ಮಡಿಕೇರಿ ಆ.4 : ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಕಾನೂನು ಪದವೀಧರರಿಗೆ 2023-24ನೇ ಸಾಲಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಪ್ರವರ್ಗ-1, ಪ್ರವರ್ಗ-2ಎ, 3ಎ, 3ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರ.ವರ್ಗ-1 ರ ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ 2.50 ಲಕ್ಷ ಒಳಪಟ್ಟಿರಬೇಕು. ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರವರ್ಗ-1 ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರೆ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದು 2 ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರನ ವಯಸ್ಸು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ಮತ್ತು ಪ್ರವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷದ ಒಳಗಿರಬೇಕು. ಅಭ್ಯರ್ಥಿಯು ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಲ್ಪಟ್ಟಿರಬೇಕು. ಕಾನೂನು ತರಬೇತಿಯು 4 ವರ್ಷದ ಅವಧಿಯಾಗಿದ್ದು, ಮಾಸಿಕ ರೂ.4000 ರಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯ ಹಿಂದುಳಿದ ವರ್ಗದ 10 ಅಭ್ಯರ್ಥಿಗಳಿಗೆ ನೀಡಲು ಅವಕಾಶವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಲ್ಲಿ, ತರಬೇತಿ ವೆಚ್ಚಕ್ಕೆ ಶೇ.10 ಬಡ್ಡಿಯನ್ನು ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ. 100 ಛಾಪಾ ಕಾಗದದಲ್ಲಿ ಬರೆದುಕೊಡತಕ್ಕದ್ದು.
ಅರ್ಜಿಯನ್ನು ಆಗಸ್ಟ್, 31 ರೊಳಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ದೂ.ಸಂ.08272-295628 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.









