ಸೋಮವಾರಪೇಟೆ ಮೇ 27 : ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದ ವತಿಯಿಂದ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಿರುದ್ಯೋಗದ ಬಗ್ಗೆ ಯೋಚನೆ ಮಾಡದೆ, ಸ್ವಯಂ ಉದ್ಯೋಗ ಕಂಡುಕೊಂಡು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ವಾಹನ ಚಾಲಕರನ್ನು ನಾವೆಲ್ಲರೂ ಅಭಿನಂಧಿಸಬೇಕಾಗಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ವಾಹನ ಚಾಲಕರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಗಮನಹರಿಸಬೇಕು ಎಂದರು.
ನೂತನ ಕಟ್ಟಡ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ 5ಲಕ್ಷ ರೂ.ಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘದವರು ಕಳೆದ 30 ವರ್ಷಗಳಿಂದ ಪಟ್ಟಣದಲ್ಲಿ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಗ್ರಾಮೀಣ ಜನರಿಗೆ ಪ್ರತಿವರ್ಷ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಹೇಳಿದರು.
ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್ ಮಾತನಾಡಿ, ವಾಹನ ಚಾಲಕರ ಕನಸ್ಸಿನ ಕೂಸು ನೂತನ ಕಟ್ಟಡವಾಗಿದೆ. ನಿವೇಶನಕ್ಕೆ 26 ಲಕ್ಷ ರೂ.ಗಳು ಹಾಗೂ ಕಟ್ಟಡ ಕಾಮಗಾರಿಗೆ 23 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ. ಜನಪ್ರತಿನಿಧಿಗಳ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಆರ್.ಮಹೇಶ್, ಜೇಸಿ ಸಂಸ್ಥೆ ಅಧ್ಯಕ್ಷೆ ಎಂ.ಎ.ರುಬಿನಾ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪತ್ರಿಕಾ ಭವನ ಅಧ್ಯಕ್ಷ ಎಸ್.ಮಹೇಶ್ ಇದ್ದರು. ಚಾಲಕ ವಿನ್ಸಿ ಕಾರ್ಯಕ್ರಮ ನಿರ್ವಹಿಸಿದರು.









