ಮಡಿಕೇರಿ ಆ.18 : ಮಡಿಕೇರಿ ವಿಭಾಗದ ಸೋಮವಾರಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮಗಳ ರೈತರ ಜಮೀನಿನಲ್ಲಿ ಬೀಡುಬಿಟ್ಟು ಬೆಳೆ ನಷ್ಟ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಕೃಷಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಾ ಬೆಳೆನಷ್ಟದೊಂದಿಗೆ ಸಾರ್ವಜನಿಕರಲ್ಲಿ ಜೀವ ಭಯ ತಂದೊಡ್ಡಿರುವ ಮರಿಯಾನೆಯನ್ನು ಒಳಗೊಂಡಂತೆ ಇರುವ ಒಟ್ಟು 4 ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಆ.19 ಮತ್ತು 20 ರಂದು ಕೈಗೊಳ್ಳಲಾಗುತ್ತಿದೆ.
ಸೂರ್ಲಬ್ಬಿ, ಮಂಕ್ಯ, ತಾಕೇರಿ, ಕಿರಂಗದೂರು, ಕಾಜೂರು ಮಾರ್ಗವಾಗಿ ಕ್ರಮಕೈಗೊಳ್ಳುವುದರಿಂದ ಮೇಲ್ಕಂಡ ಗ್ರಾಮಗಳೂ ಸೇರಿದಂತೆ ತಾಕೇರಿ, ಕಿರಗಂದೂರು, ಕಾಜೂರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಹಾಗೂ ತೋಟದ ಮತ್ತು ಜಮೀನಿನ ಕೆಲಸಗಳನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.
ಕಾಡಾನೆ ಓಡಿಸುವ ಸಮಯದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹೆಚ್.ಪಿ.ಚೇತನ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.









