ಮಡಿಕೇರಿ ಆ.17 : ಕೊಡಗು ಜಿಲ್ಲೆಯ ಕಂದಾಯ ಇಲಾಖೆ ಸೇರಿದಂತೆ ಇನ್ನೂ ಕೆಲವು ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿರುವ ಚಿಂತಕ ಸೂದನ ಎಸ್.ಈರಪ್ಪ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಶಾಸಕದ್ವಯರು ಸಮರ ಸಾರಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಜನ ಇಬ್ಬರು ನೂತನ ಶಾಸಕರುಗಳನ್ನು ಅತಿ ನಿರೀಕ್ಷೆಗಳಿಂದ ಆಯ್ಕೆ ಮಾಡಿದ್ದು, ಭ್ರಷ್ಟಾಚಾರದಿಂದ ಸರ್ಕಾರಿ ಕಚೇರಿಗಳು ಮುಕ್ತವಾಗುತ್ತವೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದ್ದರಿಂದ ಶಾಸಕದ್ವಯರು ಸನ್ಮಾನ ಕಾರ್ಯಕ್ರಮಗಳಲ್ಲೇ ಮೈಮರೆಯದೆ ಜನರ ನಿರೀಕ್ಷೆಯಂತೆ ಸರ್ಕಾರಿ ಕಚೇರಿಗಳ ಅವ್ಯವಸ್ಥೆಗಳನ್ನು ಸರಿಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಕಂದಾಯ ಇಲಾಖೆ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ, ಪೌತಿ ಖಾತೆ, ಆಸ್ತಿ ವರ್ಗಾವಣೆ, ಸರ್ವೆ, ವಂಶಾವಳಿ ಸೇರಿದಂತೆ ವಿವಿಧ ಕಡತಗಳ ವರ್ಗಾವಣೆಗೆ ಹಣ ನಿಗಧಿ ಮಾಡಲಾಗಿದೆ. ಅರ್ಜಿದಾರರು ಹಾಗೂ ಅಧಿಕಾರಿಗಳ ನಡುವೆ ದಲ್ಲಾಳಿಗಳು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಣ ನೀಡಿದರೆ ಅರ್ಜಿಗಳು ವಿಲೇವಾರಿಯಾಗುತ್ತವೆ, ಇಲ್ಲದಿದ್ದರೆ ಧೂಳು ಹಿಡಿಯುತ್ತವೆ ಎಂದು ಆರೋಪಿಸಿದ್ದಾರೆ.
ಶಾಸಕದ್ವಯರು ಪ್ರಮುಖ ಇಲಾಖೆಗಳು ಹಾಗೂ ಗ್ರಾ.ಪಂ ನಿಂದ ಆರಂಭಗೊoಡು ಜಿ.ಪಂ ವರೆಗಿನ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕು. ಸ್ಥಳದಲ್ಲೇ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಬೇಕು, ವಿಲೇವಾರಿಯಾಗದೆ ಎಷ್ಟು ಅರ್ಜಿಗಳು ಬಾಕಿ ಉಳಿದಿವೆ ಎನ್ನುವುದನ್ನು ಪತ್ತೆ ಮಾಡಬೇಕು, ಸರ್ಕಾರಿ ಕಚೇರಿಗಳನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಬೇಕು. ಆ ಮೂಲಕ ಜನಪರವಾಗಿ ನಿರ್ಧಾರಗಳನ್ನು ಕೈಗೊಂಡು ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಬೇಕು ಎಂದು ಸೂದನ ಈರಪ್ಪ ಒತ್ತಾಯಿಸಿದ್ದಾರೆ.










