ಮಡಿಕೇರಿ ಆ.15 : ನನ್ನ ಮುಂದಿನ 5 ವರ್ಷದ ಅವಧಿಯಲ್ಲಿ ನನ್ನ ಚಿಂತನೆ ಈ ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಅಭಿವೃದ್ದಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟ ತೀರ್ಪಿಗೆ ಕಂಕಣಬದ್ದವಾಗಿ ಕೆಲಸ ಮಾಡುವೆ, ಎಲ್ಲಿಯೂ ಕಪ್ಪುಚುಕ್ಕೆ ಬಾರದಂತೆ ಎಚ್ಚರ ವಹಿಸುತ್ತೇನೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಕ್ಕಡ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾಚಣೆ ಮೆ.13ರಂದು ಮುಗಿದಿದೆ. ಪರವಿರೋಧಗಳು ಅಂದಿಗೆ ಕೊನೆಯಾಗಿದೆ. ಮುಂದೆ ಜನರ ಕಷ್ಟಗಳಿಗೆ ಸ್ಪಂಧಿಸುವುದು ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವುದೇ ನಮ್ಮ ಮುಂದಿರುವ ಮೂಲ ಉದ್ದೇಶ. ಅಭಿವೃದ್ದಿಯ ಚಿಂತನೆಯಲ್ಲಿ ತಮ್ಮ ಸಲಹೆ ಸೂಚನೆಗಳು ನಿರಂತರವಾಗಿರಲಿ ಸದಾ ನಾನು ನಿಮ್ಮೊಂದಿಗಿರುವೆ ಎಂದು ಸಮುದಾಯ ಭಾಂದವರಿಗೆ ಭರವಸೆ ನೀಡಿದರು.
ನಾವೆಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊಂದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸಬೇಕು. ನಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ನಾವು ಮುನ್ನಡಿಯಿಡಬೇಕು ಎಂದು ಕಿವಿಮಾತುಗಳನ್ನಾಡಿದರು.
ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ಮಾತನಾಡಿ ಕಳೆದ 20 ವರ್ಷಗಳಿಂದ ಉತ್ತಮ ಶಾಸಕನಿಗಾಗಿ ಎದುರು ನೋಡುತ್ತಿದ್ದೇವು. ಇದೀಗ ಕ್ಷೇತ್ರದ ಜನರ ಸೇವೆಗಾಗಿ ಅಜ್ಜಿಕುಟ್ಟಿರ ಕುಟುಂಬದಿಂದ ಪೊನ್ನಣ್ಣ ಆಗಮಿಸಿದ್ದಾರೆ. ಸಾಕಷ್ಟು ಒತ್ತಡದ ನಡುವೆ ಜನರ ಸೇವೆಗಾಗಿ ಮುಂದೆ ಬಂದಿದ್ದಾರೆ. ಇವರೊಂದಿಗೆ ನಾವು ಕೈಜೋಡಿಸಬೇಕು. ಇದರಿಂದ ಇವರಿಗೆ ಶಕ್ತಿ ನೀಡಿದಂತಾಗುತ್ತದೆ. ರಾಜಕೀಯವನ್ನು ಬದಿಗೊತ್ತಿ ಉತ್ತಮ ವ್ಯಕ್ತಿತ್ವವುಳ್ಳ ಪೊನ್ನಣ್ಣನವರೊಂದಿಗೆ ಸಮುದಾಯ ಭಾಂದವರು ಸದಾ ನಿಲ್ಲುವಂತಾಗಬೇಕೆಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಕೊಡವ ಸಂಪ್ರದಾಯ ವಿಶಿಷ್ಟವಾಗಿದ್ದು ಪ್ರತಿಯೊಂದರಲ್ಲೂ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು. ಅದೇ ರೀತಿ ನಮಗೆ ಇಂದು ಉತ್ತಮ ಶಾಸಕರು ನಮ್ಮವರೇ ಸಿಕ್ಕಿದ್ದಾರೆ. ಅದು ನಮಗೆ ಹೆಮ್ಮೆ. ಪೊನ್ನಣ್ಣ ಅವರದ್ದು ಅದ್ಭುತ ವ್ಯಕ್ತಿತ್ವ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಮ್ಮಾ ಬಾಣೆ, ಕೋವಿ ಹಕ್ಕು ಮುಂತಾದ ವಿಚಾರಗಳಲ್ಲಿ ಕೊಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಲವಾರು ಬೇಡಿಕೆಗಳು ಶಾಸಕರ ಮುತುವರ್ಜಿಯಿಂದ ಮುಂದಿನ ದಿನಗಳಲ್ಲಿ ಈಡೇರಲಿದೆ ಎಂದರಲ್ಲದೆ ನಮ್ಮೆಲ್ಲರ ಹಾರೈಕೆ ಅವರನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಅದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಭಾಂದವರು ಎಲ್ಲವನ್ನು ರಾಜಕೀಯವಾಗಿ ನೋಡದೆ ವ್ಯಕ್ತಿಯ ಗುಣಗಳಿಗೆ ಬೆಲೆ ನೀಡಬೇಕು. ಉತ್ತಮ ಶಾಸಕರಾಗಿರುವ ಪೊನ್ನಣ್ಣನವರಿಗೆ ಸಮುಧಾಯ ಭಾಂದವರು ಬೆಂಬಲ ನೀಡಬೇಕು. ಇವರಿಗೆ ದೇವರು ಹಾಗೂ ಜನರ ಆಶೀರ್ವಾದ ಯಾವಾಗಲೂ ಇರಬೇಕು ಎಂದರಲ್ಲದೆ ಕೊಡವ ಪೊಮ್ಮಕ್ಕ ಎಂಬುದೇ ನಮ್ಮ ಹೆಮ್ಮೆ. ಕೂಟದ ಮೂಲಕ ಉತ್ತಮ ಕಾರ್ಯಮಾಡುತ್ತಿದ್ದು