ಮಡಿಕೇರಿ ಆ.1 : ಪರಿಶುದ್ಧ ಉಮ್ರಾ ನಿರ್ವಹಿಸಲು ಕೊಡಗು ಜಿಲ್ಲೆಯಿಂದ ತೆರಳುತ್ತಿರುವ ಸುಮಾರು 50 ಕ್ಕೂ ಅಧಿಕ ಉಮ್ರ ಯಾತ್ರಾರ್ಥಿಗಳಿಗೆ ಸುಂಟಿಕೊಪ್ಪ ಎಸ್ಎಂಎಸ್ ಅರಬಿಕ್ ಕಾಲೇಜಿನ ವತಿಯಿಂದ ಉಮ್ರಾ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.
ಎಸ್ಎಂಎಸ್ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ.ಹಮೀದ್ ಮುಸ್ಲಿಯಾರ್ ಮಾತನಾಡಿ ಎಸ್ಎಂಎಸ್ ಅರಬಿಕ್ ಕಾಲೇಜಿನ ಅಧ್ಯಕ್ಷರಾದ ಉಮ್ಮರ್ ಫೈಝಿ ಅವರ ನೇತೃತ್ವದಲ್ಲಿ ಸುಮಾರು 7 ವರ್ಷಗಳಿಂದ ನೂರಾರು ಮಂದಿಯನ್ನು ಪರಿಶುದ್ಧ ಮಕ್ಕಾಗೆ ಉಮ್ರ ನಿರ್ವಹಿಸಲು ಮತ್ತು ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮದೀನಾ ಶರೀಫನ್ನು ಸಂದರ್ಶಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿ ಕರೆ ತರುವ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದೆ ಎಂದರು.
ಸಂಸ್ಥೆಯ ಮೂಲಕ ನಡೆಯುತ್ತಿರುವ ಈ ಯಾತ್ರೆ ಪಾರದರ್ಶಕ ಮತ್ತು ಅತ್ಯುತ್ತಮ ಸೇವೆಯಾಗಿ ಯಾತ್ರೆ ಕೈಗೊಂಡವರ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕ ಮದೀನದ ಎರಡು ಹರಮ್ ಶರೀಫುಗಳ ಅತಿ ಹತ್ತಿರವೇ ಯಾತ್ರಾರ್ಥಿಗಳಿಗೆ ವಸತಿಗಳನ್ನು ಒದಗಿಸಿಕೊಡಲಾಗುತ್ತಿದೆ. ಉಮ್ರ ತವಾಫ್ ಎರಡು ಹರಮ್ ಶರೀಫ್ ಗಳಲ್ಲಿ ಜಮಾತ್ ನಮಾಜ್ ಸೇರಿದಂತೆ ಎಲ್ಲಾ ಪುಣ್ಯಕರ್ಮಗಳನ್ನು ನಿರ್ವಹಿಸಲು ಸೌಕರ್ಯವನ್ನು ಒದಗಿಸಿಕೊಡಲಾಗುತ್ತಿದೆ. ಮಕ್ಕ ಮದೀನದಲ್ಲಿರುವ ಎಲ್ಲಾ ಪುಣ್ಯ ಕೇಂದ್ರಗಳನ್ನು ಮತ್ತು ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಲು ಅನುವು ಮಾಡಿ ಕೊಡುವುದರೊಂದಿಗೆ ಉತ್ತಮ ಗುಣಮಟ್ಟದ ಸ್ಥಳೀಯ ಆಹಾರಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಮುಂದಿನ ಉಮ್ರಾ ಯಾತ್ರೆ ಸೆಪ್ಟೆಂಬರ್ 17 ರಬಿ ಉಲ್ಲವಲ್ ತಿಂಗಳ ಒಂದರಂದು ಮಕ್ಕದಲ್ಲಿ ಮತ್ತು 12ರಂದು ಪುಣ್ಯ ಪ್ರವಾದಿಯ ಮದೀನ ಶರೀಫಿನಲ್ಲಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಉಪಕಾಝಿ ಎಂ.ಎಂ.ಅಬ್ದುಲ್ಲ ಫೈಜಿ ಉದ್ಘಾಟಿಸಿದರು. ಉಪಾಧ್ಯಕ್ಷ ಸಿಪಿಎಂ.ಬಶೀರ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಉಮ್ಮರ್ ಹಾಜಿ, ಮಾದಾಪುರ ಕಾಲೇಜು ಪ್ರಾಂಶುಪಾಲ ಜೈನುದ್ದೀನ್ ಫೈಜಿ, ಪ್ರಮುಖರಾದ ಕಬೀರ್ ಫೈಜಿ, ಮುಸ್ತಫ ಹುದವಿ, ಅಬ್ಬಾಸ್ ಅಝ್ಹರಿ, ರಫೀಕ್ ಹಾಜಿ ಸುಂಟಿಕೊಪ್ಪ, ಎಸ್.ಎಂ.ಮೊಹಮ್ಮದ್ ಹಂಸ ಕರಡಿಗೋಡು ಮತ್ತಿತರ ಪರಮುಖರು ಉಪಸ್ಥಿತರಿದ್ದರು.
ಸಂಸ್ಥೆಯ ಉಪನ್ಯಾಸಕರಾದ ಉಸ್ಮಾನ್ ಫೈಜಿ ಪ್ರಾರ್ಥಿಸಿ, ಕಾರ್ಯದರ್ಶಿ ಸಿಎಂ ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಯಾತ್ರಾ ಸಂಘದ ಮುಖ್ಯಸ್ಥರಾದ ಉಮ್ಮರ್ ಫೈಜಿ ಹಾಗೂ ಹನೀಫ್ ಫೈಜಿ ರಫೀಕ್ ಬಾಕವಿ ಯಾತ್ರಾರ್ಥಿಗಳಿಗೆ ತರಬೇತಿ ನೀಡಿದರು. ಯಾತ್ರೆಗೆ ತೆರಳುವವರಿಗೆ ಕಾಲೇಜು ವತಿಯಿಂದ ನೀಡಲಾದ ಕಿಟ್ ಬ್ಯಾಗನ್ನು ಕೆ.ಎಂ.ಇಬ್ರಾಹಿಂ ವಿತರಿಸಿದರು.







