ಮಡಿಕೇರಿ ಜ.31 : ಏಜೆಂಟ್ ಮಾಡಿದ ವಂಚನೆಯಿoದ ಕುವೈತ್ ನಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಕೊಡಗು ಜಿಲ್ಲಾಡಳಿತ ಯಶಸ್ವಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ನಿವಾಸಿಯಾದ ಪಾರ್ವತಿ ಎಂಬ ಮಹಿಳೆ ಕುವೈತ್ ದೇಶಕ್ಕೆ ಕೆಲಸಕ್ಕೆಂದು ಏಜೆಂಟ್ ಮೂಲಕ ತೆರಳಿದ್ದರು. ಏಜೆಂಟ್ ವಂಚನೆ ಮಾಡಿದ ಪರಿಣಾಮ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯ ಬಗ್ಗೆ ಕೊಡಗು ಜಿಲ್ಲಾಡಳಿತಕ್ಕೆ ದೂರು ಸ್ವೀಕೃತವಾದ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರಿಗೆ, ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಕರೆ ತರುವ ಜವಾಬ್ದಾರಿ ವಹಿಸಲಾಗಿತ್ತು. ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ, ಅವರಿದ್ದ ಸ್ಥಳವನ್ನು ಗುರುತಿಸಿ ಕುವೈತ್ ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ನಿರಂತರ ಸಂಪರ್ಕವನ್ನು ಸಾಧಿಸಿ ಸತತ ಪ್ರಯತ್ನದ ಮೂಲಕ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಕೊಡಗು ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಸಂತ್ರಸ್ತ ಮಹಿಳೆ ಚೆನ್ನೈ ಗೆ ತಲುಪಿದ್ದಾರೆ. ಅಲ್ಲಿಂದ ಕೊಡಗಿಗೆ ಬರುತ್ತಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.