ನಮ್ಮಲ್ಲಿರುವ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಮಹಿಳೆಯರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂದು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಲು ಕೂಟವನ್ನು ರಚಿಸಿದ್ದೇವೆ. ಕೂಟದ ಮೂಲಕ ಕೊಡವ ಆಚಾರ ವಿಚಾರ ಪದ್ಧತಿ ಪರಂಪರೆಯನ್ನೂ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ. ಮಹಿಳೆಯರು ಕೇವಲ ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗದೆ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಒಂದು ವೇದಿಕೆಯನ್ನು ಈ ಮೂಲಕ ಕಲ್ಪಿಸುವ ಕೆಲಸವಾಗುತ್ತದೆ. ಸಾಮಾಜಿಕ ಸೇವಾ ಕಾರ್ಯವನ್ನು ಕೂಡ ಒಕ್ಕೂಟದ ಮುಖಾಂತರ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಕೊಡವರಲ್ಲಿ ಇರುವಷ್ಟು ಹುರುಪು, ಛಲ, ಇಚ್ಛಾಶಕ್ತಿ ಇನ್ನೆಲ್ಲೂ ಇಲ್ಲ. ಕೊಡವಾಮೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಪ್ರಪಂಚದ ಯಾವ ಸಂಸ್ಕೃತಿಯ ಜೊತೆಯಲ್ಲಿ ಕೊಡವ ಸಂಸ್ಕೃತಿಯನ್ನು ಹೋಲಿಕೆ ಮಾಡಲು ಸಾದ್ಯವಿಲ್ಲ. ಅಂತಹ ವಿಭಿನ್ನ ಸಂಸ್ಕೃತಿಯಲ್ಲಿ ಹುಟ್ಟಿದ ನಾವೇ ಧನ್ಯರು. ಕೊಡವರಿಗೆ ತನ್ನದೆಯಾದ ಹಿರಿಮೆ ಗರಿಮೆ ಇದೆ. ಇಂದಿನ ಯುವ ಪೀಳಿಗೆ ಕೊಡವ ಸಂಸ್ಕೃತಿಯನ್ನು ಉಳಿಸುವ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭ ಮುಖ್ಯ ಅತಿಥಿಗಳಾಗಿದ್ದ ಶಾಸಕ ಪೊನ್ನಣ್ಣ ಹಾಗೂ ಕಾಂಚನಾ ಪೊನ್ನಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇಶದಲ್ಲೇ ವಿಭಿನ್ನ ಸಂಸ್ಕೃತಿ, ಆಚಾರಗಳನ್ನು ಹೊಂದಿರುವ ಕೊಡವರ ಸಾಂಪ್ರಾದಾಯಿಕ ಪದ್ದತಿಯಂತೆ ತಪ್ಪಡಕ ಕಟ್ಟಿ ಕಾವೇರಿ ಮಾತೆಗೆ ನಮಿಸುವುದರ ಮುಖಾಂತರ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಪಂಡ ತಾರ ಅವರು ತಪ್ಪಡಕ ಕಟ್ಟುವ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಕೊಡವ ಸಾಂಪ್ರಾದಾಯಿಕ ವಾದ್ಯದೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಪೊನ್ನಕ್ಕ ಗುಂಪಿನ ಸದಸ್ಯರು ಕೊಡವ ನೃತ್ಯಗಳನ್ನು ಮಾಡಿ ಗಮನ ಸೆಳೆದರು.
ಶಾಸಕ ಪೊನ್ನಣ್ಣ ಅವರ ಅವರ ವ್ಯಕ್ತಿ ಪರಿಚಯವನ್ನು ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಮಾಡಿದರು. ವೇದಿಕೆಯಲ್ಲಿ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ತೀತಿರ ಧರ್ಮಜ ಉತ್ತಪ್ಪ, ಅಜ್ಜಿಕುಟ್ಟಿರ ಕಾಂಚನಾ ಪೊನ್ನಣ್ಣ, ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯೆ ಬಿದ್ದಂಡ ರಾಣಿ ಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಖಜಾಂಚಿ ತಾತಂಡ ಯಶು ಕಭೀರ್ ಸೇರಿದಂತೆ ಒಕ್ಕೂಟದ ಎಲ್ಲ ಸದಸ್ಯರು ಹಾಜರಿದ್ದರು.
ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ ನಿರೂಪಿಸಿದರೆ ತಾತಂಡ ಜ್ಯೋತಿ ಪ್ರಕಾಶ್ ವಂದಿಸಿದರು.
ಪೊನ್ನಕ್ಕ ಗುಂಪಿನ ಸದಸ್ಯರಿಂದ ವೀರಯೋಧರಿಗೆ ನಮನ ಸಲ್ಲಿಸಲಾಯಿತು. ಕೊನೆಗೆ ಸಾಂಪ್ರಾದಾಯಿಕ ಕೊಡವ ವಾಲಗತಾಟ್ ಪ್ರದರ್ಶನಗೊಂಡಿತು. ಒಕ್ಕೂಟದ ಸದಸ್ಯೆಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಜಿಸಿದರು. ಕಕ್ಕಡ ವಿಶೇಷತೆಯಾಗಿ ವಿವಿಧ ರೀತಿಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.







