ಗೋಣಿಕೊಪ್ಪ ಆ.26 : ಒಂದೇ ಧರ್ಮ, ಒಂದೇ ದೇವರು, ಒಂದೇಜಾತಿ ಎಂಬ ತತ್ವವನ್ನು ಸಾರಿದ ನಾರಾಯಣ ಗುರುಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಈ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಮಾನತೆ ಮತ್ತು ಪ್ರೀತಿಯಿಂದ ಬದುಕಲು ಸಾಧ್ಯವಾಗಬಲ್ಲದು ಎಂದು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಣಿಕೊಪ್ಪಲುವಿನ ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ನಡೆದ ಸಂತ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂದಿನ ಕಾಲದಲ್ಲಿ ಸಮಾಜದಲ್ಲಿ ಬೇರೂರಿದ್ದ ಜಾತಿಭೇದ, ಮಹಿಳಾ ಶೋಷಣೆಯ ಬಗ್ಗೆ ಧ್ವನಿ ಎತ್ತಿ ಸಮಾಧಾನಕರ ಪರಿಹಾರವನ್ನು ಕಂಡುಕೊಂಡ ಮಹಾನ್ ಸಂತ ನಾರಾಯಣಗುರು. ಅವರ ಆದರ್ಶ, ತತ್ವ ಮತ್ತು ಸಮಾಜ ಪ್ರೇಮವನ್ನು ಉಳಿಸಿಕೊಂಡರೆ ಮನುಷ್ಯ ದ್ವೇಷಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.
ದ.ಸಂ.ಸ ರಾಜ್ಯ ಸಮಿತಿ ಸದಸ್ಯ ಟಿ.ಎನ್.ಗೋವಿಂದಪ್ಪ ಮಾತನಾಡಿ, ಸಮಾಜ ಸುಧಾರಣೆಗೆ ಕ್ರಾಂತಿ ಮಾಡಿದ ಮಹಾ ಮಾನವತವಾದಿ ನಾರಾಯಣ ಗುರುಗಳ ಆದರ್ಶ ಬದುಕು ಪ್ರತಿಯೊಬ್ಬರ ಜೀವನದ ಹಾದಿಯಾಗಬೇಕು ಎಂದು ಹೇಳಿದರು.
ಜಾತಿ, ಧರ್ಮ ಮತಗಳಾಚೆಗೆ ಮನುಜ ಪ್ರೇಮವನ್ನು ಉಳಿಸಿಕೊಂಡಾಗ ಸಮಾಜ ನೆಮ್ಮದಿ ಕಾಣಬಲ್ಲದು ಎಂದು ತಿಳಿಸಿದರು.
ಕವಿ ಹಾಗೂ ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಜಾತಿ ಭೇದಗಳ ಅನಿಷ್ಠ ಪಿಡುಗನ್ನು ತೊಡೆದು ಹಾಕಲು ನಾರಾಯಣ ಗುರುಗಳ ಜೀವಿತಾವಧಿಯ ಸೇವೆ ಅಮೂಲ್ಯವಾದದ್ದು ಎಂದರು.
ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ ಇಂತಹ ಕಾಲಘಟ್ಟದಲ್ಲಿ ನಾರಾಯಣಗುರುಗಳು ಸಮಾಧಾನಕರವಾದ ಆಧ್ಯಾತ್ಮಿಕ ಹೋರಾಟದ ಮೂಲಕ ಕೆಳ ವರ್ಗದವರಿಗೆ ಮತ್ತು ಶೋಷಿತರಾಗುತಿರುವ ಮಹಿಳೆಯರಿಗೆ ಸುಭಿಕ್ಷೆಯ ಸಮಾಜ ನಿರ್ಮಿಸಲು ನಾರಾಯಣ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಗೋಣಿಕೊಪ್ಪ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಜಲೀಲ್ ನಾರಾಯಣ ಗುರುಗಳ ಬಗ್ಗೆ ಮಾತನಾಡಿದರು.
ಸವಿತ ಸಮಾಜದ ಅಧ್ಯಕ್ಷ ಗಣೇಶ್, ಸಮಾಜ ಸೇವಕ ಉದಯ್, ಸಂಘಟನಾ ಸಂಚಾಲಕ ಸಿಂಗಿ ಸತೀಶ್, ಸಾಂಸ್ಕೃತಿಕ ಸಂಘಟನೆ ಸಂಚಾಲಕ ಗಿರೀಶ್, ಜಿಲ್ಲಾ ಸಂಘಟನಾ ಸಂಚಾಲಕ ರಾಜೇಶ್, ತಾಲೋಕು ಸಮಿತಿ ಸಂಘಟನಾ ಸಂಚಾಲಕ ನಾಗೇಂದ್ರ, ಮಂಜು, ಗ್ರಾಮ ಸಂಚಾಲಕ ಚೆಲುವ, ಇಲಿಯಾಸ್, ರಘು, ಸುಬ್ಬಯ್ಯ, ನೌಶಾದ್, ನೂರ್ ಬಾಷಾ, ಪದಾಧಿಕಾರಿಗಳು ಸದಸ್ಯರುಗಳು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.








