ಸೋಮವಾರಪೇಟೆ ಜ.12 : ಸೊಮವಾರಪೇಟೆಯ ಯಡೂರು ಗ್ರಾಮದ ಬಿ.ಟಿ.ಚನ್ನಯ್ಯ ಗೌರಮ್ಮ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಆಡಳಿತ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಥಮ ಹಾಗೂ ದ್ವಿತೀಯ ಬಿ.ಎ.ಯಲ್ಲಿ ಒಂದು ವಿಷಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವ ಬಗ್ಗೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಲವು ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಇಷ್ಟ ಬಂದಾಗ ಬರುವುದು, ಹೋಗುವುದರ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿದ ಸಂದರ್ಭ ವಸ್ತು ಸ್ಥಿತಿ ಬೆಳಕಿಗೆ ಬಂತು. ಕೆಲವು ವಿದ್ಯಾರ್ಥಿಗಳು ಆಟವಾಡುತಿದ್ದರೆ, ಉಪನ್ಯಾಸಕರುಗಳು ಕೊಠಡಿಯಲ್ಲಿ ಹರಟೆಯಲ್ಲಿ ತೊಡಗಿದ್ದರು. ಕೆಲವು ತರಗತಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರಾಗಿದ್ದು ಕಂಡು ಬಂತು.
ಈ ಸಂಧರ್ಭ ಪ್ರಾಂಶುಪಾಲರನ್ನು ಪ್ರಶ್ನಿಸಿದ ಶಾಸಕರು ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ. ಹಿಂದೆ 500-600 ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲಿ ಇಂದು 143 ವಿದ್ಯಾರ್ಥಿಗಳಿದ್ದಾರೆ. ನೀವುಗಳು ಈ ಕಾಲೇಜನ್ನು ಮುಚ್ಚಿಸಿ ಬಿಡ್ತಿರಿ ಎಂದು ಹರಿಹಾಯ್ದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಜಂಟಿ ನಿರ್ದೇಶಕರು ಹಾಗೂ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ತಕ್ಷಣವೆ ಕಾಲೇಜಿಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಕರ್ತವ್ಯ ಲೋಪ ಎಸಗಿರುವ ಉಪನ್ಯಾಸಕರನ್ನು ಅಮಾನತು ಮಾಡುವಂತೆ ಸೂಚಿಸಿದರು.
ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿರುವ ಪ್ರಾಂಶುಪಾಲರನ್ನು ತರಾಟೆಗೆ ತೆಗದುಕೊಂಡ ಶಾಸಕರು ಆಡಳಿತದಲ್ಲಿ ಬಿಗಿ ಹಿಡಿತ ಇಟ್ಟುಕೊಳ್ಳಿ, ಇಲ್ಲವಾದರೆ ಅಮಾನತು ಆಗುತ್ತಿರಾ, ಮುಂದಿನ ವಾರ ಪುನ: ಭೇಟಿ ನೀಡುವುದಾಗಿ ಶಾಸಕರು ಎಚ್ಚರಿಸಿದರು.














