
ವಿರಾಜಪೇಟೆ ಜೂ.13 NEWS DESK : ವಿರಾಜಪೇಟೆ ಕೊಡವ ಸಮಾಜದ ಪ್ರಸ್ತುತ ಸಾಲಿನ ಮಹಾಸಭೆಯು ಜು.26 ರಂದು ಬೆಳಿಗ್ಗೆ 10.30 ಗಂಟೆಗೆ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ತಿಳಿಸಿದ್ದಾರೆ. ವಿರಾಜಪೇಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ವಿರಾಜಪೇಟೆ ಕೊಡವ ಸಮಾಜದಲ್ಲಿ ಮದುವೆ ಸಮಾರಂಭದ ದಿನದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಮುಖ್ಯ ರಸ್ತೆಗಳ ಬದಿಯಲ್ಲಿ ವಾಹನ ಅಡ್ಡಾದಿಡ್ಡಿ ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಸಮಾಜ ಅಗತ್ಯ ಕ್ರಮ ಕೈಗೊಂಡಿದ್ದು, ವಾಹನ ಸವಾರರು ಪುರಸಭೆಯ ನೀರು ವಿತರಣ ಕೇಂದ್ರದ ಸಮೀಪದ ರಸ್ತೆಯ ಬಲ ಬದಿಯಲ್ಲಿಯೂ ಮತ್ತು ಸಮಾಜದ ತ್ರೀವೇಣಿ ಶಾಲೆಯ ರಸ್ತೆ ಬದಿಯಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ಉಳಿದಂತೆ ವಾಹನ ನಿಲುಗಡೆಗೆ ನಾವು 2 ಎಕ್ರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದಿದ್ದು ಅಲ್ಲಿ ವಾಹನ ನಿಲುಗಡೆ ಮಾಡಿ ಸಹಕರಿಸಬೇಕು. ಕೆಲವು ಜನರು ಸಹಕಾರ ನೀಡದೆ ವರ್ತಿಸುವುದು ಸರಿಯಲ್ಲ. ನಂತರ ನಿಲುಗಡೆ ಸಮರ್ಪಕವಾಗಿಲ್ಲ ಎಂದು ಬಳಿಕ ಈ ವಿಚಾರದಲ್ಲಿ ಜಾಲತಾಣದಲ್ಲಿ ಆಡಳಿತ ಮಂಡಳಿಯ ವಿರುದ್ದ ಇಲ್ಲ ಸಲ್ಲದ ಟೀಕೆ ಸರಿಯಲ್ಲ ಎಂದರು. ಸಮಾಜದ ಒತ್ತಿನಲ್ಲಿರುವ ಸ್ಮಶಾನ ಜಾಗದಲ್ಲಿ ಈಗ ಸಿಲಿಕಾನ್ ವ್ಯವಸ್ಥೆಯಲ್ಲಿ ಶವ ಸಂಸ್ಕಾರ ನಡೆಯುತ್ತಿದೆ. ಇದರ ಬದಲು ಗ್ಯಾಸ್ ಬರ್ನರ್ ವ್ಯವಸ್ಥೆ ಮಾಡಲು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರನ್ನು ಕೋರಿದಾಗ 5 ಲಕ್ಷ ರೂ ಮಂಜೂರು ಮಾಡಿದ್ದಾರೆ. ಆದರೆ ತೆರಿಗೆ ಕಳೆದು ಅಂದಾಜು ಮೂರು ಲಕ್ಷ ಉಳಿಯಲಿದ್ದು ಸುಮಾರು ಒಟ್ಟು 9 ಲಕ್ಷ ರೂ ಅಗತ್ಯವಿದೆ. ಆದರಿಂದ ಮತ್ತೆ 5 ಲಕ್ಷ ರೂ ನೀಡುವಂತೆ ಅವರನ್ನು ಕೋರಿದ್ದು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಅಮ್ಮಣಿಚಂಡ ರವಿ ಉತ್ತಪ್ಪ ಹೇಳಿದರು. ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ ಬೆಂಗಳೂರು ಫೊರ್ಟಿಸ್ ಆಸ್ಪತ್ರೆಯವರು ಉದಾರವಾಗಿ ಉಚಿತ ಹೆಲ್ತ್ ಕಾರ್ಡ್ ನೀಡಿದ್ದು, ಸಮಾಜದ ಸದಸ್ಯರಿಗೆ ಇದರಲ್ಲಿ ನಾನಾ ರೀತಿಯ ರಿಯಾಯಿತಿಗಳು ಸಿಗಲಿದೆ. ಆದರಿಂದ ಸದಸ್ಯರು ಕಚೇರಿ ಅಥಾವ ಮುಂದಿನ ಮಹಾಸಭೆಯಲ್ಲಿ ಈ ಕಾರ್ಡ್ನ್ನು ಪಡೆದುಕೊಳ್ಳುವಂತೆ ಕೋರಿದರು. ಉಪಾಧ್ಯಕ್ಷ ಕಾಣತಂಡ ಜಗದಿಶ್ ಮಾತನಾಡಿ ಇತ್ತಿಚೆಗೆ ಸಮಾಜ ವಾಹನ ನಿಲುಗಡೆಗೆ ಪಡೆದ 2 ಏಕ್ರೆ ಜಾಗದ ಅಭಿವೃದ್ದಿಗೆ ಶಾಸಕ ಪೊನ್ನಣ್ಣ 10 ಲಕ್ಷ ರೂ ನೀಡಿದ್ದು ಇದರಲ್ಲಿ ಏಳು ಸಾವಿರ ಚದರ ಅಡಿ ಕೆಲಸ ಆಗಿದ್ದು ಉಳಿಕೆ ಕಾಮಗಾರಿಗೆ ಶಾಸಕರ ಅನುದಾನ ಕೋರಿದ್ದು ಶಾಸಕರು ಅನುದಾನ ನೀಡುವ ಭರವಸೆ ಇದೆ ಎಂದರು. ಸಮಾಜದ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮಾತನಾಡಿ ನಮ್ಮ ಸಮಾಜದ ವತಿಯಿಂದ ಇದೇ ಸಾಲಿನ ಸೆಪ್ಟಂಬರ್ 5 ಮತ್ತು 6 ರಂದು ಕೈಲ್ಪೂಲ್ದ್ ಹಬ್ಬದ ಪ್ರಯುಕ್ತ ಕ್ರೀಡಾಕೂಟ ಸಮಾಜದ ಆವರಣದಲ್ಲಿ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ವಿವಿಧ ಸ್ವರ್ಧೆಗಳು ನಡೆಯಲಿದೆ. ಇದರಲ್ಲಿ ಕೋಲಾಟ್, ಬೊಳಕಾಟ್ ಕತ್ತಿಯಾಟ್, ಉಮ್ಮತಾಟ್, ಪರೆಯಕಳಿ, ಸಂಬಂಧ ಅಡ್ಕುವೊ ಬಾಳೋಪಾಟ್, ದೇಶಕಟ್ಟ್ ಪಾಟ್, ತಾಲಿಪಾಟ್, ಕಪ್ಪೆಯಾಟ್ ಮಂಡೆತುಣಿ ಕಟ್ಟ್ವೊ, ಚ್ಯಾಲೆ ಕಟ್ಟುವೊ ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ವರ್ಧೆ ನಡೆಯಲಿದ್ದು ಸಮಾಜದ ಸರ್ವ ಸದಸ್ಯರು ಕುಟುಂಬ ಸಮೇತರಾಗಿ ಬಂದು ಬಾಗವಹಿಸಿ ಸಹಕರಿಸುವಂತೆ ಕೋರಿದರು.








