ಮಡಿಕೇರಿ ಜು.8 : ರಾಜ್ಯ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಯಾವುದೇ ಅನುದಾನ ನೀಡದೆ ಇರುವುದು ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಜಿಲ್ಲೆಗೆ 400 ಬೆಡ್ನ ಸುಸಜ್ಜಿತ ಆಸ್ಪತ್ರೆಯನ್ನು ನೀಡಿ ಉದ್ಘಾಟನೆ ಹಂತಕ್ಕೆ ತಲುಪಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಘೋಷಿಸಿರುವ ಆಸ್ಪತ್ರೆಯ ಕುರಿತು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕಾಮಗಾರಿಗಾಗಿ ಹಿಂದೆ ಮಾಡಲಾದ ಭೂಮಿಪೂಜೆಗೆ ಮತ್ತೊಮ್ಮೆ ಭೂಮಿಪೂಜೆ ಮಾಡಿ ನಾವು ಮಾಡಿದ್ದೇವೆ ಎಂದು ಹೇಳುವುದು ಸರಿಯಲ್ಲ. ಈ ರೀತಿಯ ನಡೆ ದ್ವೇಷದ ರಾಜಕೀಯ ಎಂದು ಟೀಕಿಸಿದ ಅವರು, ಹಿಂದಿನ ಸರ್ಕಾರದ ಯೋಜನೆಯನ್ನು ಯತಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿ, ಬಿಟ್ಟಿ ಗ್ಯಾರಂಟಿಗಳ ಮೂಲಕ ಮತಗಳಿಸಿರುವ ಕಾಂಗ್ರೆಸ್ ಸರ್ಕಾರ ತೆರಿಗೆ ಹೆಚ್ಚಳ ಮಾಡಿ ಜನರ ಹೊರೆಯನ್ನು ಹೆಚ್ಚಿಸಿದೆ. ಸಾಲದ ಮೊತ್ತವನ್ನು ಬಜೆಟ್ನಲ್ಲಿ ತೋರಿಸಿ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿದೆ ಎಂದು ಟೀಕಿಸಿದರು.
10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿ ಕೇಂದ್ರವನ್ನು ಬೊಟ್ಟು ಮಾಡಲಾಗುತ್ತಿದೆ, ಇದು ಖಂಡನೀಯ. ವಿರಾಜಪೇಟೆ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದು, ಮನಸ್ಸು ಮಾಡಿದ್ದರೆ ಬಜೆಟ್ ನಲ್ಲಿ ಕೊಡಗಿಗೆ ಪ್ರಾತಿನಿಧ್ಯ ನೀಡಬಹುದಿತ್ತು. ಆದರೆ ಯಾವುದೇ ಕೊಡುಗೆ ನೀಡಿಲ್ಲ ಎಂದರು.









