ನಾಪೋಕ್ಲು ಆ.18 : ಮಳೆಗಾಗಿ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಅಖಿಲ ಕೊಡವ ಸಮಾಜ, ದೇವಸ್ಥಾನದ ಭಕ್ತ ಜನ ಸಂಘದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ, ವಿವಿಧ ಸಂಘ ಸಂಸ್ಥೆಗಳು ತಕ್ಕ ಮುಖ್ಯಸ್ಥರು ಸೇರಿದಂತೆ ಕೊಡಗಿನ ಮೂಲನಿವಾಸಿ ಜನಾಂಗ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಮಳೆಯ ಕೊರತೆಯಿಂದ ಭತ್ತ ಬೆಳೆಯುವ ಪ್ರದೇಶ ಪಾಳು ಬಿದ್ದಿವೆ. ಕಾಫಿ, ಕರಿಮೆಣಸು ಏಲಕ್ಕಿಗೂ ಬಿಸಿ ತಟ್ಟಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು, ಮಾನವ ಕುಲ ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಕೂಡ ನೀರಿಲ್ಲದೆ ಪರಿತಪಿಸುವ ಸೂಚನೆ ಕಾಣುತ್ತಿದೆ. ಇದನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಮಳೆ ಇಲ್ಲದೆ ಕೃಷಿಯನ್ನೇ ನಂಬಿ ಬದುಕುವ ಕೊಡಗಿನ ಜನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ನೆಲ ಬರಡಾಗಿದೆ. ಜಲ ಬತ್ತಿ ಹೋಗಿದೆ. ಜೀವಸಂಕುಲ, ಸಸ್ಯ ಸಂಕುಲ ನಾಶವಾಗಲಿದೆ. ಈಶ್ವರ ಇಗ್ಗುತ್ತಪ್ಪ ನಂಬಿದ ಜನರ ಕೈ ಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಜಿಲ್ಲೆಯ ಜನರ ರಕ್ಷಣೆ ಮಾಡುವ ಜವಾಬ್ದಾರಿ ಇಗ್ಗುತಪ್ಪನಿಗೆ ಸೇರಿದ್ದು. ಎಲ್ಲರೂ ಸುಖ, ಶಾಂತಿ ನೆಮ್ಮದಿಯಿಂದ ಬಾಳುವಂತಾಗಲು ಉತ್ತಮ ಮಳೆ ಕರುಣಿಸಿ ಸಮೃದ್ಧಿಯಾಗಲೆಂದು ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಪಾಡಿ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿ ಕುಟ್ಟಿರ ಸುಬ್ರಮಣಿ, ಗೌರವ ಕಾರ್ಯದರ್ಶಿ ಅಮ್ಮಣಿಚ0ಡ ರಾಜ ನಂಜಪ್ಪ, ಖಜಾಂಜಿ ಮಂಡೆಪಂಡ ಸುಗುಣ ಮುತ್ತಣ್ಣ, ಹಿರಿಯರಾದ ನೆಲ್ಲಮಕ್ಕಡ ಶಂಭು, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಯುಕೋ ಸಂಚಾಲಕ ಕೊಕ್ಕಳೆಮಾಡ ಮಂಜು ಚಿನ್ನಪ್ಪ, ಅಖಿಲ ಕೊಡವ ಸಮಾಜದ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ, ಅಜ್ಜಿಕುಟ್ಟಿರ ಪ್ರತ್ಯು ಸುಬ್ಬಯ್ಯ, ಬಾಚಿರ ಜಗದೀಶ್ ಉದಿಯಂಡ ಮೋಹನ್, ಅಪ್ಪಾರಂಡ ಸುಧೀರ್ ದೇವಾಲಯದ ಪಾರುತ್ಯಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ಈ ಸಂದರ್ಭ ವಿಶೇಷ ಮಹಾಪೂಜೆಯನ್ನು ಅರ್ಚಕ ಜಗದೀಶ್ ಮತ್ತು ಶ್ರೀಕಾಂತ್ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದ್ದರು.
ವರದಿ : ದುಗ್ಗಳ ಸದಾನಂದ









