿತ ಚಾಲನೆ ನೀಡಿ ವಿದ್ಯಾರ್ಥಿ ಕೆ.ಎನ್ ದಣಿ ನೇತೃತ್ವದಲ್ಲಿ ಜ್ಯೋತಿಯನ್ನು ಕಾಲೇಜು ತನಕ ಕೊಂಡೊಯ್ಯಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮೂಲಕ ಪ್ರಕಟಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎನ್ ಶಂಭುಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಟಿ.ಎ. ಲಿಖಿತ ಮತ್ತು ಬಿ.ಎಸ್ ಕ್ಲಾರಾ ರೇಷ್ಮ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್, ವಿದ್ಯಾಸಂಸ್ಥೆಯ ಪ್ರಮುಖರಾದ ಕೆ.ಎನ್ ನಂಜಪ್ಪ ಇದ್ದರು.
ಪ್ರಾಂಶುಪಾಲರಾದ ಲಿಖಿತ ಸ್ವಾಗತಿಸಿ, ಬಿಂದುಶ್ರೀ ನಿರೂಪಣೆ ಮಾಡಿದರು. ಕೆ.ಕೆ ಶರಣ್ ಸರ್ವರನ್ನು ವಂದಿಸಿದರು.
ಕ್ರೀಡಾ ಕೂಟದಲ್ಲಿ ಹ್ಯಾಂಡ್ಬಾಲ್, ಫುಟ್ಬಾಲ್, ಕ್ರಿಕೆಟ್, ವಾಲಿಬಾಲ್, ಆಟೋಟ ಸ್ಪರ್ಧೆಗಳು ನಡೆಯಲಿವೆ.













