ನಾಪೋಕ್ಲು ಆ.15 : ಭಾಷೆ ಉಳಿದರೆ ಮಾತ್ರ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜನಾಂಗದ ಹಿರಿಯರು ಪಾಲಿಸಿಕೊಂಡು ಬಂದ ತಮ್ಮ ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಗೌಡ ಯುವ ವೇದಿಕೆ ಮಡಿಕೇರಿ ಹಾಗೂ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ಪಾರಾಣೆ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಆಟಿ ಜಂಬರ 2023 ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನಿಂದಲೂ ನಡೆದು ಬಂದ ಪದ್ಧತಿ ಪರಂಪರೆಗಳನ್ನು ಮರೆಯಬಾರದು. ಜಿಲ್ಲೆಯ ಪರಿಸರ ಉತ್ತಮವಾಗಿದ್ದು, ಸಮಾಜ ಬಾಂಧವರು ತಮ್ಮ ಭೂಮಿಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕ ರಾಗಬೇಕೆಂದರು.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಮಾತನಾಡಿ, ಮನುಷ್ಯನಾಗಿ ಹುಟ್ಟಲು ಪುಣ್ಯ ಪಡೆದಿರಬೇಕು. ಅದರಲ್ಲೂ ಜಿಲ್ಲೆಯಲ್ಲಿ ಹುಟ್ಟಿದವರು ಪುಣ್ಯವಂತರು.ಇಂದಿನ ಜನಾಂಗ ಆಚರಿಸುತ್ತಿರುವಂತಹ ಕಾರ್ಯಕ್ರಮಗಳು ಕಳೆದುಹೋದ ಸಂಪ್ರದಾಯವನ್ನು ನೆನಪಿಸುತ್ತಿವೆ.ಇಂದಿನ ದಿನಗಳಲ್ಲಿ ಸ್ವಾರ್ಥ ಮೆರೆಯುತ್ತಿದ್ದು, ಸಾಮೂಹಿಕವಾಗಿ ಒಗ್ಗೂಡುವುದು ಅಪರೂಪವಾಗುತ್ತಿದೆ. ಗೌಡ ಜನಾಂಗ ಸಂಸ್ಕೃತಿ ಸಂಪ್ರದಾಯದ ಉಳಿವಿಕೆಗಾಗಿ ಒಗ್ಗಟು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಇಂತಹ ಕಾರ್ಯಕ್ರಮಗಳು ಕೇವಲ ಮನರಂಜನೆಗಷ್ಟೇ ಅಲ್ಲ. ಒಗ್ಗಟ್ಟು ಪ್ರದರ್ಶಿಸಲು ನೆರವಾಗುತ್ತದೆ. ಸೀಮಿತ ಬದುಕಿನಲ್ಲಿ ಇರುವಷ್ಟು ದಿನ ಸುಂದರ ಬದುಕು ರೂಪಿಸುವುದು ಅತ್ಯಗತ್ಯ ಎಂದರು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ ಭಾಷೆ,ಸಂಸ್ಕೃತಿ ನಾಶವಾದರೆ ಒಂದು ಜನಾಂಗದ ನಾಗರಿಕತೆಯೆ ನಾಶವಾದಂತೆ. ಮಕ್ಕಳಿಗೆ ಮನೆಯಿಂದಲೇ ಕಲಿಸುವ ಕೆಲಸ ಆಗಬೇಕು. ಸಾಂಪ್ರದಾಯಿಕ ತಿಂಡಿ,ತಿನಿಸು, ಹಣ್ಣು ಸೇರಿದಂತೆ ಜಾನಪದ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ಮಕ್ಕಳಿಗೆ ಮೂಡಿಸಬೇಕು ಎಂದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗೌಡ ಯುವ ವೇದಿಕೆಯಿಂದ ಜಾನಪದ ಲೋಕ ನಿರ್ಮಾಣವಾಗಿದೆ. ಅಪರೂಪದ ಕಾರ್ಯಕ್ರಮದ ಮೂಲಕ ಜನರನ್ನು ಒಗ್ಗೂಡಿಸುವಲ್ಲಿ ಯುವ ವೇದಿಕೆ ಮತ್ತು ಯುವಕ ಸಂಘ ಯಶಸ್ವಿಯಾಗಿದೆ ಎಂದರು.
