ಮಡಿಕೇರಿ ಆ.18 : ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಹಾಗೂ ನಿಮಾರ್ಪಕರಾದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶಿಸಿರುವ 2ನೇ ಕನ್ನಡ ಚಲನಚಿತ್ರ “ಕಂದೀಲು” ವಿನ ಪ್ರೀಮಿಯರ್ ಶೋ ಆ.19 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಲಿದೆ.
ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ 2.30 ಗಂಟೆಗೆ ಪ್ರೀಮಿಯರ್ ಶೋ ನಡೆಯಲಿದ್ದು, ಕೊಡಗಿನ ಸಿನಿ ಪ್ರೇಮಿಗಳಿಗೆ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಿರ್ದೇಶಕಿ, ನಿಮಾರ್ಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ.
ಕಾಂತಾರ ಚಿತ್ರದಲ್ಲಿ ನಟಿಸಿರುವ ಪ್ರಭಾಕರ್ ಕುಂದರ್ ನಾಯಕ ನಟನಾಗಿ ನಟಿಸಿರುವ “ಕಂದೀಲು” ಚಿತ್ರದಲ್ಲಿ ನಟಿ ವನಿತಾ ರಾಜೇಶ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಡಗಿನ ಬಾಲನಟಿ ಈರಮಂಡ ಖುಷಿ ಕಾವೇರಮ್ಮ ಮಗಳಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈರಮಂಡ ಹರಿಣಿ ವಿಜಯ್ ಕೂಡ ನಟಿಸಿದ್ದಾರೆ.
ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಇಲ್ಲಿಯವರೆಗೆ ನಿರ್ಮಿಸಿದ ಎಲ್ಲಾ ಚಿತ್ರಗಳು ಅಂತರರಾಷ್ಟ್ರೀಯ ಸಿನಿಮಾ ಫೆಸ್ಟ್ನಲ್ಲಿ ಪ್ರದರ್ಶನ ಕಂಡಿದೆ. “ಕಂದೀಲು” ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕಿ ಯಶೋಧ ಪ್ರಕಾಶ್, ಈ ಸಿನಿಮಾ ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.










