ಮಡಿಕೇರಿ ಅ.17 : ಪಶುಪಾಲನಾ ಇಲಾಖೆಯಿಂದ ಕಟ್ಟಡ ಮತ್ತು ಯಂತ್ರೋಪಕರಣ ಸೇರಿದಂತೆ ಸುಮಾರು 181 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಾಣಿ ಪ್ರಯೋಗಾಲಯ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂತರ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಂಗಳವಾರ ಭೂಮಿಪೂಜೆ ಮಾಡಿದರು.
ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪಾಲಿಕ್ಲೀನಿಕ್ ಉಪ ನಿರ್ದೇಶಕ ಡಾ.ಸಿ.ಪಿ.ತಿಮ್ಮಯ್ಯ, ಸಹಾಯಕ ನಿರ್ದೇಶಕ ಪ್ರಸನ್ನ(ಮಡಿಕೇರಿ), ಬಾದಾಮಿ(ಸೋಮವಾರಪೇಟೆ), ಪಾಲಿಕ್ಲೀನಿಕ್ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ಅವರು ಪ್ರಾಣಿಗಳಿಗೆ ಬರುವ ಸಾಂಕ್ರಾಮಿಕ ಕಾಯಿಲೆಗಳಿಗೆ ಬೇಕಾಗುವ ಲಸಿಕೆ ದಾಸ್ತಾನು ಮಾಡುವುದು ಹಾಗೂ ವಿಷಕಾರಿ ಸಸ್ಯಗಳಿಂದ ಬರುವ ಕಾಯಿಲೆಗಳ ತಪಾಸಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.