ಹಿಂದಿನ ಸಂಸ್ಕೃತಿಯ ಜೊತೆಗೆ ಸಾಹಿತ್ಯವನ್ನೂ ಪಸರಿಸುವಂತಹ ಕೆಲಸ ಸಹ ಆಗಬೇಕು ಎಂದು ಆಶಿಸಿದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಕೊಟ್ಟಕೇರಿಯನ ಡಾ.ಸಿ.ಪಿ.ಲಾವಣ್ಯ ಆಟಿ ತಿಂಗಳ ವಿಶೇಷತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪದ್ಧತಿ.ನಂಬಿಕೆ, ಆಚರಣೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹಿರಿಯರ ಬದುಕಿನ ಕ್ರಮ ಶಿಸ್ತುಅನ್ನು ನಾವು ಪಾಲಿಸುವುದರ ಮೂಲಕ ಮುಂದಿನ ಪೀಳಿಗೆಗೆ ಪಸರಿಸುವಂತ ಕೆಲಸ ಮಾಡಬೇಕು ಎಂದರು.
ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ ಮಾತನಾಡಿ, ಗೌಡ ಸಮಾಜದ ಕಟ್ಟಡದ ಅಭಿವೃದ್ಧಿಗೆ ಸಹಕರಿಸುವಂತೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರಿಗೆ ಮನವಿ ಪತ್ರವನ್ನು ನೀಡಿದರು.
ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್ ಮಾತನಾಡಿದರು. ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತಲೆ ಜಗದೀಶ್ ಮಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೋಟಂಬೈಲು ಬಿಂದು ಮಂತನ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಸ್ವಾಗತಿಸಿ ಮೂಡಗದ್ದೆ ವಿನೋದ್, ಪ್ಕೋಳಂಡ್ರ ಧನುಜ್, ಕಟ್ಟೆ ಮನೆ ಸೋನಾಜಿತ್ ಕಾರ್ಯಕ್ರಮ ನಿರೂಪಿಸಿದರು. ಪುದಿಯನೆರವನ ರಿಷಿತ್ ವಂದಿಸಿದರು.
ಈ ಸಂದರ್ಭ ಆಟಿ ಸಾಂಪ್ರದಾಯಿಕ ಅಡುಗೆ ತಿನಿಸುಗಳ ಸ್ಪರ್ಧೆ, ಆಟೋಟ ಪ್ರದರ್ಶನ, ಅರೆ ಭಾಷೆ ಜಾನಪದ ಹಾಡು, ಗುಂಪು ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮದ್ದು ಸೊಪ್ಪು, ಕೆಸ, ನಾಡು ಕೋಳಿ, ಎಸೆಂಡ್ ಕಡಿಮೆ ಸೇರಿದಂತೆ ವಿವಿಧ ಅಡುಗೆ ಪೈಪೋಟಿಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ನಶಿಸಿ ಹೋಗುತ್ತಿರುವ ಬಾರಿ ಅಪರೂಪದ ವಿವಿಧ ಪರಿಕರಗಲು ಹಾಗೂ ಕಾಡು ಹಣ್ಣುಗಳ ಪ್ರದರ್ಶನ ಆಟಿ ಆಟೋಟ ಪ್ರದರ್ಶನ ಗಮನ ಸೆಳೆಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಆಟಿ ಜಂಬರ ಕಾರ್ಯಕ್ರಮವನ್ನು ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ ಜ್ಯೋತಿ ಬೆಳಗಿಸಿ ಸಮಾಜದ ಆವರಣದಲ್ಲಿ ನಿರ್ಮಿಸಲಾದ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡುವುದರ ಮೂಲಕ ಉದ್ಘಾಟನೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಿಯಂಡ್ರ ಹರಿಪ್ರಸಾದ್ ವಹಿಸಿದ್ದು, ಅಯ್ಯಪ್ಪ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಬೆಳಿಯಂಡ್ರ ಲಕ್ಷ್ಮಣ್, ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತಲೆ ಜಗದೀಶ್ ಮಂದಪ್ಪ ಹಾಜರಿದ್ದರು.
ಅಯ್ಯಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಒಕ್ಕಣೆ ಯನ್ನು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ








