ಮಡಿಕೇರಿ ಆ.26 : ಸಾಂಸಾರಿಕ ಭಿನ್ನಭಿಪ್ರಾಯಗಳು, ಯುವ ಜನತೆಯಲ್ಲಿ ನಡೆಯುವ ಸಂದಿಗ್ಧ ಪರಿಸ್ಥಿತಿಗಳು ಸೇರಿದಂತೆ ಸರ್ವ ಸಮಸ್ಯೆಗಳನ್ನು ಆಧ್ಯಾತ್ಮದ ಜಾಗೃತಿ ಮತ್ತು ಯೋಗದಿಂದ ಮಾತ್ರ ಉಪಶಮನ ಮಾಡಲು ಸಾಧ್ಯ ಎಂದು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ಉಡುಪ ಹೇಳಿದರು.
ಡಿವೈನ್ ಪಾರ್ಕ್ ಟ್ರಸ್ಟ್ನ ಅಂಗಸಂಸ್ಥೆಯಾದ ವಿವೇಕ ಜಾಗೃತ ಬಳಗದ ವತಿಯಿಂದ ಮೂರ್ನಾಡುವಿನ ಗೌಡ ಸಮಾಜದಲ್ಲಿ ನಡೆದ 19ನೇ ಯೋಗ ಪರ್ಯಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಹೃದಯ ವೈಶಾಲ್ಯತೆ ನಿಜವಾದ ಆರೋಗ್ಯದ ಗುಟ್ಟಾಗಿದೆ. ಆಧ್ಯಾತ್ಮಿಕ ತಳಹದಿಯ ಮೇಲೆ ಜೀವನ ನಡೆಯಬೇಕಿದೆ. ಪ್ರಸ್ತುತ ದಿನಗಳಲ್ಲಿ ವಿದೇಶಿ ಸಂಸ್ಕೃತಿ ನಮ್ಮನ್ನು ಆವರಿಸಿಕೊಂಡಿದ್ದು, ಯುವ ಸಮೂಹ ವಿದೇಶಿ ಸಂಸ್ಕೃತಿಯತ್ತ ವಾಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ವಿವೇಕ ಉಡುಪ, ಯುವ ಸಮೂಹ ಹೆಚ್ಚಿನ ಸಮಯ ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಸೆಲ್ಫಿ ಹುಚ್ಚಿಗೆ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕೃತಿಯ ನೆಲೆಬಿಡಾಗಿರುವ ಕೊಡಗು ಸೇರಿದಂತೆ ಅನೇಕ ಪ್ರದೇಶಗಳು ನಗರೀಕರಣ ಮತ್ತು ಮನುಷ್ಯನ ಹುಚ್ಚು ಆಕರ್ಷಣೆಗೆ ಬಲಿಯಾಗಿ ನಾಶವಾಗುತ್ತಿದೆ. ಇದು ಹೀಗೆ ಮುಂದುವರೆದಲ್ಲಿ ಮುಂದಿನ ಪೀಳಿಗೆ ಬರಡು ಭೂಮಿಯನ್ನು ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪ್ರಕೃತಿಯನ್ನು ರಕ್ಷಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂಚಾಲಕ ಡಿ.ಎಸ್.ಯಶವಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ಧಾರದ ಪವಿತ್ರ ಗುರಿಯನ್ನು ಡಿವೈನ್ ಪಾರ್ಕ್ ಹೊಂದಿದೆ. ಜಗತ್ತೆಗೆ ಸಾಮರಸ್ಯ ಜೀವನದ ಮಹತ್ವ, ಶಾಂತಿ, ಆತ್ಮಶಕ್ತಿ, ಜಾಗೃತಿಯನ್ನು ನೀಡುವ ಸೇವಾ ಯೋಜನೆಯೇ ಯೋಗ ಪರ್ಯಟನ ಎಂದರು.
ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ ದಿವ್ಯ ತೇಜಕುಮಾರ್, ಮಡಿಕೇರಿ ಅಧ್ಯಕ್ಷೆ ಟಿ.ಎಂ.ಪದ್ಮವೇಣಿ, ಕುಶಾಲನಗರ ಅಧ್ಯಕ್ಷ ಜಿ.ಎಸ್.ಹೆಗಡೆ, ಹಿರಿಯರಾದ ಮುತ್ತಣ್ಣ ಮೂರ್ನಾಡು ಸೇರಿದಂತೆ ವಿವೇಕ ಜಾಗೃತ ಬಳಗದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ಉಡುಪ ಅವರನ್ನು ಕಳಸ ಹಾಗೂ ವಾಲಗದೊಂದಿಗೆ ಬರಮಾಡಿಕೊಳ್ಳಲಾಯಿತು.








